ಹಾಸನ: ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆ ಆಗುವ ಬಗ್ಗೆ ನಮ್ಮಗಳ ಯಾರ ಗಮನಕ್ಕೂ ತಿಳಿಸದೇ ಮಧ್ಯಮದ ಮೂಲಕ ತಿಳಿದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅಸಮಧಾನ ಹೊರಹಾಕಿದ ಪ್ರಸಂಗ ನಡೆಯಿತು.
ನಗರದ ಹಾಸನಾಂಬೆ ದೇವಿ ದರ್ಶನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಜೆಡಿಎಸ್ನ ಮಾಜಿ ಶಾಸಕರುಗಳಾದ ಗೌರಿಶಂಕರ್ ಹಾಗೂ ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಬಹಿರಂಗವಾಗಿಯೇ ಅಸಮಾಧಾನ, ವಿರೋಧ ವ್ಯಕ್ತಪಡಿಸಿದರು.
ಈ ವಿಚಾರವನ್ನು ನಾನು ಮಾಧ್ಯಮದ ಮೂಲಕ ತಿಳಿದೆ. ಸಲೀಂ ಅಹಮದ್ ಅವರು ಫೋನ್ ಮಾಡಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಇದ್ದು, ಅಧ್ಯಕ್ಷರು ಬರುವುದಕ್ಕೆ ಹೇಳಿದ್ದಾರೆ ಬನ್ನಿ ಅಂದ್ರು. ಆಯ್ತು ಅಂದಿದ್ದು, ನನಗೆ ಬೇರೆ ಕಾರ್ಯಕ್ರಮ ಇತ್ತು ಬಂದಿದ್ದೀನಿ ಎಂದು ಹೇಳಿರುವೆನು.
ಕಾಂಗ್ರೆಸ್ ಪಕ್ಷ ಒಂದು ರೀತಿ ಸಮುದ್ರ. ಸಮುದ್ರಕ್ಕೆ ಗಂಗಾಮಾತೆಯಂತ ಪವಿತ್ರವಾದ ಜಲನೂ ಬರುತ್ತದೆ. ಪಕ್ಕದಲ್ಲಿರುವ ಚರಂಡಿ ನೀರು ಸೇರುತ್ತದೆ. ಸಮುದ್ರದಲ್ಲಿ ವಿಷನೂ ಇದೆ, ಅಮೃತನೂ ಇದೆ.
ವಿಷ ಸಿಗೋರಿಗೆ ವಿಷ ಸಿಗುತ್ತೆ, ಅಮೃತ ಸಿಗೋರಿಗೆ ಅಮೃತ ಸಿಗುತ್ತೆ. ನಮ್ಮ ಜಿಲ್ಲೆಯಲ್ಲಿರುವ ಯಾರ ಜೊತೆ ಸಂಪರ್ಕ ಮಾಡದೆ ಸೇರಿಸಿಕೊಂಡಿರುವುದು ನಮ್ಮೆಲ್ಲರಿಗೂ ಅಸಮಾಧಾನ ಇದೆ ಎಂದು ಬಹಿರಂಗವಾಗಿ ಹೇಳಿದರು.
ನನ್ನ ಜೊತೆನೂ ಚರ್ಚೆ ಮಾಡಿಲ್ಲ, ನಮ್ಮ ಜಿಲ್ಲೆ ಮುಖಂಡರ ಜೊತೆನೂ ಚರ್ಚೆ ಮಾಡಿಲ್ಲ. ಪರಮೇಶ್ವರ್ ಆಗಲಿ, ನನಗಾಲಿ, ನಮ್ಮ ಜಿಲ್ಲೆಯ ಶಾಸಕರಗಳಾಗಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗಾಗಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗಾಗಲಿ ಯಾರೂ ಕೂಡ ಬಂದು ಈ ರೀತಿ ಇದೆ, ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ, ಬಿಡಬೇಕ ಅಂತ ಕೇಳಲೇ ಇಲ್ಲಾ. ಸೇರಿಸಿಕೊಂಡಿದ್ದರೆ ಸಂತೋಷ, ನಮಗೇನು ಅಸಮಾಧಾನ ಇಲ್ಲ. ನಮ್ಮ ಜಿಲ್ಲೆ ರಾಜಕಾರಣ ಏನೇ ಇದ್ದರೂ ಎಂತಹ ಸಂದರ್ಭ ಬಂದರೂ ನಿಭಾಯಿಸುವ ಶಕ್ತಿಯನ್ನು ನಮ್ಮ ಜಿಲ್ಲೆಯ ಜನ ಕೊಟ್ಟಿದ್ದಾರೆ.
ಪರಮೇಶ್ವರ್ಗೂ ಕೊಟ್ಟಿದ್ದಾರೆ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳಿಗೂ ಕೊಟ್ಟಿದ್ದಾರೆ. ಎಂತಹ ಸಂದರ್ಭ ಬಂದರೂ ನಿಭಾಯಿಸಿಕೊಳ್ಳುತ್ತೇವೆ. ನಾವೇನೂ ಅಂತ ಅಸಕ್ತರೇನಲ್ಲ. ನಾನು ಎಂಪಿ ಟಿಕೆಟ್ ಕೇಳ್ತಿನಿ, ನಿಲ್ತಿನಿ ಅಂತ ಹೇಳಿದ್ದೇನೆ. ಲೋಕಸಭೆನಲ್ಲಿ ಒಂದು ಅವಕಾಶ ಸಿಕ್ಕರೆ ನಮ್ಮ ಜಿಲ್ಲೆಯಿಂದ ಪ್ರತಿನಿಧಿಸಬೇಕು ಅಂತ ಇದ್ದೇನೆ. ನನ್ನ ಅನಿಸಿಕೆಯನ್ನು ಹೈಕಮಾಂಡ್ ಮುಂದೆ ಮಂಡಿಸಿದ್ದೇನೆ. ಹೈಕಮಾಂಡ್ನವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರು ನಿಲ್ಲು ಎಂದರೆ ನಿಲ್ಲುತ್ತೇನೆ. ಮಂತ್ರಿಯಾಗಿರು ಅಂದ್ರೆ ಮಂತ್ರಿಯಾಗಿ ಇರ್ತಿನಿ.
ಮುದ್ದ ಹನುಮೇಗೌಡರು ಪಕ್ಷಕ್ಕೆ ಬರ್ತಾರೆ ಅನ್ನೋದನ್ನ ಖಚಿತವಾಗಿ ಹೇಳಲು ಆಗಲ್ಲ. ಅವರ ಬಹಳಷ್ಟು ಸ್ನೇಹಿತರು ಬರುವ ಇಂಗಿತವನ್ನು ತೋರಿಸಿದ್ದಾರೆ. ಬಂದೋರೆಲ್ಲಾ ಆಕಾಂಕ್ಷಿಗಳಿರುತ್ತಾರೆ ಎಂದು ವ್ಯಂಗ್ಯವಾಗಿ ಮಾತನಾಡಿದರು.