ವಿಜಯಸಾಕ್ಷಿ ಸುದ್ದಿ, ಗದಗ : ಕಾವ್ಯಗಳಲ್ಲಿಯೇ ನಾಟಕ ರಮ್ಯವಾದುದು. ನವರಸಗಳಿಂದ ಸಂಪದ್ಭರಿತವಾದ ನಾಟಕಗಳು ಜನಮಾನಸವನ್ನು ಬೇಗನೇ ತಲುಪಿ ಮನರಂಜನೆಯೊಂದಿಗೆ ಮೌಲ್ಯಗಳನ್ನು ಬಿತ್ತುವ ಕಾರ್ಯವನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿವೆ. ಕನ್ನಡದ ರಂಗಭೂಮಿಗೆ ಜಿಲ್ಲೆಯ ಕೊಡುಗೆ ಅಪಾರವಾದುದು ಎಂದು ತೋಂಟದ ಸಿದ್ಧರಾಮಸ್ವಾಮಿಗಳು ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತೋಂಟದಾರ್ಯ ಕಲಾರಂಗ ಹಾಗೂ ರಂಗಾಸಕ್ತರ ಬಳಗದ ಸಹಯೋಗದಲ್ಲಿ ಜರುಗಿದ ಮೂರು ದಿನಗಳ ಸಾಣೇಹಳ್ಳಿ ಶಿವಸಂಚಾರ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಜನರ ಮನಸ್ಸನ್ನು ಅರಳಿಸುವ, ಸಂತೋಷವನ್ನು ನೀಡುವ, ಸಮಾಜಕ್ಕೆ ಸಂದೇಶ ನೀಡಿ ಲೋಪದೋಷಗಳನ್ನು ತಿದ್ದುವ ಉದ್ದೇಶವನ್ನು ನಾಟಕಗಳು ಹೊಂದಿರುತ್ತವೆ. ಆಧುನಿಕ ತಂತ್ರಜ್ಞಾನಗಳ ಭರಾಟೆಯಲ್ಲಿ ಮುಳುಗಿರುವ ಜನರಿಗೆ ನೇರವಾಗಿ ನಡೆಯುವ ಸನ್ನಿವೇಶಗಳನ್ನು ತೊರಿಸುವ ಕಾರ್ಯ ನಡೆದಿರುವದು ಸಂತೋಷದ ಸಂಗತಿಯಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಗದಗ ಸಾಂಸ್ಕೃತಿಕವಾಗಿ ಶ್ರೀಮಂತ ಪ್ರದೇಶವಾಗಿದೆ. ಕರ್ನಾಟಕದ ನಿಜವಾದ ಸಾಂಸ್ಕೃತಿಕ ರಾಜಧಾನಿ ಗದಗ. ಇಲ್ಲಿ ಸಾಹಿತ್ಯ, ಸಂಗೀತ, ರಂಗಭೂಮಿ ಕ್ಷೇತ್ರಗಳು ಪ್ರಾಚೀನ ಕಾಲದಿಂದಲೂ ಮೂಲನೆಲೆಯಾಗಿ ಗುರುತಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ಸಂಘಟನೆಗಳ ಜೊತೆಗೂಡಿ ಸಾಂಸ್ಕೃತಿಕ ವೈಭವವನ್ನು ಪಸರಿಸುವ ಕಾರ್ಯ ಮಾಡುತ್ತಿದೆ. ಈ ಕಾರ್ಯಕ್ಕೆ ಸಾಂಸ್ಕೃತಿಕ ಮನಸ್ಸಿನ ಜನ ಕೈಜೋಡಿಸುತ್ತಿರುವದು ಪೂರಕ ಬೆಳವಣಿಗೆಯಾಗಿದೆ ಎಂದರು.
ವೇದಿಕೆ ಮೇಲೆ ನಾಟಕೋತ್ಸವ ಸಂಚಾಲಕರಾದ ಡಾ. ಜಿ.ಬಿ. ಪಾಟೀಲ, ಅಶೋಕ ಬರಗುಂಡಿ, ಡಾ.ಅನಂತ ಶಿವಪೂರ, ಸಾಹಿತಿಗಳಾದ ಪ್ರೊ.ಚಂದ್ರಶೇಖರ ವಸ್ತçದ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪುರಶೆಟ್ರ, ವೈದ್ಯರಾದ ಡಾ. ಶೇಖರ ಸಜ್ಜನರ ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿ ಶಿವಾನಂದ ಗಿಡ್ನಂದಿ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ವಂದಿಸಿದರು.
ಮೂರು ದಿನಗಳ ನಾಟಕೋತ್ಸವದಲ್ಲಿ ಡಾ. ನಟರಾಜ ಬೂದಾಳ ಅವರು ರಚಿಸಿದ, ಸಿ. ಬಸವಲಿಂಗಯ್ಯ ನಿರ್ದೇಶಿಸಿದ ‘ಕಲ್ಯಾಣದ ಬಾಗಿಲು’ ನಾಟಕ, ಕೆ.ಎನ್. ಸಾಳುಂಕೆ ರಚಿಸಿದ, ಮಾಲತೇಶ ಬಡಿಗೇರ ನಿರ್ದೇಶಿಸಿದ ‘ತಾಳಿಯ ತಕರಾರು’ ಹಾಗೂ ಜಯಂತ ಕಾಯ್ಕಿಣಿ ರಚಿಸಿದ ಹುಲಗಪ್ಪ ಕಟ್ಟಿಮನಿ ನಿರ್ದೇಶಿಸಿದ ‘ಜತೆಗಿರುವನು ಚಂದಿರ’ ನಾಟಕಗಳು ಪ್ರದರ್ಶನಗೊಂಡು ರಂಗಾಸಕ್ತರ ಮನ ತಣಿಸಿದವು.