ಹಗರಿಬೊಮ್ಮನಹಳ್ಳಿ: ಅಕ್ರಮವಾಗಿ ಸೇಂದಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿ, ಆತನಿಂದ 32 ಲೀಟರ್ ಸೇಂದಿ ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.
ಅಬಕಾರಿ ಅಪರ ಆಯುಕ್ತರು (ಜಾರಿ ಮತ್ತು ಅಪರಾಧ) ಬೆಳಗಾವಿ, ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಹೊಸಪೇಟೆ ವಿಭಾಗ, ಅಬಕಾರಿ ಉಪ ಆಯುಕ್ತರು ವಿಜಯನಗರ ಜಿಲ್ಲೆ ಹಾಗೂ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಜೂನ್ 24ರಂದು ರಾತ್ರಿ ಸುಮಾರು 8.30 ಗಂಟೆಗೆ ತಾಲೂಕಿನ ಹೊಸ ಆನಂದದೇವನಹಳ್ಳಿ ಗ್ರಾಮದ ಚಂದ್ರು ಡಾಬಾ ಸಮೀಪ ಅಬಕಾರಿ ಉಪನಿರೀಕ್ಷಕ-1 ಮಹಾಂತೇಶ್ ಸವಳಿ ಹಾಗೂ ಸಿಬ್ಬಂದಿ ದಾಳಿ ನಡೆಸಿದರು.
ಈ ವೇಳೆ ಕಂದು ಬಣ್ಣದ ಟಿವಿಎಸ್ ಜೂಪಿಟರ್ ಕ್ಲಾಸಿಕ್ (ಕೆಎ-41 ಇವೈ-0511) ದ್ವಿಚಕ್ರ ವಾಹನದಲ್ಲಿ ಮಾರಾಟ ಉದ್ದೇಶದಿಂದ 32 ಲೀಟರ್ ಸೇಂದಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಯಿತು. ಆರೋಪಿಯಿಂದ ಸೇಂದಿ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕ ಮಹಾಂತೇಶ್ ಸವಳಿ ಹಾಗೂ ವಲಯ ಕಚೇರಿಯ ಸಿಬ್ಬಂದಿ ವಿಠ್ಠಲ್ ಗೋಶ್ಲೀ ಸೇರಿದಂತೆ ಇತರ ಸಿಬ್ಬಂದಿ ಭಾಗವಹಿಸಿದ್ದರು.



