ವಿಜಯಸಾಕ್ಷಿ ಸುದ್ದಿ, ಗದಗ :
ಫೆ.27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸರಕಾರಿ ನೌಕರರ ಮಹಾಸಮ್ಮೇಳನದಲ್ಲಿ ಗದಗ ಜಿಲ್ಲೆಯ ವತಿಯಿಂದ 4 ಸಾವಿರ ಸರಕಾರಿ ನೌಕರರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಗುಂಜೀಕರ ಕರೆ ನೀಡಿದರು.
ಗದಗ ಸರಕಾರಿ ನೌಕರ ಭವನದಲ್ಲಿ ಇತ್ತೀಚೆಗೆ ಫೆ.27ರ ಸರಕಾರಿ ನೌಕರರ ಮಹಾ ಸಮ್ಮೇಳನದ ಅಂಗವಾಗಿ ನಡೆಸಿದ ಗದಗ ಜಿಲ್ಲಾ ಓಬಿಸಿ ಇಲಾಖಾ ಸಿಬ್ಬಂದಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು 7ನೇ ವೇತನ ಆಯೋಗದ ವರದಿ ತರಿಸಿ ಅದರ ಪರಿಶೀಲನೆ ನಡೆಸಿ ಅನುಷ್ಠಾನ ಮಾಡುವ ಭರವಸೆಯನ್ನು ಮುಂಗಡಪತ್ರದಲ್ಲಿ ನೀಡಿದ್ದಾರೆ. ಈ ವೇತನದಲ್ಲಿ ನಿವೃತ್ತ ನೌಕರ ಬಾಂಧವರು, ವಿವಿಧ ವೃಂದಗಳ ನೌಕರರು, ನಿಗಮ ಮತ್ತು ಸ್ಥಳೀಯ ಸಂಸ್ಥೆಗಳ ನೌಕರ ಬಾಂಧವರು ಬರಲಿದ್ದಾರೆ. ಆ ಹಿನ್ನೆಲೆಯಲ್ಲಿ ಫೆ. 27ರಂದು ನಡೆಯಲಿರುವ ಸರಕಾರಿ ನೌಕರರ ಮಹಾಸಮ್ಮೇಳನದಲ್ಲಿ 7ನೇ ವೇತನ ಆಯೋಗದ ವ್ಯಾಪ್ತಿಯಲ್ಲಿ ಬರುವವರು ಎಲ್ಲರೂ ಭಾಗವಹಿಸಬೇಕಿದೆ ಎಂದರು.
ಇದಕ್ಕಾಗಿ ಗದಗ ಜಿಲ್ಲೆಯಿಂದ 30 ಬಸ್ಗಳ ವ್ಯವಸ್ಥ್ಯೆಯನ್ನೂ ಮಾಡಲಾಗಿದೆ, ನೌಕರ ಬಾಂಧವರಿಗೆ 2 ದಿನದ ವಿಶೇಷ ಸಾಂದರ್ಭಿಕ ರಜೆಯನ್ನೂ ಕೊಡಿಸಲಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಈ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಸಮ್ಮೇಳನ ಯಶಸ್ವಿಗೆ ಕೈಜೋಡಿಸಬೇಕಿದೆ. ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರ ಅಧ್ಯಕ್ಷತೆಯಲ್ಲಿ ಸಂಘ ನಿರಂತರವಾಗಿ ಸಂಘಟನೆಯಲ್ಲಿ ತೊಡಗಿ ಸರಕಾರಿ ನೌಕರರಿಗೆ ಅಗತ್ಯವಿರುವ ಹಲವಾರು ಆದೇಶಗಳನ್ನು ರಾಜ್ಯ ಸರಕಾರದಿಂದ ಹೊರಡಿಸಿ ಸರಕಾರಿ ನೌಕರರ ಜನಮನ್ನಣೆಗೆ ಭಾಜವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಪದಾಧಿಕಾರಿ ಕೆ.ಬಿ. ಕೊಣ್ಣೂರು, ಓಬಿಸಿ ತಾಲೂಕು ಅಧಿಕಾರಿಗಳಾದ ಚುಂಚಾ, ಕಲ್ಮಠ ಸೇರಿದಂತೆ 200 ಸಿಬ್ಬಂದಿಗಳಿದ್ದರು.
ಗದಗ ಜಿಲ್ಲಾ ಸಂಘದ ಗೌರವಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಮಾತನಾಡಿ, ರಾಜ್ಯ ಉಪಾಧ್ಯಕ್ಷ ರವಿ ಗುಂಜೀಕರ ಅವರ ನೇತೃತ್ವದಲ್ಲಿ ಗದಗ ಜಿಲ್ಲೆಯಿಂದ 4 ಸಾವಿರ ನೌಕರ ಬಾಂಧವರು ಆ ಮಹಾಸಮ್ಮೇಳನದಲ್ಲಿ ಭಾಗವವಹಿಸೋಣ. ನಾವೆಲ್ಲರೂ ಸಂಘಟಿತರಾಗಿ, ಸಂಘ ಬಲಿಷ್ಠಗೊಳಿಸಿ ಆ ಮೂಲಕ 7ನೇ ವೇತನ ಆಯೋಗ ಅನುಷ್ಠಾನ, ಹಳೆಯ ಪಿಂಚಣಿ ಯೋಜನೆ ಜಾರಿ ಮತ್ತು ಆರೋಗ್ಯ ಸಂಜೀವಿನಿ ಯೋಜನೆಗಳ ಬೇಡಿಕೆಗಳನ್ನ ಈಡೇರಿಸಿಕೊಳ್ಳುವಲ್ಲಿ ಮುಂದಾಗೋಣ ಎಂದರು.