ವಿಜಯಸಾಕ್ಷಿ ಸುದ್ದಿ, ಗದಗ: ಉಭಯ ಗುರುಗಳಾದ ಲಿಂ. ಪಂಡಿತ ಪಂಚಾಕ್ಷರಿ ಗವಾಯಿಗಳು ಹಾಗೂ ಲಿಂ. ಡಾ. ಪಂಡಿತ ಪುಟ್ಟರಾಜ ಗವಾಯಿಗಳು ಅಂಧ–ಅನಾಥರು, ಬಡವರ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಜೀವನವನ್ನು ಸಾರ್ಥಕಗೊಳಿಸಿದ ಮಹಾಪುರುಷರು. ವೀರೇಶ್ವರ ಪುಣ್ಯಾಶ್ರಮಕ್ಕೆ ಅವರು ಕಲ್ಪವೃಕ್ಷಗಳಾಗಿದ್ದು, ಅಂತಹ ಮಹಾತ್ಮರನ್ನು ಸಮಾಜ ಸದಾ ಸ್ಮರಿಸುತ್ತದೆ ಎಂದು ಗದುಗಿನ ತೋಂಟದಾರ್ಯ ಶ್ರೀಮಠದ ಜಗದ್ಗುರು ಡಾ. ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಚಾಕ್ಷರಿ ಗವಾಯಿಗಳ 82ನೇ ಹಾಗೂ ಪಂ. ಪುಟ್ಟರಾಜ ಗವಾಯಿಗಳ 16ನೇ ಪುಣ್ಯಸ್ಮರಣೋತ್ಸವ ಮತ್ತು ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಶಿವಾನುಭವ ಗೋಷ್ಠಿಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಹಾನಗಲ್ ಕುಮಾರೇಶ್ವರ ಶಿವಯೋಗಿಗಳ ದಿವ್ಯ ಚೈತನ್ಯದಿಂದ ಪಂಚಾಕ್ಷರಿ ಗವಾಯಿಗಳು ಗಾನಯೋಗಿಗಳಾಗಿ ರೂಪುಗೊಂಡರು. ಗುರುಗಳ ಮಾರ್ಗದರ್ಶನದಲ್ಲಿ ನಡೆದ ಪುಟ್ಟರಾಜ ಗವಾಯಿಗಳು ಅಂಧ–ಅನಾಥರ ಆಶಾಕಿರಣವಾಗಿ ಸಂಗೀತದ ಮೂಲಕ ಸಾವಿರಾರು ಬದುಕುಗಳನ್ನು ಕಟ್ಟಿಕೊಟ್ಟರು. ದೇಶದ ಅನೇಕ ಕಡೆ ಜಾತ್ರೆಗಳು ನಡೆಯುತ್ತವೆ. ಆದರೆ ಸಂಗೀತದ ಜಾತ್ರೆ ನಡೆಯುವುದು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲೇ ಎಂಬ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ ಎಂದು ಹೇಳಿದರು.
ಜಾತಿ–ಪಕ್ಷ ಭೇದವಿಲ್ಲದೆ ಎಲ್ಲರಿಗೂ ಆಶ್ರಯ ನೀಡಿರುವ ಈ ಪುಣ್ಯಮಠದ ಘನತೆಗೆ ಧಕ್ಕೆಯಾಗುವ ಯಾವುದೇ ಬೆಳವಣಿಗೆ ನಡೆಯಬಾರದು ಎಂದು ಶ್ರೀಗಳು ಕಿವಿಮಾತು ಹೇಳಿದರು.
ಸ್ಮಾರಕ ಭವನ ಪೂರ್ಣಗೊಳಿಸಲು ನೆರವು: ಪ್ರಹ್ಲಾದ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ವೀರೇಶ್ವರ ಪುಣ್ಯಾಶ್ರಮವು ಸಂಗೀತದ ಮೂಲಕ ಜಗತ್ತಿಗೆ ಮಾನವೀಯತೆಯ ಸಂದೇಶ ಸಾರಿದ ಪುಣ್ಯಕ್ಷೇತ್ರವಾಗಿದೆ. ಸ್ವತಃ ಅಂಧರಾಗಿದ್ದರೂ ಸಾವಿರಾರು ಅಂಧ ಮಕ್ಕಳ ಬದುಕಿಗೆ ಜ್ಞಾನದ ಬೆಳಕು ನೀಡಿದ ಉಭಯ ಗುರುಗಳ ಸೇವೆ ಅನನ್ಯವಾಗಿದೆ. ಗವಾಯಿಗಳ ಸ್ಮಾರಕ ಭವನದ ಕಾಮಗಾರಿ ಪೂರ್ಣಗೊಳ್ಳಲು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮಾನವೀಯ ಮೌಲ್ಯಗಳ ಪ್ರತೀಕ ಉಭಯ ಗುರುಗಳು: ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ–ಗದಗ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಇಂದಿನ ವಸ್ತುಪ್ರಧಾನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಉಭಯ ಗುರುಗಳು ಸಾತ್ವಿಕತೆ, ಸೇವೆ ಮತ್ತು ಸಾರ್ಥಕ ಬದುಕಿನ ಆದರ್ಶವನ್ನು ಸಮಾಜಕ್ಕೆ ನೀಡಿದ್ದಾರೆ. ಸಂಗೀತದ ಮೂಲಕ ಸಾವಿರಾರು ಅಂಧ ಹಾಗೂ ಅಸಹಾಯಕರಿಗೆ ಬದುಕು ಕಟ್ಟಿಕೊಟ್ಟ ಪುಟ್ಟರಾಜ ಗವಾಯಿಗಳ ಸೇವೆ ಇತಿಹಾಸದಲ್ಲಿ ಅಜರಾಮರವಾಗಿರುತ್ತದೆ ಎಂದರು.
