ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ವಿ.ವಿ.ಎಸ್. ಎಂ.ಪಿ. ಪ್ರಕಾಶ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಕೆ.ಎಲ್. ಸಾನ್ವಿ, ಶ್ರೀ ವಾಲ್ಮೀಕಿ ಕಲಾ ಸೇವಾ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹೊಸಪೇಟೆಯ ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆ ವತಿಯಿಂದ 2025-26ನೇ ಸಾಲಿನ ಪ್ರಶಸ್ತಿಗೆ ಭರತನಾಟ್ಯ ವಿಭಾಗದಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಅನುರಾಧ ವಾಲ್ಮೀಕಿ ತಿಳಿಸಿದ್ದಾರೆ.
ರಾಮನಗರದ ವೈ. ಜಯಂತಿ ಮಾಲ ಹಾಗೂ ಲಕ್ಷ್ಮಿಪತಿ ಕುಪ್ಪ ದಂಪತಿಯ ಪುತ್ರಿಯಾಗಿರುವ ಸಾನ್ವಿ, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭರತನಾಟ್ಯ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದು, ಹಂಪಿ ಉತ್ಸವ-2026ರ ವೇದಿಕೆಯಲ್ಲೂ ನೃತ್ಯ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಜೂನ್ 28ರಂದು ವಿಜಯನಗರ ಜಿಲ್ಲೆಯಲ್ಲಿ ನಡೆಯಲಿರುವ ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆಯ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನ್ವಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸಾನ್ವಿಯ ಸಾಧನೆಗೆ ಎಂ.ಪಿ. ಪ್ರಕಾಶ್ ಶಾಲೆಯ ಮುಖ್ಯಶಿಕ್ಷಕಿ ಮಧುಮತಿ ಹಾಗೂ ಶಿಕ್ಷಕರ ಬಳಗ, ಆರ್ಯವೈಶ್ಯ ಸಂಘ ಟ್ರಸ್ಟ್ ಅಧ್ಯಕ್ಷ ಕೊರಗಲ್ ರಾಘವೇಂದ್ರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.



