ವಿಜಯಸಾಕ್ಷಿ ಸುದ್ದಿ, ಹಾಸನ/ಗದಗ:
ಗದಗ ಜಿಲ್ಲೆಯ ರೋಣ ತಾಲ್ಲೂಕು ತಹಸೀಲ್ದಾರ ಜೆ.ಬಿ.ಜಕ್ಕನಗೌಡರ ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಹೆಸರಿನಲ್ಲಿ ವಿವಿಧ ಇಲಾಖೆಯ ನೌಕರರಿಗೆ ದೂರವಾಣಿ ಕರೆ ಮಾಡಿ ಹಣ ಸಂದಾಯ ಮಾಡುವಂತೆ ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಇಬ್ಬರು ಮುಖ್ಯ ಆರೋಪಿಗಳನ್ನು ಹಾಗೂ ಇವರಿಗೆ ಸಹಕರಿಸುತ್ತಿದ್ದ ಇನ್ನಿಬ್ಬರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಗ್ರಾಮದ ಮುರಿಗೆಪ್ಪಾ ನಿಂಗಪ್ಪ ಕುಂಬಾರ (೫೬), ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮುಗುಲಿ ಗ್ರಾಮದ ರಜನಿಕಾಂತ್ ತಂದೆ ನಾಗರಾಜ್ (೪೬) ಎಂಬುವವರೇ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಸಿಮ್ಕಾರ್ಡ್, ಮೊಬೈಲ್ಗಳನ್ನು ಪಶಪಡಿಸಿಕೊಂಡಿದ್ದಾರೆ.
ಇವರಿಬ್ಬರು ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ನಿಮ್ಮ ಮೇಲೆ ಎಸಿಬಿ ದಾಳಿ ಮಾಡಲಾಗುವುದು. ಇದರಿಂದ ತಪ್ಪಿಸಿಕೊಳ್ಳಬೇಕಾದರೆ ಕೂಡಲೇ ನಮ್ಮ ಖಾತೆಗೆ ಆನ್ಲೈನ್ ಮೂಲಕ ಹಣ ಸಂದಾಯ ಮಾಡುವಂತೆ ವಂಚಿಸುತ್ತಿದ್ದರು. ಈ ಬಗ್ಗೆ ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಆರೋಪಿತರ ಹೆಡೆಮುರಿ ಕಟ್ಟಲು ನಾಲ್ಕು ತಂಡಗಳನ್ನು ರಚಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ ಕಾರ್ಡ್ ಮತ್ತು ಮೊಬೈಲ್ ಖರೀದಿಸಿ ವಿವಿಧ ಇಲಾಖೆಯ ನೌಕರರಿಗೆ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಎಸಿಬಿ ದಾಳಿ ಮಾಡುವುದಾಗಿ ಹೆದರಿಸುತ್ತಿದ್ದರು. ಅಲ್ಲದೆ, ವಿವಿಧ ವ್ಯಕ್ತಿಗಳ ಖಾತೆಗಳಿಗೆ ಹಣ ಸಂದಾಯ
ಮಾಡಿಸಿಕೊಳ್ಳುತ್ತಿದ್ದರು ಎಂಬುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಇನ್ನು ಅನೇಕರಿಗೆ ಇದೇ ರೀತಿ ವಂಚಿಸಿ ಹಣ ಪಡೆದಿರುವ ಬಗ್ಗೆಯೂ ಆರೋಪಿಗಳು ತಿಳಿಸಿದ್ದಾರೆ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.
ಮೊದಲನೇ ಆರೋಪಿ ಮುರಿಗೆಪ್ಪಾ ಕುಂಬಾರ ಸುಮಾರು ೪೦ಕ್ಕಿಂತ ಹೆಚ್ಚು ಮತ್ತು ಎರಡನೇ ಆರೋಪಿ ರಜನಿಕಾಂತ್ ಸುಮಾರು ೦೬ಕ್ಕಿಂತ ಅಧಿಕ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇವರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕೆಲವು ಪ್ರಕರಣಗಳು ತನಿಖಾ ಹಂತದಲ್ಲಿ, ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಾರೆಂಟ್ ಸಹ ಹೊರಡಿಸಲಾಗಿತ್ತು. ಅಲ್ಲದೆ, ಇವರಿಬ್ಬರು ಈ ಹಿಂದೆ ಬಂಧಿತರಾಗಿ, ನ್ಯಾಯಾಲಯದಿಂದ ಜಾಮೀನು ಸಹ ಪಡೆದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್, ಹಾಸನ ಎಸ್ಪಿ ಆರ್.ಶ್ರೀನಿವಾಸ್ಗೌಡ, ಬೆಳಗಾವಿ ಎಸಿಬಿ ಉತ್ತರ ವಲಯದ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಹಾಗೂ ಮೈಸೂರು ಎಸಿಬಿ ದಕ್ಷಿಣ ವಲಯದ ಪೊಲೀಸ್ ಅಧೀಕ್ಷಕ ಸಜೀತ ವಿ.ಜೆ. ಅವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು.
ಇನ್ನಿಬ್ಬರು ಆರೋಪಿಗಳ ಬಂಧನ
ಹಾಸನದಲ್ಲಿ ಬಂಧಿಸಲಾಗಿರುವ ಮುಖ್ಯ ಆರೋಪಿಗಳಾದ ಮುರಿಗೆಪ್ಪಾ ಹಾಗೂ ರಜನಿಕಾಂತ್ಗೆ ಸಿಮ್ ಮತ್ತು ಮೊಬೈಲ್ ಖರೀದಿಗೆ ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆ ಕೊಟ್ಟು ಸಹಕರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗದಗ ಎಸಿಬಿ ಅಧಿಕಾರಿಗಳು ಹಾಗೂ ರೋಣ ಪೊಲೀಸರು ಬಂಧಿಸಿದ್ದಾರೆ. ಸದಲಗಾ ಬಳಿಯ ಮಹಾರಾಷ್ಟ್ರದ ದತ್ತುವಾಡ ಗ್ರಾಮದ ನಿವಾಸಿಗಳಾದ ರಮೇಶ್ ಚೌಗಲೆ, ಮಹಾವೀರ ಚೌಗಲೆ ಎಂಬುವವರನ್ನು ಬಂಧಿಸಿದ್ದಾರೆ. ಇವರಿಬ್ಬರು ಮುರಿಗೆಪ್ಪಾ ಮತ್ತು ರಜನೀಕಾಂತ್ಗೆ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ವಂಚಿಸುವುದಕ್ಕೆ ಸಹಕರಿಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.