ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲೇ ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತರು, ಸಿಬ್ಬಂದಿ ಹಾಗೂ ಕೆಲ ಸದಸ್ಯರು ಕಸ ವಿಲೇವಾರಿ ಅಧ್ಯಯನದ ಹೆಸರಿನಲ್ಲಿ ಇಂದೋರ್ಗೆ ತೆರಳಿರುವುದನ್ನು ಖಂಡಿಸಿರುವ ಗದಗ ಜಿಲ್ಲಾ ಹೆಚ್.ಡಿ. ಕುಮಾರಸ್ವಾಮಿ ಬಳಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾವಲ ಎಂ. ಮುಳಗುಂದ, ಇದು ಕರ್ತವ್ಯಲೋಪವಾಗಿದ್ದು ಕರದಾತರ ಹಣದ ದುರ್ಬಳಕೆ ಎಂದು ಆರೋಪಿಸಿದ್ದಾರೆ.
ಅವರು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದು, ನಗರದಲ್ಲಿ ರಸ್ತೆಗಳ ಮೇಲೆ ಕಸ ರಾಶಿ ಬಿದ್ದಿದ್ದು, ದುರ್ವಾಸನೆ ಹರಡುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಗರವನ್ನು ಬಿಟ್ಟು ಇಂದೋರ್ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಟೀಕಿಸಿದ್ದಾರೆ.
ನಗರಸಭೆಯ ಸುಮಾರು ₹10 ಲಕ್ಷ ಹಣವನ್ನು ಈ ಪ್ರವಾಸಕ್ಕೆ ಖರ್ಚು ಮಾಡಲಾಗಿದೆ ಎಂದು ಆರೋಪಿಸಿರುವ ಅವರು, ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದಲ್ಲೇ ಉತ್ತಮ ನಗರ ಸ್ಥಳೀಯ ಸಂಸ್ಥೆಗಳಿದ್ದಾಗ ಇಂದೋರ್ಗೆ ತೆರಳುವ ಅಗತ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಈ ಹಿಂದೆ ವಿದೇಶ ಹಾಗೂ ಇತರ ನಗರಗಳಿಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದರೂ ಗದಗ-ಬೆಟಗೇರಿ ನಗರದ ಸ್ವಚ್ಛತೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ನಗರವನ್ನು ಸ್ವಚ್ಛವಾಗಿಡಲು ಪೌರ ಕಾರ್ಮಿಕರೇ ಶ್ರಮಿಸುತ್ತಿರುವಾಗ ಅಧಿಕಾರಿಗಳ ಪ್ರವಾಸದಿಂದ ಯಾವುದೇ ಪ್ರಯೋಜನವಿಲ್ಲ ಎಂದು ದೂರಿದರು.
ಪ್ರವಾಸಕ್ಕೆ ಖರ್ಚಾದ ಹಣವನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದಲೇ ವಸೂಲಿ ಮಾಡಬೇಕು. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಪತ್ರ ಬರೆದಿದ್ದು, ರಾಜ್ಯ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
“ನಗರದಲ್ಲಿ ಕಸದ ಸಮಸ್ಯೆ ಬಗೆಹರಿಸದೆ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಕರದಾತರ ಹಣ ವ್ಯಯ ಮಾಡಿರುವುದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಬೇಕು.”
– ದಾವಲ ಎಂ. ಮುಳಗುಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹೆಚ್.ಡಿ. ಕುಮಾರಸ್ವಾಮಿ ಬಳಗ, ಗದಗ



