ಬೆಂಗಳೂರು: ವೈವಾಹಿಕ ಕಲಹದ ಹಿನ್ನೆಲೆ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದ ಪತ್ನಿಯ ಮೇಲಿನ ಆಕ್ರೋಶವನ್ನು ಅತ್ತೆ-ಮಾವನ ಮೇಲೆ ತೀರಿಸಿಕೊಂಡ ಘಟನೆ ಬೆಂಗಳೂರಿನ ಕುಂಬಳಗೂಡು ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಮಿಣಿಕೆ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಮಚ್ಚಿನಿಂದ ನಡೆಸಿದ ಭೀಕರ ದಾಳಿಯಲ್ಲಿ ದಂಪತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸೈಯದ್ ಅಹ್ಮದ್ (55) ಮತ್ತು ನಸ್ರಿನಾ ಭಾನು (48) ಹಲ್ಲೆಗೊಳಗಾದವರು. ಫರ್ಹಾನ್ ಮುಬಾರಕ್ ಎಂಬಾತನೇ ದಾಳಿ ನಡೆಸಿದ ಆರೋಪಿ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಫರ್ಹಾನ್ ಮುಬಾರಕ್ ಐದು ವರ್ಷಗಳ ಹಿಂದೆ ಸೈಯದ್ ಅಹ್ಮದ್ ಪುತ್ರಿಯನ್ನು ವಿವಾಹವಾಗಿದ್ದ. ಆದರೆ ಮದುವೆಯಾದ ಕೇವಲ ಮೂರು ತಿಂಗಳಲ್ಲೇ ದಂಪತಿ ಬೇರ್ಪಟ್ಟಿದ್ದರು. ನಾಲ್ಕು ತಿಂಗಳ ಹಿಂದೆ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಆರೋಪಿ ತೀವ್ರ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.
ಬಕ್ರೀದ್ ಹಬ್ಬದ ದಿನ ಪತ್ನಿಯ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಮನೆಗೆ ಬಂದಿದ್ದ ಫರ್ಹಾನ್, ಆಕೆ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಅತ್ತೆ-ಮಾವನ ಮೇಲೆ ಮಚ್ಚಿನಿಂದ ಏಕಾಏಕಿ ದಾಳಿ ನಡೆಸಿದ್ದಾನೆ. 15ಕ್ಕೂ ಹೆಚ್ಚು ಬಾರಿ ಮಚ್ಚು ಬೀಸಿದ ಪರಿಣಾಮ ದಂಪತಿಯ ತಲೆ, ಕೈ, ಕಾಲು ಹಾಗೂ ಭುಜ ಭಾಗಗಳಿಗೆ ಗಂಭೀರ ಗಾಯಗಳಾಗಿವೆ.
ಘಟನೆಯ ದೃಶ್ಯಗಳು ಅಪಾರ್ಟ್ಮೆಂಟ್ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕುಂಬಳಗೂಡು ಪೊಲೀಸರು ಪರಾರಿಯಾಗಿರುವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.



