ವಿಜಯಸಾಕ್ಷಿ ಸುದ್ದಿ, ಗದಗ: ಯುವ ಪೀಳಿಗೆಯನ್ನು ಮೌಲ್ಯಾಧಾರಿತ ಹಾಗೂ ಸದಾಚಾರದ ಜೀವನದತ್ತ ಕೊಂಡೊಯ್ಯಲು ಆಧ್ಯಾತ್ಮಿಕ ಶಿಕ್ಷಣ ಅತ್ಯಗತ್ಯ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಹೇಳಿದರು.
ನಗರದ ವಿವೇಕಾನಂದ ನಗರದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ನಡೆದ 59ನೇ ಮಾಸಿಕ ‘ಜೀವನ ದರ್ಶನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವನದ ನಿಜವಾದ ಅರ್ಥವನ್ನು ಅರಿತುಕೊಳ್ಳಲು ಆತ್ಮದರ್ಶನ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಪ್ರತಿದಿನ ಧ್ಯಾನದ ಮೂಲಕ ಆತ್ಮಸ್ವರೂಪದ ಅರಿವು ಪಡೆದು ಜೀವನವನ್ನು ಸನ್ಮಾರ್ಗದಲ್ಲಿ ಮುನ್ನಡೆಸಬೇಕು ಎಂದು ಹೇಳಿದರು. ಸಮಾಜದ ಸರ್ವತೋಮುಖ ಅಭಿವೃದ್ಧಿ ಹಾಗೂ ಯುವಜನರ ವ್ಯಕ್ತಿತ್ವ ವಿಕಸನಕ್ಕೆ ಆಧ್ಯಾತ್ಮಿಕ ಶಿಕ್ಷಣದ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ವೇದ, ಉಪನಿಷತ್ತು, ದಾಸ ಸಾಹಿತ್ಯ ಹಾಗೂ ಯೋಗ ಸಾಹಿತ್ಯದಂತಹ ನಮ್ಮ ಪರಂಪರೆಯ ಜ್ಞಾನ ಸಂಪತ್ತನ್ನು ಸಮಾಜಕ್ಕೆ ತಲುಪಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಇಂದಿನ ಜೀವನಶೈಲಿಯಲ್ಲಿ ಒತ್ತಡ ಮತ್ತು ಗೊಂದಲಗಳ ನಡುವೆ ಕುಟುಂಬಗಳು ನೆಮ್ಮದಿ ಕಳೆದುಕೊಳ್ಳುತ್ತಿವೆ. ಆಧ್ಯಾತ್ಮಿಕತೆಯ ಮೂಲಕ ಮನಸ್ಸಿಗೆ ಶಾಂತಿ ದೊರೆಯುವುದರ ಜೊತೆಗೆ ಜೀವನದಲ್ಲಿ ದೈವೀ ಗುಣಗಳ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಜಯಂತಿ ಹೇಳಿದರು.
ಹಿರಿಯರ ಅನುಭವ ಹಾಗೂ ಮಾರ್ಗದರ್ಶನ ಯುವ ಪೀಳಿಗೆಯ ಬದುಕಿಗೆ ದಿಕ್ಕು ತೋರಬಲ್ಲದು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಹಿರಿಯರು ಯುವಕರಿಗೆ ದಾರಿದೀಪವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದ ತೋಟಗಾರಿಕೆ ಇಲಾಖೆಯ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ, ಪರಿಸರ ಸಂರಕ್ಷಣೆ ಒಂದು ದಿನದ ಆಚರಣೆಗೆ ಸೀಮಿತವಾಗದೆ ನಿರಂತರ ಚಟುವಟಿಕೆಯಾಗಬೇಕು ಎಂದು ಹೇಳಿದರು.
ಮನೆ ಹಾಗೂ ಕಚೇರಿ ಆವರಣದಲ್ಲಿ ಗಿಡಗಳನ್ನು ಬೆಳೆಸುವುದು, ಬಡಾವಣೆ ಹಾಗೂ ಗ್ರಾಮಗಳಲ್ಲಿ ಉದ್ಯಾನವನಗಳ ನಿರ್ಮಾಣ ಮತ್ತು ಅವುಗಳ ಪೋಷಣೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಎ.ಟಿ. ನರೇಲ್ಲ ಮಾತನಾಡಿ, ಒತ್ತಡದ ಬದುಕಿನಲ್ಲಿ ಮಾನಸಿಕ ನೆಮ್ಮದಿ ಹಾಗೂ ಮೌಲ್ಯಾಧಾರಿತ ಜೀವನಕ್ಕೆ ಇಂತಹ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಎನ್. ಯರನಾಳ, ಡಾ. ಮಲ್ಲಿಕಾರ್ಜುನ ಉಪ್ಪಿನ, ಎಸ್.ಎಸ್. ಪಾಣಿಶೆಟ್ಟರ, ಜಿ.ಬಿ. ಅಬ್ಬಿಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕಾಶೀ ವಿಶ್ವನಾಥನ ಪಾಲಕಿ ಸೇವೆ ಭಕ್ತಿಭಾವದಿಂದ ಜರುಗಿತು.
“ದಿನದ 24 ಗಂಟೆಗಳಲ್ಲಿ ಒಂದು ಗಂಟೆಯಾದರೂ ಆತ್ಮದರ್ಶನ ಮತ್ತು ಧ್ಯಾನಕ್ಕೆ ಮೀಸಲಿಟ್ಟರೆ ಜೀವನದಲ್ಲಿ ಶಾಂತಿ, ಸಂತೃಪ್ತಿ ಮತ್ತು ಸಕಾರಾತ್ಮಕ ಪರಿವರ್ತನೆ ಸಾಧ್ಯವಾಗುತ್ತದೆ.”