ಗವಾಯಿಗಳ ಸ್ಮಾರಕ ಭವನಕ್ಕಾಗಿ ಹಿಂದೆ ₹5 ಕೋಟಿ ಮಂಜೂರು ಮಾಡಲಾಗಿತ್ತು. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಮನ್ವಯ ಸಾಧಿಸಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ 2026ನೇ ಸಾಲಿನ ‘ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿ’ಯನ್ನು ಕೀರ್ತನ ಕ್ಷೇತ್ರದ ಸಾಧಕ ನೀಲಕಂಠ ಶಾಸ್ತ್ರಿಗಳು (ಕೂಸಗೂರು) ಅವರಿಗೆ ಪ್ರದಾನ ಮಾಡಲಾಯಿತು.
ಹಾಗೆಯೇ ಚೆನ್ನೈನ ಶಹನಾಯಿ ವಾದಕ ಪದ್ಮಶ್ರೀ ಪಂ. ಡಾ. ಎಸ್. ಬಾಳೇಶ ಭಜಂತ್ರಿ, ಪ್ರವಚನ ಕ್ಷೇತ್ರದ ಡೋಣಿಯ ಶಶಿಧರ ಶಾಸ್ತ್ರಿ ಹಿರೇಮಠ ಹಾಗೂ ತಬಲಾ ವಾದಕ ಹೊನ್ನಿಗನೂರಿನ ಬಸವರಾಜ ಅಮರಗೋಳ ಅವರಿಗೆ ‘ಕುಮಾರಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ‘ಗಾನಯೋಗಿ ಶಿವಯೋಗಿ ಶ್ರೀ ಪರಮಪಂಚಾಕ್ಷರ ಮಹಾಪುರಾಣ’ ಹಾಗೂ ‘ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಾಂಬೆಯ ಪುರಾಣ’ ಗ್ರಂಥಗಳು ಲೋಕಾರ್ಪಣೆಗೊಂಡವು.
ವೇದಿಕೆಯಲ್ಲಿ ಗುಳೇದಗುಡ್ಡ ಮುರುಘಾಮಠದ ಕಾಶೀನಾಥ ಮಹಾಸ್ವಾಮಿಗಳು, ಅಡ್ನೂರ ಬ್ರಹನ್ಮಠದ ಅಭಿನವ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ಮೈಸೂರು ಕುಂದೂರು ಮಠದ ಡಾ. ಶರತ್ಚಂದ್ರ ಸ್ವಾಮಿಗಳು, ಮೈಸೂರು ಅರಮನೆ ಪಂಚಗವಿ ಮಠದ ಶ್ರೀಕಂಠ ಸ್ವಾಮಿಗಳು, ಅಂತೂರು–ಬೆಂತೂರಿನ ಕುಮಾರ ದೇವರು, ಅಡವೀಂದ್ರಮಠದ ಮಹೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ವೀರೇಶ್ವರ ಪುಣ್ಯಾಶ್ರಮದ ಸೋಲ್ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ ಕೆಂಗಾರ, ಪರಶುರಾಮ ಕಟ್ಟಿಮನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
“ದೇಶದ ಅನೇಕ ಕಡೆ ಜಾತ್ರೆಗಳು ನಡೆಯುತ್ತವೆ. ಆದರೆ ಸಂಗೀತದ ಜಾತ್ರೆ ನಡೆಯುವುದು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲೇ. ಉಭಯ ಗುರುಗಳು ಈ ಪುಣ್ಯಕ್ಷೇತ್ರದ ಕಲ್ಪವೃಕ್ಷಗಳು.”
ಜಗದ್ಗುರು ಡಾ. ಸಿದ್ದರಾಮ ಮಹಾಸ್ವಾಮಿಗಳು, ತೋಂಟದಾರ್ಯ ಶ್ರೀಮಠ



