ವಿಜಯಸಾಕ್ಷಿ ಸುದ್ದಿ, ಗದಗ: ಶಾಲೆಯಿಂದ ಹೊರಗುಳಿದ ಹಾಗೂ ಇದುವರೆಗೆ ದಾಖಲಾತಿಯಾಗದ ಪ್ರತಿಯೊಂದು ಮಗುವನ್ನೂ ಶಿಕ್ಷಣದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಹಮ್ಮಿಕೊಂಡಿರುವ ವಿಶೇಷ ದಾಖಲಾತಿ ಆಂದೋಲನಕ್ಕೆ ಸಮುದಾಯ ಕೈಜೋಡಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಕರೆ ನೀಡಿದರು.
ನಗರದ ಎಪಿಎಂಸಿ ವೀರನಾರಾಯಣ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.13ರಲ್ಲಿ ಶನಿವಾರ ನಡೆದ ವಿಶೇಷ ದಾಖಲಾತಿ ಆಂದೋಲನದಲ್ಲಿ ಅವರು ಮಾತನಾಡಿ, ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಆತ್ಮಸ್ಥೈರ್ಯ ಬೆಳೆಸುವ ಕೇಂದ್ರಗಳಾಗಿವೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಸರ್ಕಾರದ ವಿವಿಧ ಸೌಲಭ್ಯಗಳು ಉಚಿತವಾಗಿ ದೊರೆಯುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಮನವಿ ಮಾಡಿದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಕಲಗುಡಿ ಮಾತನಾಡಿ, ಸರ್ಕಾರಿ ಶಾಲೆಗಳು ಮಕ್ಕಳಿಗೆ ಆತ್ಮೀಯ ಕಲಿಕಾ ವಾತಾವರಣ ಕಲ್ಪಿಸುತ್ತವೆ. ಉಚಿತ ಸೌಲಭ್ಯಗಳ ಸದುಪಯೋಗ ಪಡೆದು ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದರು.
ಮುಖ್ಯೋಪಾಧ್ಯಾಯಿನಿ ಸುಧಾ ಬೇವಿನಮಟ್ಟಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳನ್ನೂ ಕಲಿಸಲಾಗುತ್ತದೆ. ಪ್ರತಿಯೊಂದು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ ಎಂದು ತಿಳಿಸಿದರು.
ವಿಶೇಷ ದಾಖಲಾತಿ ಆಂದೋಲನದ ಅಂಗವಾಗಿ ಮೂರು ಮಕ್ಕಳಿಗೆ ದಾಖಲಾತಿ ಮಾಡಲಾಗಿದ್ದು, ಅವರಲ್ಲಿ ಒಬ್ಬ ವಿಶೇಷಚೇತನ ಮಗುವೂ ಸೇರಿದೆ.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ರತ್ನಾ ಪೂಜಾರ, ಉಪಾಧ್ಯಕ್ಷ ಪುಂಡಲಿಕ್ ಹೊನ್ನಳ್ಳಿ, ಸದಸ್ಯರಾದ ಗೌಸುಸಾಬ ಮುಲ್ಲಾ, ಪ್ರೇಮಾ ಜಾಲವಾಡಗಿ, ಶರಣಬಸಪ್ಪ ಅಂಗಡಿ, ಶಕುಂತಲಾ ಲಮಾಣಿ, ವಾಸಕ್ಕ ಬಿದರಣ್ಣವರ, ಗೀತಾ ನಡುವಲಮನಿ, ದ್ಯಾಮವ್ವ ಪೂಜಾರ, ಹೇಮಾ ಸಂಗಟಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.
“ಶಾಲೆಯಿಂದ ಹೊರಗುಳಿದ ಪ್ರತಿಯೊಂದು ಮಗುವನ್ನೂ ಶಿಕ್ಷಣದ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿ. ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣದೊಂದಿಗೆ ಉಜ್ವಲ ಭವಿಷ್ಯ ಕಟ್ಟಿಕೊಡುತ್ತವೆ.”
– ಕವಿತಾ ದಂಡಿನ, ಸಂಪನ್ಮೂಲ ವ್ಯಕ್ತಿ



