ತಮಿಳುನಾಡಿನ ರಾಜಕೀಯದಲ್ಲಿ ದಶಕಗಳಿಂದ ಅಚಲವಾಗಿದ್ದ ದ್ರಾವಿಡ ಸಂಪ್ರದಾಯಗಳಿಗೆ ದಳಪತಿ ವಿಜಯ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬ್ರೇಕ್ ಹಾಕಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆ ಯುಗವನ್ನು ಮೀರಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ವಿಜಯ್ ಅವರು ತಮಿಳುನಾಡಿನ ಸಾಂಪ್ರದಾಯಿಕ ರಾಜಕೀಯ ಉಡುಪು ವ್ಯವಸ್ಥೆಯನ್ನು ಬದಲಾಯಿಸಿರುವುದು ಈಗ ಪ್ರಮುಖ ಚರ್ಚೆಯಾಗಿದೆ. ಬಿಳಿ ಶರ್ಟ್-ಪಂಚೆ ಬದಲು ಸೂಟ್-ಬೂಟ್ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ರಾಜ್ಯದ ರಾಜಕೀಯ ಶೈಲಿಯಲ್ಲಿ ಮೊದಲ ಬಾರಿಗೆ ದೊಡ್ಡ ಬದಲಾವಣೆ ಎಂದು ಹೇಳಲಾಗುತ್ತಿದೆ.
ಅವರ ಕಪ್ಪು ಸೂಟ್ ಆಯ್ಕೆಯ ಹಿಂದೆ ಸೈದ್ಧಾಂತಿಕ ಸಂದೇಶವಿದೆ ಎಂದು ಹೇಳಲಾಗುತ್ತಿದ್ದು, ಪೆರಿಯಾರ್ ಅವರ ಅಸಮಾನತೆ ವಿರೋಧಿ ಚಿಂತನೆಗಳಿಗೆ ಅನುಗುಣವಾಗಿ ಕಪ್ಪು ಬಣ್ಣವನ್ನು ಪ್ರತಿರೋಧದ ಸಂಕೇತವಾಗಿ ಬಳಸಲಾಗಿದೆ ಎನ್ನಲಾಗುತ್ತಿದೆ. ಕ್ರಿಶ್ಚಿಯನ್ ಸಮುದಾಯ ಹಿನ್ನೆಲೆಯುಳ್ಳ ವಿಜಯ್, ಈ ಮೂಲಕ ತಮ್ಮ ರಾಜಕೀಯ ನಿಲುವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ ಎಂಬ ವಿಶ್ಲೇಷಣೆಯೂ ಇದೆ.
ಆದರೆ ಈ ಬದಲಾವಣೆ ವಿವಾದಕ್ಕೂ ಕಾರಣವಾಗಿದೆ. ಕೆಲ ರಾಜಕೀಯ ವಲಯಗಳು ವಿಜಯ್ ಅವರ ಸೂಟ್ ಶೈಲಿಯನ್ನು ‘ಎಲಿಟ್ ರಾಜಕೀಯ’ ಎಂದು ಪರಿಗಣಿಸುತ್ತಿದ್ದು, ಜನಸಾಮಾನ್ಯರ ಸಂಸ್ಕೃತಿಯಿಂದ ದೂರ ಸರಿಯುವ ಸೂಚನೆ ಎಂದು ಅಭಿಪ್ರಾಯಪಟ್ಟಿವೆ. ಮತ್ತೊಂದೆಡೆ, ಬೆಂಬಲಿಗರು ಇದನ್ನು ಆಧುನಿಕ ಆಡಳಿತ ಶೈಲಿ ಮತ್ತು ಹೊಸ ಯುಗದ ರಾಜಕೀಯ ಆರಂಭವೆಂದು ಶ್ಲಾಘಿಸುತ್ತಿದ್ದಾರೆ.



