ಕಳಸಾ-ಬಂಡೂರಿ ಡಿ.ಪಿ.ಆರ್ ಜಯ ರೈತ ಹೋರಾಟಗಾರರಿಗೆ ಸಲ್ಲಬೇಕು
ವಿಜಯಸಾಕ್ಷಿ ಸುದ್ದಿ, ನವಲಗುಂದ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ರಾಜ್ಯದ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು ಅದರಲ್ಲಿ ರೈತರ ಬಂಡಾಯದ ನೆಲವಾದ ನವಲಗುಂದ ಕ್ಷೇತ್ರದಲ್ಲಿಯೂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಅನಂತಕುಮಾರ ಬುಗಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ಇಲ್ಲಿನ ಲೋಕೊಪಯೋಗಿ ಇಲಾಖೆಯ ನಿರೀಕ್ಷಣಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮತದಾರರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಆಮ್ ಆದ್ಮಿ ಪಕ್ಷ ದೆಹಲಿ ಮತ್ತು ಪಂಚಾಬ್ ರಾಜ್ಯಗಳಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿ ದೇಶದಲ್ಲಿಯೇ ಮಾದರಿ ಆಡಳಿತ ಮಾಡುತ್ತಿರುವುದು ಸಾಕ್ಷಿಯಾಗಿದೆ. ಇದೇ ಮಾದರಿಯ ಆಡಳಿತವನ್ನು ಕೊಡುವ ಸ್ಪಷ್ಟ ಭರವಸೆಯೊಂದಿಗೆ ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ‘ಜನರ ತೆರಿಗೆ, ಜನರ ಸೇವೆಗೆ’ ಎಂಬ ಘೋಷವಾಕ್ಯದೊಂದಿಗೆ ಸ್ಪರ್ಧಿಸಲಿದ್ದು ಮತದಾರರು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಮುಖಂಡರಾದ ವಿಕಾಸ ಸೊಪ್ಪಿನ ಮಾತನಾಡಿ, ಈ ನಾಡಿನ ರೈತರು ನಿರಂತರ ಹೊರಾಟ, ಜೈಲುವಾಸ, ಪೊಲೀಸರ ಬೂಟಿನೇಟು, ಉಪವಾಸ ಸತ್ಯಾಗ್ರಹದಂತಹ ಚಳುವಳಿ ಮಾಡಿದ ಫಲವಾಗಿ ಮಹದಾಯಿ ಹಾಗೂ ಕಳಸಾ ಬಂಡೂರಿ ಹೋರಾಟಕ್ಕೊಂದು ಜಯ ಸಿಕ್ಕಿದೆ.
ರೈತರ ಹೋರಾಟಕ್ಕೆ ಮಣಿದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಡಿ.ಪಿ.ಆರ್ ಗೆ ಮಂಜೂರಾತಿ ನೀಡಿವೇ ಹೊರತು ಬಿಜೆಪಿಯವರ ಕಸರತ್ತು ಇದರಲ್ಲಿ ಏನು ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ನಿಜವಾದ ಹೊರಾಟಗಾರರಿಗೆ ಕಿಂಚಿತ್ತು ಕಿಮ್ಮತ್ತು ಕೊಡದೇ ನಾನೇನೊ ಸಾಧನೆ ಮಾಡಿದ್ದೇನೆಂದು ಚುನಾವಣಾ ಸಂದರ್ಭದಲ್ಲಿ ಲಾಭ ಮಾಡಿಕೊಳ್ಳಲು ಹೊರಟಿರುವುದು ಹಾಸ್ಯಾಸ್ಪದ. ಮುಗ್ದ ರೈತ ಬಾಂಧವರು ಬಂಡ ಬಿಜೆಪಿ ಪಕ್ಷವನ್ನು ನಂಬಬಾರದೆಂದು ಹೇಳಿದರು.
ನವಲಗುಂದ ವಿಧಾನಸಭಾ ಕ್ಷೇತ್ರದ ಸಂಚಾಲಕ ಡಾ.ಎಂ.ಜೆ.ಜೇಡರ ಮಾತನಾಡಿ, ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುವುದೇ ನಮ್ಮ ಮೂಲ ಉದ್ದೇಶವಾಗಿದೆ. ಪ್ರತಿ ಗ್ರಾಮ ಗ್ರಾಮಗಳಿಗೂ ನಾನು ಸಂಚರಿಸಿ ಜನರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಜನರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಪಕ್ಷಗಳ ಭರವಸೆಗಳನ್ನು ನಂಬಿ ಬೇಸತ್ತು ಹೋಗಿದ್ದಾರೆ. ಖಂಡಿತವಾಗಿಯು ಈ ಭಾರಿ ಬದಲಾವಣೆ ಮಾಡುವ ಮನಸ್ಥಿತಿ ಹೊಂದಿದ್ದಾರೆ. ಕಾರಣ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ ಜನರ ತೆರಿಗೆ ಹಣ ಜನರ ಸೇವೆಗಾಗಿಯೇ ಇಟ್ಟು, ಗುತ್ತಿಗೆದಾರರ ಬಳಿಯಾಗಲಿ, ಜನರ ಬಳಿಯಾಗಲಿ ಒಂದು ನಯಾಪೈಸೆಯನ್ನು ತೆಗೆದುಕೊಳ್ಳದೇ ಸೇವೆ ಮಾಡುತ್ತೇನೆಂದು ಭರವಸೆ ನೀಡಿದರು.
ಸ್ಥಳಿಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಹಾಂತೇಶ ಕಮತರ, ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಹಿರೇಮಠ ಉಪಸ್ಥಿತರಿದ್ದರು.