ನೆಲಮಂಗಲದ ಸೋಲದೇವನಹಳ್ಳಿ ತೋಟದಲ್ಲೇ ಹಿಂದೂ ಸಂಪ್ರದಾಯದಂತೆ ಲೀಲಾವತಿ ಅವರ ಅಂತ್ಯಕ್ರಿಯೆ ನಡೆಯಿತು. ಅಂತಿಮ ವಿಧಿ ವಿಧಾನ ಕಾರ್ಯವನ್ನು ಪುತ್ರ ವಿನೋದ್ ರಾಜ್ ಹಾಗೂ ಮೊಮ್ಮಗ ಯುವರಾಜ್ ನೆರವೇರಿಸಿದರು. ಬೆಂಗಳೂರಿನಿಂದ ಪಾರ್ಥಿವ ಶರೀರ ಹೊತ್ತು ತಂದ ಅಂಬುಲೆನ್ಸ್ ಅನ್ನು ಅಲ್ಲಲ್ಲಿ ತಡೆದು, ಲೀಲಾವತಿ ಅವರ ಅಂತಿಮ ದರ್ಶನ ಪಡೆದರು ಅಭಿಮಾನಿಗಳು.
ಅದರಲ್ಲೂ ಸೋಲದೇವನಹಳ್ಳಿ ಸುತ್ತಲಿನ ಅನೇಕ ಗ್ರಾಮಸ್ಥರು, ಮನವಿ ಮಾಡಿಕೊಂಡು ಅಂಬುಲೆನ್ಸ್ ನಿಲ್ಲಿಸುವಲ್ಲಿ ಯಶಸ್ವಿ ಆದರು. ತಮ್ಮ ನೆಚ್ಚಿನ ನಟಿಯ ಅಂತಿಮ ದರ್ಶನ ಪಡೆದರು. ಬೆಂಗಳೂರಿನಿಂದ ತಂದೆ ಪಾರ್ಥಿವ ಶರೀರವನ್ನು ನವಿಲಿನಾಕೃತಿಯ ವಿಶೇಷ ಹೂವಿನ ಪಲ್ಲಕ್ಕಿಯಲ್ಲಿ ಕೂರಿಸಲಾಯಿತು.
200 ಮೀಟರ್ ಉದ್ದ ಪಾರ್ಥಿವ ಶರೀರದ ಮೆರವಣಿಗೆ ಕೂಡ ಮಾಡಲಾಯಿತು. ನಂತರ ಪೊಲೀಸ್ ಗೌರವ ಸಲ್ಲಿಸಲಾಯಿತು. ಅನೇಕ ಗಣ್ಯರು ಮತ್ತೊಂದು ಬಾರಿ ಅಂತಿಮ ನಮನ ಸಲ್ಲಿಸಿದ ಬಳಿಕ ಹಿಂದೂ ಸಂಪ್ರದಾಯದಂತೆ ಅಗಲಿದ ನಟಿಯ ಅಂತ್ಯ ಸಂಸ್ಕಾರ ನಡೆಸಲಾಯಿತು.