ವಿಜಯಸಾಕ್ಷಿ ಸುದ್ದಿ, ಗದಗ: ನಾವು ಕಣ್ಣಾರೆ ನೋಡಲು ಹಾಗೂ ಮಾತು ಕೇಳಲು ಸಾಧ್ಯವಾಗದ ಹಿರಿಯ ರಂಗಕಲಾವಿದರ ನೆನಪುಗಳನ್ನು ಮರುಕಳಿಸುವ ಅಪರೂಪದ ಪ್ರಯತ್ನ ಈ ಛಾಯಾಚಿತ್ರ ಪ್ರದರ್ಶನವಾಗಿದೆ ಎಂದು ಚಲನಚಿತ್ರ ಹಾಗೂ ಕಿರುತೆರೆ ನಟ ಅನಿರುದ್ಧ ಜತಕರ ಹೇಳಿದರು.
ಗೋಕಾಕದಲ್ಲಿ ಆಶಾಕಿರಣ ಕಲಾ ಟ್ರಸ್ಟ್, ಬೆಂಗಳೂರು ವತಿಯಿಂದ ಆಯೋಜಿಸಿದ್ದ ‘ಮರೆಯದ ಮಾಣಿಕ್ಯ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗದುಗಿನ ಚಿತ್ರಕಲಾವಿದ ಶಂಕರಗೌಡ ಪಾಟೀಲ ಸಂಗ್ರಹಿಸಿ ಪ್ರದರ್ಶಿಸಿದ ನಾಡಿನ ಹಿರಿಯ ರಂಗಕಲಾವಿದರ ಛಾಯಾಚಿತ್ರಗಳು ಹಾಗೂ ಲೇಖನಗಳ 83ನೇ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಹಳೆಯ ಛಾಯಾಚಿತ್ರಗಳು ಮತ್ತು ಲೇಖನಗಳನ್ನು ಸಂಗ್ರಹಿಸಿ ಸಾರ್ವಜನಿಕರ ಮುಂದೆ ಪ್ರದರ್ಶಿಸುವ ಮೂಲಕ ನಾಡಿನ ಕಲೆ, ಸಂಸ್ಕೃತಿ ಹಾಗೂ ರಂಗಭೂಮಿ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯ ನಡೆಯುತ್ತಿದೆ. ಇಂತಹ ಪ್ರದರ್ಶನಗಳು ಯುವಕರಿಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಆಶಾಕಿರಣ ಕಲಾ ಟ್ರಸ್ಟ್ ಸಂಸ್ಥಾಪಕಿ, ಚಲನಚಿತ್ರ ಹಾಗೂ ಕಿರುತೆರೆ ನಟಿ ಮಾಲತಿಶ್ರೀ ಮೈಸೂರು, ರಾಜಕೀಯ ಧುರೀಣ ಅಶೋಕ ಪೂಜಾರ, ಪರಶುರಾಮ ಘಸ್ತೆ, ಪಾರಿಜಾತ ಕಲಾವಿದರಾದ ಟಿ. ಈಶ್ವರ, ಮಹಾಂತೇಶ ತವಂಶಿ, ಶ್ರೀಮತಿ ರಜನಿ ಜಿರಗಾಳ, ಶೈಲಜಾ ಕೊಕ್ಕರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
‘ಮರೆಯದ ಮಾಣಿಕ್ಯ ಪ್ರಶಸ್ತಿ-2026’ ಪುರಸ್ಕೃತರಾದ ಆನಂದ ಭೀಮಪ್ಪ ಕಮತ, ರುದ್ರಪ್ಪ ವೈ. ಕರಿಗಾರ, ಬಸವರಾಜ ಕರಜಗಿಮಠ, ಸುನೀಲ ಪರಮಾರ, ಜಿ.ಕೆ. ಕಾಡೇಶಕುಮಾರ, ಬಸವರಾಜ ಪಟ್ಟಣಶೆಟ್ಟಿ, ವೀರೇಂದ್ರ ಮಧುಸೂದನ ಪತಕಿ, ಹಾಜಿ ಅಕ್ಬರಖಾನ್ ಜಮಾದಾರ, ಅಶೋಕ ಶಿವಾಜಿ ವೈದ್ಯ ಹಾಗೂ ಡಾ. ಶಾಂತಲಾ ಎಸ್. ಭರಭರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು.
“ಹಿರಿಯ ರಂಗಕಲಾವಿದರ ಜೀವನ ಸಾಧನೆಗಳನ್ನು ಇಂತಹ ಛಾಯಾಚಿತ್ರ ಪ್ರದರ್ಶನಗಳ ಮೂಲಕ ಯುವ ಪೀಳಿಗೆಗೆ ಪರಿಚಯಿಸುವುದು ನಮ್ಮ ಸಂಸ್ಕೃತಿ ಮತ್ತು ಕಲಾ ಪರಂಪರೆಯನ್ನು ಉಳಿಸುವ ಮಹತ್ವದ ಕಾರ್ಯವಾಗಿದೆ.”
— ಅನಿರುದ್ಧ ಜತಕರ, ಚಲನಚಿತ್ರ ಹಾಗೂ ಕಿರುತೆರೆ ನಟ



