ವಿಜಯಸಾಕ್ಷಿ ಸುದ್ದಿ, ಗದಗ
ನಿನ್ನನ್ನು ಪ್ರೀತಿಸುತ್ತಿದ್ದು, ಮದುವೆಯೂ ಆಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಂಬಿಸಿ, ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿದ ಆರೋಪಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಆರೋಪಿ ಆಸೀಫ್ ಹುಸೇನಸಾಬ ಕುಸುಗಲ್ ಇವನು ಪ್ರಕರಣದ ಫಿರ್ಯಾದಿದಾರರ ಅಲ್ಪವಯಿ ಮಗಳನ್ನು ಪರಿಚಯ ಮಾಡಿಕೊಂಡು, ಮದುವೆಯಾಗುವುದಾಗಿ ನಂಬಿಸಿ, ಗದಗ ಶಹರದ ಟಾಂಗಾಕೂಟ ಹತ್ತಿರ ಬರಲು ಹೇಳಿ, ಅಲ್ಲಿಂದ ಅಪಹರಿಸಿ ಮಂಗಳೂರಿಗೆ ಹೋಗಿ ಅಲ್ಲಿ ಮೋಹನ ತಿಮ್ಮಪ್ಪ ಎಂಬುವರಿಗೆ ಸೇರಿದ ಇಂಡಸ್ಟ್ರೀಸ್ ದಲ್ಲಿರುವ ಒಂದು ರೂಮಿನಲ್ಲಿ ಅಪ್ರಾಪ್ತ ವಯಸ್ಸಿನ ಸಂತೃಸ್ತ ಬಾಲಕಿಯನ್ನು ಅಕ್ರಮ ಬಂಧನದಲ್ಲಿಟ್ಟು, ಅತ್ಯಾಚಾರ ನಡೆಸಿದ ಅಪರಾಧವೆಸಗಿದ ಕುರಿತು ಆರೋಪಿತನ ವಿರುದ್ಧ ಅಂದಿನ ಗದಗ ಶಹರ ಠಾಣೆಯ ಸಿಪಿಐ ನಾಗರಾಜ ಎಂ.ಮಾಡಳ್ಳಿ ಅವರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ ಎಸ್. ಶೆಟ್ಟಿ ಅವರು, ಸದರ ಪ್ರಕರಣದಲ್ಲಿ ಆರೋಪ ರುಜುವಾದ ಹಿನ್ನೆಲೆಯಲ್ಲಿ, ಆರೋಪಿತನಾದ ಆಸೀಫ್ ಹುಸೇನಸಾಬ ಕುಸುಗಲ್ನಿಗೆ ಡಿ.5ರಂದು ಭಾ.ದಂ.ಸಂ ಕಲಂ: 363 ಭಾದಂಸಂ ರಡಿ 3 ವರ್ಷ ಸಾದಾ ಶಿಕ್ಷೆ, ರೂ. 5,000 ದಂಡ, ಕಲಂ: 344 ಭಾದಂಸಂ ರಡಿ 1 ವರ್ಷ ಸಾದಾ ಶಿಕ್ಷೆ ಹಾಗೂ ರೂ. 1,000 ದಂಡ, 376 (2)(i) ಭಾದಂಸಂ ರಡಿ 10 ವರ್ಷ ಕಠಿಣ ಶಿಕ್ಷೆ ಹಾಗೂ ರೂ. 10,000 ದಂಡ ಮತ್ತು ಕಲಂ 4 ಪೋಕ್ಸೋ ಕಾಯ್ದೆಯಡಿ 10 ವರ್ಷ ಕಠಿಣ ಶಿಕ್ಷೆ ಹಾಗೂ ರೂ. 25,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ವಾದ ಮಂಡಿಸಿದ್ದರು ಎಂದು ಪ್ರಕಟಣೆಯಾದ ತಿಳಿಸಲಾಗಿದೆ.