ವಿಜಯಸಾಕ್ಷಿ ಸುದ್ದಿ, ಗದಗ: ಯಶವಂತಪುರ-ವಿಜಯಪುರ ನಡುವೆ ಸಂಚರಿಸುವ ರೈಲಿಗೆ ಗದಗ ಮೇನ್ ಜಂಕ್ಷನ್ನಲ್ಲಿ ನಿಲುಗಡೆ ಕಲ್ಪಿಸಬೇಕು ಹಾಗೂ ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ವತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ಗದಗ-ಹಾವೇರಿ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ಟ್ರೇನ್ ಸಂಖ್ಯೆ 06577/06578 ಯಶವಂತಪುರ-ವಿಜಯಪುರ ರೈಲು ವಾರಕ್ಕೆ ಎರಡು ಬಾರಿ ಸಂಚರಿಸುವಂತೆ ವಿಸ್ತರಿಸಲಾಗಿದ್ದರೂ, ಗದಗ ಬೈಪಾಸ್ನಲ್ಲಿ ನೀಡಲಾಗಿದ್ದ ಎರಡು ನಿಮಿಷಗಳ ತಾತ್ಕಾಲಿಕ ನಿಲುಗಡೆಯನ್ನೂ ರದ್ದುಪಡಿಸಿರುವುದು ಜಿಲ್ಲೆಯ ಪ್ರಯಾಣಿಕರಿಗೆ ಅನ್ಯಾಯವಾಗಿದೆ ಎಂದು ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಹಾಗೂ ವಿಜಯಪುರ ನಗರಗಳಿಗೆ ಪ್ರತಿನಿತ್ಯ ಪ್ರಯಾಣಿಸುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈ ರೈಲು ಅತ್ಯಂತ ಅನುಕೂಲಕರವಾಗಿದೆ. ಗದಗವು ಐತಿಹಾಸಿಕ ರೈಲ್ವೆ ಜಂಕ್ಷನ್ ಆಗಿದ್ದು, ಗದಗ-ಕುಷ್ಟಗಿ, ಗದಗ-ಗಂಗಾವತಿ, ಸಿಂಧನೂರು ಭಾಗಗಳ ಸಂಪರ್ಕಕ್ಕೂ ಪ್ರಮುಖ ಕೇಂದ್ರವಾಗಿದೆ. ಕೇವಲ ಇಂಜಿನ್ ಬದಲಾವಣೆಗೆ 15 ನಿಮಿಷಗಳ ಕಾಲಾವಕಾಶ ಬೇಕಿರುವ ಕಾರಣ ಗದಗ ಮೇನ್ ಜಂಕ್ಷನ್ನಲ್ಲಿ ನಿಲುಗಡೆ ನೀಡಲು ಯಾವುದೇ ತೊಂದರೆ ಇರುವುದಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿಗೆ ಸ್ಪಂದಿಸಿದ ಬಸವರಾಜ ಬೊಮ್ಮಾಯಿ ರೈಲ್ವೆ ಇಲಾಖೆಯ ಗಮನಕ್ಕೆ ವಿಷಯವನ್ನು ಮತ್ತೊಮ್ಮೆ ತಂದು ಗದಗ ಜಂಕ್ಷನ್ನಲ್ಲಿ ನಿಲುಗಡೆ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗದ ಸರ್ವೇ ಹಾಗೂ ಕಾಮಗಾರಿಯನ್ನು ಶೀಘ್ರ ಆರಂಭಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತರುವುದಾಗಿ ಹೇಳಿದರು.
ಈ ಯೋಜನೆಗೆ ವೇಗ ನೀಡುವಂತೆ ಗದಗ ಮತ್ತು ವಿಜಯನಗರ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ವಿಜಯನಗರ ಲೋಕಸಭಾ ಸದಸ್ಯ ತುಕಾರಾಮ್ ಹಾಗೂ ಹರಪನಹಳ್ಳಿ ಶಾಸಕಿಯಾದ ಲತಾ ಮಲ್ಲಿಕಾರ್ಜುನ್ ಅವರಿಗೂ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ವಿಶ್ವನಾಥ ಖಾನಾಪೂರ ತಿಳಿಸಿದರು.
ಈ ಸಂದರ್ಭದಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನರಗುಂದ ಶಾಸಕ ಹಾಗೂ ಮಾಜಿ ಸಚಿವ ಸಿ.ಸಿ. ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸತೀಶ ಪರ್ವತಗೌಡರ, ಜಗದೀಶ ಕಂಗೂರಿ, ವೆಂಕಟೇಶ ಕಬಾಡಿ, ಬಸವರಾಜ ತಳವಾರ, ಸಿದ್ದಪ್ಪ ಜರತಕನ್ನಿ, ರಜಾಕ್ ನೂರಭಾಷಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.
“ಗದಗ ಐತಿಹಾಸಿಕ ರೈಲ್ವೆ ಜಂಕ್ಷನ್. ಜಿಲ್ಲೆಯ ಸಾವಿರಾರು ಪ್ರಯಾಣಿಕರ ಹಿತದೃಷ್ಟಿಯಿಂದ ಯಶವಂತಪುರ-ವಿಜಯಪುರ ರೈಲು ಗದಗ ಮೇನ್ ಜಂಕ್ಷನ್ನಲ್ಲಿ ನಿಲ್ಲಿಸುವುದು ಅತ್ಯಗತ್ಯ.”
ವಿಶ್ವನಾಥ ಖಾನಾಪೂರ
ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ



