ವಿಜಯಸಾಕ್ಷಿ ಸುದ್ದಿ, ಗದಗ:
ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ನಂದೀಶ್ವರ ಕುಂಬಾರ ತಲೆದಂಡವಾಗಿದೆ.
ಉತ್ತರ ವಲಯದ ಐಜಿಪಿ ಎನ್ ಸತೀಶ್ ಕುಮಾರ್ ಅವರಿಂದ ಆದೇಶವಾಗಿದ್ದು, ಈ ಕುರಿತು ಎಸ್ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.
ನರಗುಂದ ಪಟ್ಟಣದಲ್ಲಿ ಕಳೆದ ಹಲವು ದಿನಗಳಿಂದ ಎರಡು ಸಮುದಾಯದ ಯುವಕರ ಮಧ್ಯ ಸಣ್ಣ ಪುಟ್ಟ ಕಲಹ ನಡೆಯುತ್ತಲೇ ಇತ್ತು. ಒಂದು ಹಂತದಲ್ಲಿ ಉರ್ದು ಶಾಲೆಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು. ಆ ನಂತರ ಪಟ್ಟಣದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣ ಇತ್ತು. ಇತ್ತೀಚಿಗೆ ಭಜರಂಗದಳದ ಮುಖಂಡ ಠಾಣೆಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ಹರಿಹಾಯ್ದು ದ್ವೇಷ ಭಾಷಣ ಮಾಡಿದ್ದ. ನಂತರ ಅಂದೇ ರಾತ್ರಿ (ಜನವರಿ 17) ಅಮಾಯಕ ಯುವಕ ಸಮೀರ ಶಹಪುರ ಕೊಲೆ ಆಗಿತ್ತು.

ಬಂಧನ ಮಾಡುವಲ್ಲಿ ಎಡವಿದ್ದ ಪೊಲೀಸರು
ಅಮಾಯಕ ಯುವಕನ ಕೊಲೆ ನಂತರ ಕೊಲೆಗಾರರನ್ನು ಬಂಧಿಸುವಲ್ಲಿಯೂ ನರಗುಂದ ಪೊಲೀಸರು ಎಡವಿದ್ದರು. ಇದೀಗ ಇಡೀ ಪ್ರಕರಣವನ್ನು ಸರಿಯಾಗಿ ನಿಭಾಯಿಸುವಲ್ಲಿ ಕರ್ತವ್ಯ ಲೋಪ ಎಸೆಗಿದ ಆರೋಪ ಹೊರಿಸಿ ನಂದೀಶ್ವರ ಕುಂಬಾರ ಅವರನ್ನು ಉತ್ತರ ವಲಯದ ಐಜಿಪಿ ಸತೀಶಕುಮಾರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.