ವಿಜಯಸಾಕ್ಷಿ ಸುದ್ದಿ, ಗದಗ:
ಸೋಮವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಗರಂ ಆದ ಪ್ರಸಂಗ ನಡೆಯಿತು.
ರೋಣ ಶಾಸಕ ಕಳಕಪ್ಪ ಬಂಡಿ ವಿರುದ್ಧ ಸಚಿವ ಬಿ.ಸಿ.ಪಾಟೀಲ ಹರಿಯಾಯ್ದರು. ಮರಳು ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಂಡಿ ಮತ್ತು ಉಸ್ತುವಾರಿ ಸಚಿವ ಬಿಸಿಪಾ ಮಧ್ಯೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಾಗ್ಯುದ್ಧ ನಡೆಯಿತು.
ಅಕ್ರಮ ಮರಳು ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರಿಗೆ ಬಿ.ಸಿ.ಪಾಟೀಲ್ ಸೂಚಿಸಿದರು.
ಸಚಿವರ ಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಕಳಕಪ್ಪ ಬಂಡಿ, ‘ಮರಳು ಬಂದ್ ಮಾಡಿದರೆ ಮನೆ ಕಟ್ಟುವುದು ಹೇಗೆ?. ಬೇರೆ ಕಡೆಯಿಂದ ಬಂದು ಏನೇನೋ ಆದೇಶ ಕೊಟ್ಟು ಹೋಗ್ತೀರಿ. ಆದರೆ, ಇಲ್ಲಿಯ ಜನರಿಗೆ ಉತ್ತರ ಕೊಡಬೇಕಾದವರು ನಾವು’ ಎಂದು ತರಾಟೆಗೆ ತೆಗೆದುಕೊಂಡರು.
ಸಚಿವ, ಶಾಸಕರ ಮಧ್ಯೆ ವಾಕ್ಸಮರ ನಡೆಯುತ್ತಿದ್ದರೂ ಲೋಕೋಪಯೊಗಿ ಸಚಿವ ಸಿ.ಸಿ.ಪಾಟೀಲ ಮೂಕ ಪ್ರೇಕ್ಷಕಂತೆ ಕೂತಿದ್ದರು. ಬೇರೆ ವಿಷಯ ಚರ್ಚೆ ಮಾಡಿ ಎಂದರೂ ಬಂಡಿ ಪಟ್ಟು ಬಿಡದೆ ಗಟ್ಟಿಯಾಗಿ ನಿಲ್ಲುವ ಮೂಲಕ ಸ್ವ ಪಕ್ಷದ ಸಚಿವರಿಗೆ ಮುಜುಗರವನ್ನುಂಟು ಮಾಡಿದರು.
ಶಾಸಕ ಕಳಕಪ್ಪ ಬಂಡಿ ನಡೆಗೆ ಕೆಂಡಾಮಂಡಲರಾದ ಸಚಿವ ಬಿ.ಸಿ.ಪಾಟೀಲ ‘ನಾನೇನು ಗದಗ ಜಿಲ್ಲಾ ಉಸ್ತುವಾರಿ ಮಾಡಿ ಎಂದು ಕೇಳಿಕೊಂಡು ಬಂದಿಲ್ಲ. ಚೇಂಜ್ ಮಾಡ್ಸಿ ಹೋಗ್ತಿರ್ತಿನಿ. ಮರಳು ಸಮಸ್ಯೆಯಾಗಿದ್ದರೆ ಮುಖ್ಯಮಂತ್ರಿಗೆ ಹೇಳಿ. ನನಗೆ ವಹಿಸಿದ ಕೆಲಸವನ್ನು ನಾನು ಮಾಡೇ ಮಾಡ್ತೀನಿ’ ಎಂದು ತಿರುಗೇಟು ನೀಡಿದರು.
ಒಟ್ಟಿನಲ್ಲಿ ಗದಗ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ವಪಕ್ಷದ ಸಚಿವರನ್ನೇ ಮುಜುಗರವನ್ನಂಟು ಮಾಡಿದ ಘಟನೆ ನಡಯಿತು.