ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ, ನಿಯಮಿತವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ದೃಷ್ಟಿಯನ್ನು ಕಾಪಾಡಿಕೊಳ್ಳಬೇಕು ಎಂದು ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮುತ್ತಣ್ಣ ಚೌಡರೆಡ್ಡಿ ಹೇಳಿದರು.
ಸಮೀಪದ ಅಬ್ಬಿಗೇರಿಯಲ್ಲಿ ನವಜ್ಯೋತಿ ಗ್ರಾಮೀಣಾಭಿವೃದ್ಧಿ ವಿವಿಧೋದ್ದೇಶ ಹಾಗೂ ಶಿಕ್ಷಣ ಸೇವಾ ಸಂಸ್ಥೆ, ಹುಬ್ಬಳ್ಳಿಯ ಜಯಪ್ರಿಯಾ ಫೌಂಡೇಶನ್, ಕರ್ನಾಟಕ ರಾಜ್ಯ ರೈತ ಸಂಘದ ರೋಣ ತಾಲೂಕು ಹಾಗೂ ಅಬ್ಬಿಗೇರಿ ಗ್ರಾಮ ಘಟಕ ಮತ್ತು ಗದಗ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಬಡ ಜನರಿಗೆ ಗುಣಮಟ್ಟದ ನೇತ್ರ ಚಿಕಿತ್ಸೆ ಸುಲಭವಾಗಿ ದೊರೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ವಿವಿಧ ಸಂಘ-ಸಂಸ್ಥೆಗಳು ಒಗ್ಗೂಡಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಬಡವರ ಕಣ್ಣಿಗೆ ಬೆಳಕು ನೀಡುವ ಇಂತಹ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ರೋಣ ತಾಲೂಕು ಅಧ್ಯಕ್ಷ ಸಂಗಣ್ಣ ಪವಾಡಶೆಟ್ಟಿ ಮಾತನಾಡಿ, ರೈತರು ದಿನವಿಡೀ ಬಿಸಿಲು, ಧೂಳು ಹಾಗೂ ಪ್ರತಿಕೂಲ ಪರಿಸ್ಥಿತಿಯಲ್ಲಿ ದುಡಿಯುವುದರಿಂದ ಕಣ್ಣಿನ ಸಮಸ್ಯೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಆರ್ಥಿಕ ಸಮಸ್ಯೆಯಿಂದ ಅನೇಕರು ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಉಚಿತ ಶಿಬಿರಗಳು ಗ್ರಾಮೀಣ ಜನರಿಗೆ ವರದಾನವಾಗಿವೆ ಎಂದು ಹೇಳಿದರು.
ಶಿಬಿರದಲ್ಲಿ ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ಚಂದ್ರು, ಶ್ರೀಕಾಂತ ರೋಣ ಹಾಗೂ ವೈದ್ಯಕೀಯ ತಂಡ ಸುಮಾರು 150 ಮಂದಿಯ ನೇತ್ರ ತಪಾಸಣೆ ನಡೆಸಿತು. ತಪಾಸಣೆ ವೇಳೆ 30 ಮಂದಿಯಲ್ಲಿ ಕಣ್ಣಿನ ಪೊರೆ ಪತ್ತೆಯಾಗಿದ್ದು, ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು.
ಗದಗ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ವೀರೇಶ ಕಲಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಸವರಾಜ ಪಲ್ಲೇದ, ವಿನಾಯಕ ಜೋಶಿ, ವೀರಯ್ಯ ಅರಳಿಕಟ್ಟಿ, ಸಂಗಣ್ಣ ದಂಡಿನ, ಶಿವಲಿಂಗಪ್ಪ ತಿಪಶೆಟ್ಟಿ, ಬಸನಗೌಡ್ರ ಚನ್ನಪ್ಪಗೌಡ್ರ, ಶಂಕ್ರಪ್ಪ ಆರೇರ, ಬುದ್ದಿವಂತಪ್ಪ ಉಪಾಧ್ಯ, ಸೋಮಣ್ಣ ಕಣವಿ, ಕಳಕಪ್ಪ ನೀರಲೋಟಿ, ಮಲ್ಲಾರಪ್ಪ ಚವಡಿ, ಮಾದೇವಿ ಅಸೂಟಿ, ರಮೇಶ ಇಮ್ರಾಪುರ, ಮಲ್ಲಪ್ಪ ಎಂಡಿಗೇರಿ, ಮಲ್ಲಪ್ಪ ನೀರಲೋಟಿ, ಪ್ರಕಾಶ ಮಾರನಬಸರಿ, ಮಹೇಶ ಚವಡಿ, ಶರಣಪ್ಪ ಹಳ್ಳಿ, ಶರಣಪ್ಪ ಬಸವರಡ್ಡೇರ, ಬಸವರಾಜ ಬಸವರಡ್ಡೇರ, ಶಿವಶಿಂಪರ, ವೀರಪ್ಪ ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ದೃಷ್ಟಿ ಮಾನವನ ಬದುಕಿನ ಅಮೂಲ್ಯ ಸಂಪತ್ತು. ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ, ನಿಯಮಿತವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ.”
– ಮುತ್ತಣ್ಣ ಚೌಡರೆಡ್ಡಿ, ಅಧ್ಯಕ್ಷರು, ಗದಗ ಜಿಲ್ಲಾ ರೈತ ಸಂಘ



