ವಿಜಯಸಾಕ್ಷಿ ಸುದ್ದಿ, ಗದಗ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಸಂತೋಷ ಶಿವಾಜಿ ಲಾಡ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಮರಾಠಾ ಸಮುದಾಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದೆ.
ಮರಾಠಾ ವಿದ್ಯಾವರ್ಧಕ ಸಂಘ (ರಿ) ಗದಗ-ಬೆಟಗೇರಿ ಅಧ್ಯಕ್ಷ ಅರುಣಕುಮಾರ ಬಿ. ಚವ್ಹಾಣ ಅವರ ಅಧ್ಯಕ್ಷತೆಯಲ್ಲಿ ಜೂನ್ 19ರಂದು ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಮಾಹಿತಿ ತಂತ್ರಜ್ಞಾನ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾಗಿ ಮತ್ತು ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿರುವ ಸಂತೋಷ ಲಾಡ್ ಅವರು ಆಡಳಿತಾತ್ಮಕ ಅನುಭವ ಹೊಂದಿದ್ದು, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಸಮಾನತೆ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಆಗ್ರಹಿಸಲಾಯಿತು.
ಸಭೆಯಲ್ಲಿ ಬಸವರಾಜ ಜೆ. ಹುಬ್ಬಳ್ಳಿ, ಸುರೇಶ ಎಸ್. ಬೇಂದ್ರೆ, ನರಸಪ್ಪ ಬಿ. ತುಕ್ಕಪ್ಪನವರ, ಮಾರುತಿ ಆರ್. ಅರಳಿಕಟ್ಟಿ, ಶಿವಾಜಿ ವೈ. ಗ್ವಾರಿ, ಹನಮಂತಪ್ಪ ಎಸ್. ಹೆಬ್ಬಳ್ಳಿ, ಮಂಜು ಎನ್. ಮಾನೆ, ಶಿವಾಜಿರಾವ ಪಾವನ, ಸುಭಾಷ್ ವಿ. ಕದಡಿ, ಈರಣ್ಣ ಪವಾರ, ನಾರಾಯಣರಾವ ಗಾಯಕವಾಡ ಹಾಗೂ ರಾಜಮಾತಾ ಜೀಜಾಬಾಯಿ ಮಹಿಳಾ ಮಂಡಳದ ಪದಾಧಿಕಾರಿಗಳಾದ ಶೃತಿ ವಿ. ಗ್ವಾರಿ, ಅಶ್ವಿನಿ ಜಗತಾಪ, ಕೋಕಿಲಾ ಎಸ್. ಘೋರ್ಪಡೆ, ದೀಪಾ ಮಹಡಿಕ, ಮಾಲಾ ಜಾಧವ, ಶೋಭಾ ಘಾಟಗೆ, ಜ್ಯೋತಿ ಮಾನೆ, ಪದ್ಮಾವತಿ ಸೆಳಕೆ ಹಾಗೂ ಸುರೇಖಾ ಬೇಂದ್ರೆ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.



