ವರ್ಗಾವಣೆಗೆ ಲಂಚ ನೀಡುವಾಗ ಲೋಕಾಯುಕ್ತ ದಾಳಿ: ಗೃಹರಕ್ಷಕ ದಳದ ಸಮಾದೇಷ್ಠ ಸೇರಿ ಇಬ್ಬರು ಬಲೆಗೆ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಗೃಹರಕ್ಷಕನನ್ನು ಮುನಿರಾಬಾದಿನಿಂದ ಗಂಗಾವತಿಗೆ ವರ್ಗಾವಣೆ ಮಾಡಲು ಗೃಹ ರಕ್ಷಕ ದಳದ ಸಮಾದೇಷ್ಠ ಹಾಗೂ ನೌಕರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳವಾರ ಕೊಪ್ಪಳದಲ್ಲಿ ನಡೆದಿದೆ.
ಮುನಿರಾಬಾದ್ನಲ್ಲಿ ಗೃಹರಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮೆಹಬೂಬಪಾಷಾ ಮಿಸ್ಕಿನ್ಸಾಬ್ ಅವರು ಜನವರಿ 14ರಂದು ಕೊಪ್ಪಳದಲ್ಲಿ ಇರುವ ಗೃಹ ರಕ್ಷಕ ದಳದ ಸಮೇದೇಷ್ಠ ಗವಿಸಿದ್ದಪ್ಪ ಅವರನ್ನು ಭೇಟಿಯಾಗಿ ಗಂಗಾವತಿಗೆ ವರ್ಗಾವಣೆ ಮಾಡಲು ಕೋರಿದ್ದಾರೆ. ಗವಿಸಿದ್ದಪ್ಪ ಅವರು ವರ್ಗಾವಣೆ ಮಾಡು 10 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರೆ.
ಜನವರಿ 17ರಂದು (ಮಂಗಳವಾರ) ವರ್ಗಾವಣೆಗೆ ಹಣಕಾಸಿನ ವಿಚಾರದಲ್ಲಿ ಇವರಿಬ್ಬರ ನಡುವೆ ಚೌಕಾಸಿ ನಡೆದು, ಕೊನೆಗೆ 6 ಸಾವಿರ ರೂಪಾಯಿಗೆ ವರ್ಗಾವಣೆ ಮಾಡಲು ಸಮಾದೇಷ್ಠ ಗವಿಸಿದ್ದಪ್ಪ ಅವರು ಒಪ್ಪಿ ಲಂಚ ಸ್ವೀಕರಿಸುವಾಗ ಸಮಾದೇಷ್ಠ ಗವಿಸಿದ್ದಪ್ಪ ಮತ್ತು ಗೃಹರಕ್ಷಕ ದಳದ ಘಟಕಾಧಿಕಾರಿ ರುದ್ರಪ್ಪ ಗಿರಿಯಪ್ಪ ಪತ್ತಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚದ ಹಣ ಜಪ್ತಿ ಮಾಡಿರುವ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದಾಳಿಯು ಲೋಕಾಯುಕ್ತ ಅಧೀಕ್ಷಕ ಡಾ.ರಾಮ ಅರಸಿದ್ದಿ ಮಾರ್ಗದರ್ಶನದಲ್ಲಿ, ಉಪ ಅಧೀಕ್ಷಕ ಸಲೀಂಪಾಷಾ ನೇತೃತ್ವದಲ್ಲಿ ಪಿಐಗಳಾದ ಚಂದ್ರಪ್ಪ ಈಟಿ, ರಾಜೇಶ್ ಬಟಗುರ್ಕಿ, ಗಿರೀಶ್ ರೋಡ್ಕರ್ ಮತ್ತಿತರ ಸಿಬ್ಬಂದಿಯಿಂದ ನಡೆಯಿತು.



