ಕೋಲ್ಕತ್ತಾ: ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನಪ್ರಿಯ ಬಂಗಾಳಿ ತಿನಿಸಾದ ಝಲ್ಮುರಿ ನೀಡಿ ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದ ಜಲ್ಮುರಿ ಮಾರಾಟಗಾರ ಇದೀಗ ಬೆದರಿಕೆ ಕರೆಗಳಿಂದ ಆತಂಕಕ್ಕೀಡಾಗಿದ್ದಾನೆ.
ಜಾರ್ಗ್ರಾಮ್ನ ರಸ್ತೆಬದಿ ಝಲ್ಮುರಿ ಅಂಗಡಿ ನಡೆಸುತ್ತಿರುವ ಬಿಕ್ರಮ್ ಸೌ ಅವರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಪದೇ ಪದೇ ಫೋನ್ ಹಾಗೂ ವೀಡಿಯೊ ಕರೆಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಬಿಕ್ರಮ್ ಸೌ ತಿಳಿಸಿದ್ದಾರೆ.
ಏಪ್ರಿಲ್ 19ರಂದು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಕ್ರಮ್ ಸೌ ಅವರ ಅಂಗಡಿಗೆ ಭೇಟಿ ನೀಡಿ ಝಲ್ಮುರಿ ಸವಿದಿದ್ದರು. ಈ ಘಟನೆ ಬಳಿಕ ಝಲ್ಮುರಿ ವ್ಯಾಪಾರಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದರು.
ಈಗ ಬೆದರಿಕೆ ಕರೆಗಳು ತಮ್ಮನ್ನು ಹಾಗೂ ಕುಟುಂಬದವರನ್ನು ತೀವ್ರ ಆತಂಕಕ್ಕೀಡು ಮಾಡಿವೆ ಎಂದು ಬಿಕ್ರಮ್ ಸೌ ಹೇಳಿದ್ದಾರೆ.
ಕೆಲವರು ಕರೆ ಮಾಡಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಸುತ್ತಿದ್ದಾರೆ. ಇನ್ನೂ ಕೆಲವರು ಅಸಭ್ಯ ಮತ್ತು ನಿಂದನೀಯ ಪದಗಳನ್ನು ಬಳಸಿ ಅವಾಚ್ಯವಾಗಿ ಮಾತನಾಡುತ್ತಿದ್ದಾರೆ” ಎಂದು ಅವರು ದೂರಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ, ಪ್ರಧಾನಿ ಮೋದಿ ಭೇಟಿ ಬಳಿಕ ಬಿಕ್ರಮ್ ಸೌ ಅವರ ಅಂಗಡಿಗೆ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ದೇಶಾದ್ಯಂತ ಗಮನ ಸೆಳೆದಿರುವ ಈ ಝಲ್ಮುರಿ ಅಂಗಡಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.



