ವಿಜಯಸಾಕ್ಷಿ ಸುದ್ದಿ, ಗದಗ: 2026–27ರಿಂದ 2030–31ರವರೆಗೆ ಮುಂದಿನ ಐದು ವರ್ಷಗಳ ಕಾಲ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ ಮುಂದುವರಿಸಲು ಕೇಂದ್ರ ಸರ್ಕಾರ ₹3.15 ಲಕ್ಷ ಕೋಟಿಗೂ ಅಧಿಕ ಅನುದಾನ ಮೀಸಲಿಟ್ಟಿರುವುದು ರೈತಪರ ಆಡಳಿತಕ್ಕೆ ಮತ್ತೊಂದು ಸಾಕ್ಷಿಯಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಡಿ.ವೈ. ಹುನಗುಂದ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, 2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯು ಇಂದು ವಿಶ್ವದ ಅತಿದೊಡ್ಡ ನೇರ ನಗದು ವರ್ಗಾವಣೆ (ಡಿಬಿಟಿ) ಯೋಜನೆಗಳಲ್ಲಿ ಒಂದಾಗಿ ಬೆಳೆದಿದೆ. ಆಧಾರ್ ದೃಢೀಕರಣ, ಫೇಸ್ ಆಥೆಂಟಿಕೇಶನ್ ಹಾಗೂ ಡಿಜಿಟಲ್ ತಂತ್ರಜ್ಞಾನದ ಮೂಲಕ ಯಾವುದೇ ಮಧ್ಯವರ್ತಿಗಳಿಲ್ಲದೆ ನೆರವು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ತಲುಪುತ್ತಿರುವುದು ಯೋಜನೆಯ ದೊಡ್ಡ ಯಶಸ್ಸಾಗಿದೆ ಎಂದರು.
ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಕೃಷಿ ಬಜೆಟ್ ಅನ್ನು ₹21,933 ಕೋಟಿಯಿಂದ ₹1,27,290 ಕೋಟಿಗೂ ಅಧಿಕ ಮೊತ್ತಕ್ಕೆ ಏರಿಕೆ ಮಾಡಿರುವುದು ರೈತರ ಅಭಿವೃದ್ಧಿಗೆ ನೀಡುತ್ತಿರುವ ಆದ್ಯತೆಯನ್ನು ತೋರಿಸುತ್ತದೆ. ರೈತರಿಗೆ ಪ್ರಾದೇಶಿಕ ಭಾಷೆಯಲ್ಲಿ ಕೃಷಿ ಮಾಹಿತಿ ತಲುಪಿಸಲು ‘ಭಾರತ್ ವಿಸ್ತಾರ’ ಹಾಗೂ ‘ಭಾಷಿಣಿ’ ಎಐ ತಂತ್ರಜ್ಞಾನ ಜಾರಿಗೊಳಿಸುತ್ತಿರುವುದೂ ರೈತ ಸಬಲೀಕರಣದ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ಅನ್ನು ಮೂರು ಕಂತುಗಳಲ್ಲಿ ನೇರವಾಗಿ ಜಮೆ ಮಾಡಲಾಗುತ್ತಿದೆ. ಇದುವರೆಗೆ 23 ಕಂತುಗಳ ಮೂಲಕ ₹4.47 ಲಕ್ಷ ಕೋಟಿಗೂ ಅಧಿಕ ಮೊತ್ತ ರೈತರ ಖಾತೆಗೆ ವರ್ಗಾವಣೆಯಾಗಿದ್ದು, ಇತ್ತೀಚಿನ ಕಂತಿನಲ್ಲಿ 9.49 ಕೋಟಿಗೂ ಅಧಿಕ ರೈತರಿಗೆ ₹18,984 ಕೋಟಿಗೂ ಹೆಚ್ಚು ಹಣ ಜಮೆಯಾಗಿದೆ ಎಂದು ಮಾಹಿತಿ ನೀಡಿದರು.
ನೀತಿ ಆಯೋಗದ ವರದಿ ಪ್ರಕಾರ, ಶೇ.92ಕ್ಕೂ ಹೆಚ್ಚು ರೈತರು ಈ ನೆರವನ್ನು ಕೃಷಿ ಹೂಡಿಕೆಗೆ ಬಳಸಿದ್ದು, ಶೇ.85ರಷ್ಟು ರೈತರ ಆದಾಯ ಹೆಚ್ಚಳವಾಗಿದೆ. ಜೊತೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಹಾಗೂ ಪಿಎಂ ಕಿಸಾನ್ ಮಾನ್-ಧನ್ ಯೋಜನೆಯಂತಹ ಕಾರ್ಯಕ್ರಮಗಳ ಮೂಲಕ ರೈತರಿಗೆ ಇನ್ನಷ್ಟು ಭದ್ರತೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಈ ರೈತಪರ ನಿರ್ಧಾರವನ್ನು ಜಿಲ್ಲೆಯ ಸಮಸ್ತ ರೈತ ಸಮುದಾಯದ ಪರವಾಗಿ ಸ್ವಾಗತಿಸಿ ಅಭಿನಂದಿಸುತ್ತೇನೆ ಎಂದು ಡಿ.ವೈ. ಹುನಗುಂದ ತಿಳಿಸಿದ್ದಾರೆ.
“ಮುಂದಿನ ಐದು ವರ್ಷಗಳಿಗೂ ಪಿಎಂ ಕಿಸಾನ್ ಯೋಜನೆ ಮುಂದುವರಿಸಿರುವುದು ರೈತರ ಕಲ್ಯಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಚಲ ಬದ್ಧತೆಯ ಪ್ರತೀಕ.”
– ಡಿ.ವೈ. ಹುನಗುಂದ, ಜಿಲ್ಲಾಧ್ಯಕ್ಷರು, ಬಿಜೆಪಿ ರೈತ ಮೋರ್ಚಾ



