ಕೋಲ್ಕತ್ತಾ: ಜಲ್ಪೈಗುರಿ ಮತ್ತು ರಾಮನಗರ ನಡುವಿನ ರೈಲು ಪ್ರಯಾಣದ ವೇಳೆ ಬೆಚ್ಚಿಬೀಳಿಸುವ ಘಟನೆ ಸಂಭವಿಸಿದ್ದು, ಕೈಜಾರಿ ಮಗು ರೈಲಿನಿಂದ ಕೆಳಗೆ ಬಿದ್ದರೂ ತುರ್ತು ಸರಪಳಿ ಎಳೆದರೂ ರೈಲು ನಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.
ಮಗು ಬಿದ್ದ ಕ್ಷಣವೇ ಗಾಬರಿಗೊಂಡ ತಾಯಿ ತುರ್ತು ಸರಪಳಿಯನ್ನು ಎಳೆದರೂ ರೈಲು ನಿಲ್ಲಲಿಲ್ಲ. ಬೋಗಿಯಲ್ಲಿದ್ದ ಇತರ ಪ್ರಯಾಣಿಕರೂ ಸಹಕರಿಸಿ ಪದೇ ಪದೇ ಸರಪಳಿ ಎಳೆದರೂ ಬ್ರೇಕ್ ವ್ಯವಸ್ಥೆ ಸ್ಪಂದಿಸದೇ ರೈಲು ಮುಂದುವರಿದಿದೆ. ಈ ಘಟನೆ ರೈಲ್ವೆಯ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆ ಎಬ್ಬಿಸಿದೆ.
ಘಟನೆಯ ವೇಳೆ ಬೋಗಿಯಲ್ಲಿದ್ದ ಯುವಕನೊಬ್ಬ ತಕ್ಷಣವೇ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂಪೂರ್ಣ ಘಟನೆಯನ್ನು ವೀಡಿಯೋದಲ್ಲಿ ಸೆರೆಹಿಡಿದಿದ್ದಾನೆ. “ಸರಪಳಿ ಎಳೆಯುತ್ತಿದ್ದೇವೆ, ಎಲ್ಲರಿಗೂ ಕರೆ ಮಾಡಿದ್ದೇವೆ, ಆದರೂ ರೈಲು ನಿಲ್ಲುತ್ತಿಲ್ಲ” ಎಂದು ಆತ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ.
ರೈಲು ನಿಲ್ಲದೇ ಮುಂದಿನ ನಿಲ್ದಾಣ ತಲುಪುವವರೆಗೆ ತಾಯಿ ಮಗುವಿನ ಬಳಿ ಹೋಗಲು ಸಾಧ್ಯವಾಗದೇ ಕಣ್ಣೀರಿಡುತ್ತಾ ಕುಳಿತಿದ್ದಳು. ಬಳಿಕ ಪೊಲೀಸರು ಮತ್ತು ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಗುವಿನ ಶೋಧ ಕಾರ್ಯ ಆರಂಭಿಸಿದ್ದಾರೆ.



