ನವಲಗುಂದದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ
ವಿಜಯಸಾಕ್ಷಿ ಸುದ್ದಿ, ನವಲಗುಂದ:
ಚಹಾ ಮಾರುತ್ತಾ ಬಂದು ಆರ್ ಎಸ್ ಎಸ್ ಚಡ್ಡಿ ಹಾಕಿಕೊಂಡು ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ತಮ್ಮ ಅಧೀನದಲ್ಲಿರುವ ಐ.ಟಿ. ಹಾಗೂ ಇ.ಡಿ.ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವದ ವಿರುದ್ಧವಾಗಿ ಸರ್ಕಾರ ನಡೆಸುತ್ತಿರುವ ಬಿಜೆಪಿ ವಿರುದ್ಧ ಮಾಜಿ ಸಚಿವ ಕೆ.ಎನ್.ಗಡ್ಡಿ ತೀವ್ರ ವಾಗ್ದಾಳಿ ನಡೆಸಿದರು.
ಸೋಮವಾರ ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ನಾಯಕರು ಭ್ರಷ್ಟಾಚಾರಿಗಳಲ್ಲ, ನಿಜವಾದ ಭ್ರಷ್ಟರನ್ನು ರಕ್ಷಿಸುತ್ತಿರುವವರು ಬಿಜೆಪಿ ಪಕ್ಷದವರು, ಮಾಜಿ ಪ್ರಧಾನಿ ರಾಜೀವ ಗಾಂಧಿಯವರನ್ನು ಹತ್ಯೆ ಮಾಡಿದ ಪಾಪಿಗಳಿಗೆ ಸಾಂತ್ವನ ಹೇಳಿದ ಪಕ್ಷವಿದು. ಈಗ ಕಾಂಗ್ರೆಸ್ ಪಕ್ಷದ ಅಧಿನಾಯಕಿಯಾಗಿರುವ ಸೋನಿಯಾ ಹಾಗೂ ರಾಹುಲ್ ಗಾಂಧಿ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ದುರುದ್ದೇಶದಿಂದ ತನಿಖೆ ಮಾಡಿಸುತ್ತಿದ್ದಾರೆ.
ಇನ್ನು ರಾಜ್ಯದ ಈಗಿನ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿಯವರು ರಕ್ತದಿಂದ ಪತ್ರ ಬರೆದು ಮಹದಾಯಿ ಹೋರಾಟ ಮಾಡಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದರೂ ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಇಂತಹ ಬಂಡ ನಾಯಕರನ್ನು ನಂಬಬೇಡಿ ಎಂದು ಮಾಜಿ ಸಚಿವ ಕೆ.ಎನ್.ಗಡ್ಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಪಾಟೀಲ, ಜಿಲ್ಲ ಯುವ ಘಟಕದ ಅಧ್ಯಕ್ಷ ವಿನೋದ ಅಸೂಟಿ, ಕೆ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಬಾಪುಗೌಡ ಪಾಟೀಲ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್, ಅಂತಹ ಪಕ್ಷವನ್ನು ಮುನ್ನಡೆಸುತ್ತಿರುವ ಸೋನಿಯಾ ಹಾಗೂ ರಾಹುಲ್ ಗಾಂಧಿ ವಿರುದ್ಧ ಇ.ಡಿ.ಸಂಸ್ಥೆಯ ಮೂಲಕ ನೋಟಿಸ್ ಕೊಟ್ಟು ಅವರ ವರ್ಚಸ್ಸನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ.
ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒಂದು ವರ್ಷ ನಿರಂತರ ಹೋರಾಟ ಮಾಡಿದರು ಕಿವಿಗೊಡಲಿಲ್ಲ, ಈಗ ಅಗ್ನಿಪಥ ಹೋರಾಟ ತೀವ್ರಗೊಂಡಿದೆ. ಕೇಂದ್ರ ಸರ್ಕಾರದವರು ಜನರಿಗಾಗಿ ಸರ್ಕಾರ ನಡೆಸುತ್ತಿಲ್ಲ, ಕೇವಲ ಅದಾನಿ ಹಾಗೂ ಅಂಬಾನಿಗೊಸ್ಕರ ಸರ್ಕಾರ ನಡೆಸುತ್ತಿದ್ದಾರೆ.
ನಮ್ಮ ನಾಯಕರ ವಿರುದ್ಧ ಎಂತಹ ಪ್ರಕರಣಗಳನ್ನು ದಾಖಲಿಸಿದರೂ ಕಾರ್ಯಕರ್ತರು ಎದೆಗುಂದಬಾರದು, ದೇಶಾದ್ಯಂತ ಕಾರ್ಯಕರ್ತರು ಅವರ ಬೆಂಬಲಕ್ಕಿದ್ದೇವೆಂದು ಹೇಳಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಲಿಂಗರಾಜ ವೃತ್ತದ ಬಳಿ ಸಮಾವೇಶಗೊಂಡ ಎಲ್ಲರೂ ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು, ನಂತರ ಮೆರವಣಿಗೆ ಮೂಲಕ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು.
ನವಲಗುಂದ ಬ್ಲಾಕ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಮುಖಂಡರಾದ ಮಂಜು ಮಾಯಣ್ಣವರ, ಶಿವಾನಂದ ಕರಿಗಾರ, ಆರ್.ಎಚ್.ಕೋನರಡ್ಡಿ, ವಿಜಯಗೌಡ ಪಾಟೀಲ, ಅಪ್ಪಣ್ಣ ಹಳ್ಳದ, ಮಂಜು ಜಾಧವ, ಸದುಗೌಡ ಪಾಟೀಲ, ಕಿರಣ ಉಳ್ಳಿಗೇರಿ, ಅಷ್ಪಾಕ ಮುಲ್ಲಾ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.