ಐಪಿಎಲ್ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಗುವಾಹಟಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ 20 ಓವರ್ಗಳಲ್ಲಿ 201 ರನ್ ಗಳಿಸಿತು.
ಈ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ 18 ಓವರ್ಗಳಲ್ಲಿ 202 ರನ್ ಗಳಿಸಿ 6 ವಿಕೆಟ್ಗಳಿಂದ ಜಯ ಸಾಧಿಸಿತು. ಇದರಿಂದ ಆರ್ಸಿಬಿ ತಂಡ ಸೋಲನ್ನು ಅನುಭವಿಸಬೇಕಾಯಿತು.
ಸೋಲಿನ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ರಜತ್ ಪಾಟಿದಾರ್, ಆರಂಭಿಕ ಹಂತದಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದ್ದರೂ, ನಂತರ ಚೇತರಿಸಿಕೊಂಡು 200 ರನ್ ದಾಟಿದ್ದು ಒಳ್ಳೆಯ ಸೂಚನೆ ಎಂದು ಹೇಳಿದ್ದಾರೆ.
ಪಂದ್ಯದ ಆರಂಭದಲ್ಲೇ ಆರ್ಸಿಬಿ ಸತತ ವಿಕೆಟ್ಗಳನ್ನು ಕಳೆದುಕೊಂಡು ಒತ್ತಡಕ್ಕೆ ಒಳಗಾಗಿತ್ತು. ಈ ಸಂದರ್ಭದಲ್ಲಿ ನಾಯಕನಾಗಿ ಜವಾಬ್ದಾರಿ ಹೊತ್ತ ಪಾಟಿದಾರ್, 40 ಎಸೆತಗಳಲ್ಲಿ 63 ರನ್ ಗಳಿಸಿ ತಂಡಕ್ಕೆ ನೆರವಾದರು.
ಪವರ್ಪ್ಲೇನಲ್ಲಿ ವಿಕೆಟ್ ಕಳೆದುಕೊಂಡ ಬಳಿಕವೂ ತಂಡ 201 ರನ್ ಗಳಿಸಿದ್ದು ಪಾಸಿಟಿವ್ ಅಂಶವಾಗಿದೆ. ಹೀಗಾಗಿ ಸೋಲಿನ ನಡುವೆಯೂ ಸಕಾರಾತ್ಮಕ ಅಂಶಗಳನ್ನು ಗಮನಿಸಬೇಕು ಎಂದು ಅವರು ಹೇಳಿದರು.
ಇನ್ನೂ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಆಟವೇ ಪಂದ್ಯದಲ್ಲಿ ತೀರ್ಮಾನಕವಾಗಿತ್ತು ಎಂದು ಪಾಟಿದಾರ್ ಅಭಿಪ್ರಾಯಪಟ್ಟರು. ಪವರ್ಪ್ಲೇನಲ್ಲಿ ಅವರ ಬಿರುಸಿನ ಬ್ಯಾಟಿಂಗ್ ತಂಡದ ಮೇಲೆ ದೊಡ್ಡ ಪರಿಣಾಮ ಬೀರಿತು ಎಂದು ಹೇಳಿದರು.
ಇದೇ ವೇಳೆ ಇಂಪ್ಯಾಕ್ಟ್ ಆಟಗಾರನಾಗಿ ವೆಂಕಟೇಶ್ ಅಯ್ಯರ್ ಅವರನ್ನು ಬಳಸಿದ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ತಂಡದಲ್ಲಿ ಬೌಲಿಂಗ್ ಆಯ್ಕೆಗಳು ಸಾಕಷ್ಟಿದ್ದವು. ಹೀಗಾಗಿ ಇನ್ನೊಬ್ಬ ಆಟಗಾರರನ್ನು ಬಳಸದಿರುವುದು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.



