ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಹಾಡಹಗಲೇ ಯುವಕನೊಬ್ಬನ ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ ಖದೀಮರು, ಕಾರ್ಮಿಕನ ಸಮಯಪ್ರಜ್ಞೆಯಿಂದ ತಮ್ಮ ಪ್ಲಾನ್ನಲ್ಲಿ ವಿಫಲರಾಗಿರುವ ಘಟನೆ ಕಬ್ಬನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳ ಸಂಪೂರ್ಣ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಗಳು ಈಗ ವೈರಲ್ ಆಗಿವೆ.
ಬೆಂಗಳೂರು ನಗರದ ಹೃದಯಭಾಗವಾದ ಕಬ್ಬನ್ಪೇಟೆಯ 14ನೇ ಕ್ರಾಸ್ನಲ್ಲಿ ಇದೇ ತಿಂಗಳ 16ರಂದು ಈ ಘಟನೆ ನಡೆದಿದೆ. ಸಂಜೆ ವೇಳೆಯಲ್ಲಿ ಯುವಕನೊಬ್ಬ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಖದೀಮರು ಆತನನ್ನು ಹಿಂಬಾಲಿಸಿದ್ದಾರೆ.
ಯುವಕನ ಚಲನವಲನಗಳನ್ನು ಕೆಲ ಹೊತ್ತು ಗಮನಿಸಿದ ಕಳ್ಳರು, ಸೂಕ್ತ ಸಮಯ ನೋಡಿ ಆತನ ಕೈಯಲ್ಲಿದ್ದ ಮೊಬೈಲ್ ಫೋನ್ನ್ನು ಕ್ಷಣಾರ್ಧದಲ್ಲಿ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.
ಮೊಬೈಲ್ ಕಳುವಾಗಿರುವುದನ್ನು ಗಮನಿಸಿದ ಯುವಕ ಕೂಡಲೇ “ಮೊಬೈಲ್ ಕಳ್ಳರು… ಮೊಬೈಲ್ ಕಳ್ಳರು…” ಎಂದು ಕೂಗುತ್ತಾ ಆರೋಪಿಗಳ ಹಿಂದೆ ಓಡಿದ್ದಾನೆ. ಈ ವೇಳೆ ಅಲ್ಲೇ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಕಾರ್ಮಿಕನೊಬ್ಬ ಪರಿಸ್ಥಿತಿಯನ್ನು ಗಮನಿಸಿ ಸಮಯಪ್ರಜ್ಞೆ ಮೆರೆದಿದ್ದಾನೆ.
ತನ್ನ ಬಳಿ ಇದ್ದ ಮೂಟೆಯನ್ನು ಆರೋಪಿಗಳು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದತ್ತ ಎಸೆದಿದ್ದಾನೆ. ಇದರಿಂದ ಬೈಕ್ನ ನಿಯಂತ್ರಣ ಕಳೆದುಕೊಂಡ ಆರೋಪಿಗಳು ರಸ್ತೆಗೆ ಬಿದ್ದಿದ್ದಾರೆ.
ಬೈಕ್ನಿಂದ ಕೆಳಗೆ ಬಿದ್ದ ಬಳಿಕ ಆರೋಪಿಗಳು ಕದ್ದಿದ್ದ ಮೊಬೈಲ್ ಫೋನ್ನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಪರಿಣಾಮ ಯುವಕ ತನ್ನ ಮೊಬೈಲ್ ಅನ್ನು ಮರಳಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಇಡೀ ಘಟನೆ ಸಮೀಪದ ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಗರದಲ್ಲಿ ಹೆಚ್ಚುತ್ತಿರುವ ಮೊಬೈಲ್ ಸ್ನ್ಯಾಚಿಂಗ್ ಪ್ರಕರಣಗಳ ಬಗ್ಗೆ ಮತ್ತೆ ಆತಂಕ ಮೂಡಿಸಿದೆ.
ಸ್ಥಳೀಯರು ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಬಳಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.



