ವಿಜಯಸಾಕ್ಷಿ ಸುದ್ದಿ, ಗದಗ: ಪುಣ್ಯಕ್ಷೇತ್ರಗಳ ಯಾತ್ರೆ ಹಾಗೂ ದರ್ಶನದಿಂದ ಮಾನವ ಜನ್ಮ ಸಾರ್ಥಕವಾಗುವುದಲ್ಲದೆ ಪುಣ್ಯದ ಫಲವೂ ಲಭಿಸುತ್ತದೆ. ಆದ್ದರಿಂದ ಕೈಕಾಲು ಗಟ್ಟಿಯಾಗಿರುವಾಗಲೇ ಪವಿತ್ರ ಕ್ಷೇತ್ರಗಳ ಯಾತ್ರೆ ಕೈಗೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಅಡ್ನೂರು ಬೃಹನ್ಮಠದ ಪರಮಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಶ್ರೀ ಅಡವೀಂದ್ರಸ್ವಾಮಿ ಮಠದ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ನಡೆದ ಶ್ರೀಮಠದ 349ನೇ ಮಾಸಿಕ ಶಿವಾನುಭವ ಹಾಗೂ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪುಣ್ಯಕ್ಷೇತ್ರಗಳ ದರ್ಶನದಿಂದ ಆಧ್ಯಾತ್ಮಿಕ ನೆಮ್ಮದಿ ಹಾಗೂ ಬದುಕಿಗೆ ಹೊಸ ಅರ್ಥ ಸಿಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಶ್ರೀ ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ವೇ. ಶ್ರೀ ಮಹೇಶ್ವರ ಸ್ವಾಮಿಗಳು, ಲಿಂಗೈಕ್ಯ ಗಂಗಾಧರ ಮಹಾಸ್ವಾಮಿಗಳು, ಉದ್ಯಮಿ ಕೆ. ಸುಧಾಕರ್ ರಾವ್, ಶಿಕ್ಷಣ ತಜ್ಞ ಡಾ. ಬಿ.ಎಫ್. ದಂಡಿನ ಹಾಗೂ ಸಂಗೀತ ಸೇವಕ ಪಾಂಡುರಂಗ ಕುರ್ತಕೋಟಿ ಅವರ ಸಮಾಜಮುಖಿ ಸೇವೆಯನ್ನು ಸ್ಮರಿಸಿದರು.
ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದ ಪ್ರೊ. ವಿರೂಪಾಕ್ಷಯ್ಯ ಹೊಸಳ್ಳಿಮಠ ಮಾತನಾಡಿ, ಕೇದಾರನಾಥ ಹಾಗೂ ಬದರಿನಾಥದಂತಹ ಹಿಮಾಲಯದ ಪುಣ್ಯಕ್ಷೇತ್ರಗಳ ದರ್ಶನ ಜೀವನದಲ್ಲಿ ಒಮ್ಮೆಯಾದರೂ ಪಡೆಯುವುದು ಪ್ರತಿಯೊಬ್ಬರಿಗೂ ಸಿಗಬೇಕಾದ ಅಪರೂಪದ ಭಾಗ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಾನುಭವ ಸಮಿತಿಯ ಅಧ್ಯಕ್ಷ ಹಾಗೂ ಸಾಹಿತಿ ಡಾ. ರಾಜೇಂದ್ರ ಎಸ್. ಗಡಾದ ಮಾತನಾಡಿ, ಶಾರದಾ, ಕೇದಾರ, ಬದರಿನಾಥ ಸೇರಿದಂತೆ ಪವಿತ್ರ ಕ್ಷೇತ್ರಗಳ ಯಾತ್ರೆಯಿಂದ ಮನಸ್ಸಿಗೆ ಶಾಂತಿ ದೊರೆಯುವುದರ ಜೊತೆಗೆ ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೇದಾರನಾಥ-ಬದರಿನಾಥ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳ ದರ್ಶನ ಮಾಡಿದ ಪ್ರೊ. ವಿರೂಪಾಕ್ಷಯ್ಯ ಹೊಸಳ್ಳಿಮಠ ದಂಪತಿ, ವಿಜಯಕುಮಾರ ಹಿರೇಮಠ ದಂಪತಿ, ಸಾಹಿತಿ ಡಾ. ರಾಜೇಂದ್ರ ಎಸ್. ಗಡಾದ ಹಾಗೂ ಶ್ರೀಮತಿ ಜ್ಯೋತಿ ಗಡಾದ, ಕಬಾಡಿ ಸಹೋದರ ದಂಪತಿ ಅವರನ್ನು ಶ್ರೀಮಠದ ವತಿಯಿಂದ ಗುರುರಕ್ಷೆ ನೀಡಿ ಸನ್ಮಾನಿಸಲಾಯಿತು.
ಗುರುಪೂರ್ಣಿಮೆ ಕುರಿತು ಸುಜಾತ ದೊಡ್ಡಮನಿ ಉಪನ್ಯಾಸ ನೀಡಿದರೆ, ಲಿಂಗೈಕ್ಯ ಗಂಗಾಧರ ಮಹಾಸ್ವಾಮಿಗಳ ಕುರಿತು ಚನ್ನಬಸಯ್ಯ ಹೇಮಗಿರಿಮಠ ನುಡಿನಮನ ಸಲ್ಲಿಸಿದರು. ಇದೇ ವೇಳೆ ಥೈಲ್ಯಾಂಡ್ ಪ್ರವಾಸ ಮುಗಿಸಿಕೊಂಡು ಬಂದ ಸವಿತಾ ಹೊಸಳ್ಳಿಮಠ–ಗುರಪ್ಪ ನಿಡಗುಂದಿ ದಂಪತಿ ಹಾಗೂ ಹುಟ್ಟುಹಬ್ಬದ ಅಂಗವಾಗಿ ಶ್ರೀಮತಿ ಬಳಿಗಾರ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ. ಸಿ. ಲಿಂಗಾರೆಡ್ಡಿ, ಚನ್ನಬಸಪ್ಪ ಕಾಳಗಿ, ಡಾ. ಎಲ್.ವಿ. ಪಾಟೀಲ, ಬಿ.ಎಂ. ಬೀಳೆಯಲಿ, ಜಿ.ಎಂ. ಯಾನಂಶೆಟ್ಟಿ, ಸುಶೀಲಾ ಕೋಟಿ ಸೇರಿದಂತೆ ಶಿವಾನುಭವ ಸಮಿತಿಯ ಸದಸ್ಯರು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ಜೀವನದಲ್ಲಿ ಒಮ್ಮೆಯಾದರೂ ಕೇದಾರ-ಬದರಿನಾಥ ದರ್ಶನ ಮಾಡಿ
ಹಿಮಾಲಯದ ಕೇದಾರನಾಥ, ಬದರಿನಾಥ ಸೇರಿದಂತೆ ಪವಿತ್ರ ಕ್ಷೇತ್ರಗಳ ದರ್ಶನ ಜೀವನದಲ್ಲಿ ಒಮ್ಮೆಯಾದರೂ ಪಡೆಯಬೇಕು. ಇಂತಹ ಯಾತ್ರೆಗಳು ಆಧ್ಯಾತ್ಮಿಕ ನೆಮ್ಮದಿ ನೀಡುವುದರ ಜೊತೆಗೆ ಬದುಕಿನ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದ ಪ್ರೊ. ವಿರೂಪಾಕ್ಷಯ್ಯ ಹೊಸಳ್ಳಿಮಠ ಹೇಳಿದರು.



