ವಿಜಯಸಾಕ್ಷಿ ಸುದ್ದಿ, ಗದಗ
ಒಂದೆಡೆ, ದೇಶದಾದ್ಯಂತ ಕೋಮುಗಲಭೆ ಪ್ರಕರಣಗಳು ಹೆಚ್ಚುತ್ತ, ಸಾರ್ವಜನಿಕರಿಗೆ, ಪೊಲೀಸ್ ಇಲಾಖೆಯವರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ರಾಜ್ಯಾದ್ಯಂತ ಪ್ರತಿನಿತ್ಯ ಒಂದಿಲ್ಲೊಂದು ಇಂಥ ಕೋಮುಸೌಹಾರ್ದತೆ ಕದಡುವ ಪ್ರಕರಣಗಳು ವರದಿಯಾಗುತ್ತಿದ್ದು, ಗದಗದಲ್ಲಿ ಮಕ್ಕಳಿಗೆ ಶಾಂತಿ-ಸಹಬಾಳ್ವೆಯ ಪಾಠ ಹೇಳಬೇಕಿದ್ದ ಶಾಲಾ ಮುಖ್ಯೋಪಾಧ್ಯಾಯ ಒಬ್ಬರು ಮಕ್ಕಳಿಗೆ ಒಂದು ಧರ್ಮದ ಕುರಿತಾಗಿ ಪ್ರಬಂಧ ಬರೆಯಿಸಲು ಮುಂದಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗದಗ ತಾಲೂಕಿನ ನಾಗಾವಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು, ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತ ಪುಸ್ತಕವನ್ನು ನೀಡಿ, ಇದೇ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಎ.ಎಂ. ಬಿಜಾಪುರರ ವಿರುದ್ಧ ಶ್ರೀರಾಮ ಸೇನೆಯ ಆರೋಪಿಸಿ ಶಾಲೆಗೆ ನುಗ್ಗಿ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಹಮ್ಮದ್ ಪೈಗಂಬರ್ ಕುರಿತು ಉತ್ತಮ ಪ್ರಬಂಧ ಬರೆದ ವಿದ್ಯಾರ್ಥಿಗಳಿಗೆ ೫ ಸಾವಿರ ರೂ. ಬಹುಮಾನ ನೀಡುವದಾಗಿ ಘೋಷಿಸಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ, ಶಾಲೆಯಲ್ಲಿ ಇಸ್ಲಾಮೀಕರಣ, ಮತಾಂತರ ಮಾಡಲು ಹೊರಟಿದ್ದೀರಿ ಎಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.
ಅಲ್ಲದೆ, ಶೈಕ್ಷಣಿಕ ಪಠ್ಯಪುಸ್ತಕದಲ್ಲಿ ಪೈಗಂಬರರ ಕುರಿತಾದ ಯಾವುದೇ ಪಠ್ಯವಿಲ್ಲ. ಸರ್ಕಾರವೂ ಇಂಥದೊಂದು ಸ್ಪರ್ಧೆ ಆಯೋಜಿಸಿ ಬಹುಮಾನ ನೀಡಿ ಎಂದು ನಿರ್ದೇಶನ ನೀಡಿಲ್ಲ. ಹೀಗಿದ್ದಾಗ, ಯಾವುದೇ ಆದೇಶವಿಲ್ಲದೇ ಕೋಮು ಸಂಘರ್ಷಕ್ಕೆ ಕಾರಣವಾಗಬಹುದಾದ ವಿಷಯದ ಬಗ್ಗೆ ಸ್ಪರ್ಧೆ ಏರ್ಪಡಿಸಿ, ಮಕ್ಕಳಲ್ಲಿ ಕೋಮು ದಳ್ಳುರಿಯ ಬೀಜ ಬಿತ್ತಲು ಹೊರಟಿದ್ದೇಕೆ ಎಂದು ಸೇನೆಯ ಕಾರ್ಯಕರ್ತರು ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಕೂಡಲೇ ಜಿಲ್ಲಾ ಪಂಚಾಯತ ಸಿಇಓ ಹಾಗೂ ಡಿಡಿಪಿಐ ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಬೇಕೆಂದು ಪಟ್ಟು ಹಿಡಿದರು ಎನ್ನಲಾಗಿದೆ. ಗಲಾಟೆ ನಡೆಯುತ್ತಿರುವ ಸ್ಥಳಕ್ಕೆ ಗದಗ ಗ್ರಾಮೀಣ ಠಾಣೆಯ ಸಿಪಿಐ ಚಂದ್ರಶೇಖರ ಹರಿಹರ ಭೇಟಿ ನೀಡಿ ಮುಖ್ಯ ಶಿಕ್ಷಕ ಅಬ್ದುಲ್ ಮುನಾಫ್ ಬಿಜಾಪುರರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರ ಉತ್ತರದಿಂದ ಸಮಾಧಾನಗೊಳ್ಳದ ಶ್ರೀರಾಮ ಸೇನೆಯ ಕಾರ್ಯಕರ್ತರು ತಕ್ಷಣ ಮುಖ್ಯ ಶಿಕ್ಷಕ ಅಬ್ದುಲ್ ಹನೀಫ್ರನ್ನು ಅಮಾನತು ಮಾಡಬೇಕು ಮತ್ತು ಶಿಕ್ಷಣ ಇಲಾಖೆ ಹಾಗೂ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು.
ಶ್ರೀರಾಮ ಸೇನಾದ ವಿಭಾಗೀಯ ಸಂಚಾಲಕ ರಾಜು ಖಾನಪ್ಪನವರ, ಮುಖಂಡರಾದ ಮಹೇಶ್ ರೋಖಡೆ ಸೇರಿದಂತೆ ಹಲವು ಕಾರ್ಯಕರ್ತರಿದ್ದರು.
ದುರದ್ದೇಶ ಇಲ್ಲ
ಈ ಹಿಂದೆ ಡಾ, ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ಸೇರಿದಂತೆ ಹಲವು ಮಹನೀಯರ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಇದರ ಹಿಂದೆ ಯಾವುದೇ ದುರದ್ದೇಶ ಇಲ್ಲ ಎಂದು ಮುಖ್ಯ ಶಿಕ್ಷಕ ಬಿಜಾಪುರ ಪ್ರತಿಕ್ರಿಯೆ ನೀಡಿದರು.