ವಿಜಯಸಾಕ್ಷಿ ಸುದ್ದಿ, ಮುಳಗುಂದ : ಜಾತ್ರೆಗಳು ಮನುಷ್ಯನ ಬದುಕು ಹಸನಾಗುವಂತೆ ಮಾಡುತ್ತವೆ ಎಂದು ಬೆಂಗಳೂರು ಅಗ್ನಿಶಾಮಕ ಮತ್ತು ತುರ್ತುಸ್ಥಿತಿ ವಿಭಾಗದ ಡಿಐಜಿ ರವಿ ಚನ್ನಣ್ಣವರ ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿಗಳ ೧೬೫ನೇ ಜಾತ್ರಾ ಮಹೋತ್ಸವದ ರಥೋತ್ಸವ ನಂತರ ಜರುಗಿದ ಅನುಭಾವ ಗೋಷ್ಠಿ-೨ರಲ್ಲಿ ಮಾತನಾಡಿದರು.
ಜಾತ್ರೆಗಳು ಮನುಷ್ಯನ ಬದುಕಿನ ಕತ್ತಲೆ ಕಳೆಯುವ ಮೂಲಕ ಶರಣರ ತತ್ವ-ಸಿದ್ಧಾಂತಗಳು, ನಡೆ-ನುಡಿ, ಸಮಾಜದಲ್ಲಿ ಬದುಕುವ ರೀತಿ-ನೀತಿ ಕಲಿಸುತ್ತವೆ. ಪ್ರತಿಯೊಬ್ಬರ ಮನೆಯಲ್ಲಿ ಶರಣ-ಶರಣೆಯರು ಆಗುವಂತೆ ಸಂಸ್ಕಾರ, ಶಿಕ್ಷಣ ನೀಡುವ ಮೂಲಕ ಸ್ವಾವಲಂಬಿ ಬದುಕು ಬದುಕುವಂತೆ ಪ್ರೇರೇಪಿಸಿದಲ್ಲಿ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದರು.
ರೇವಣಸಿದ್ದಯ್ಯ ಮರಿದೇವರಮಠ ವಚನ ಸಂಗೀತ ನೀಡಿದರು. ಡಾ. ಶಿವಗಂಗಾ ರಂಜನಗಿ ಉಪನ್ಯಾಸ ನೀಡಿದರು. ದೂರದರ್ಶನ ಕಲಾವಿದರಾದ ಶರಣು ಕುರ್ನಾಳ, ಬಸವರಾಜ ಗುಡ್ಡಪ್ಪನವರ, ಮುನೀರ್ ಮುದ್ದೆಬಿಹಾಳ, ಗಂಗಾಧರ ಪೂಜಾರಿ ಇವರಿಂದ ಮನರಂಜನೆ ಜರುಗಿತು. ಗದಗ ನಿಮಿಷಾಂಬಾ ಜ್ಯೋತಿಶ್ರೀ ನಾಟ್ಯ ಅಕಾಡೆಮಿಯವರಿಂದ ಭರತನಾಟ್ಯ, ಕುಚುಪುಡಿ ನೃತ್ಯ ಜರುಗಿತು.
ಸಾನ್ನಿಧ್ಯವನ್ನು ಹಾಲಕೇರಿ, ಹೊಸಪೇಟಿ ಅನ್ನದಾನೇಶ್ವರಮಠದ ಜಗದ್ಗುರು ಬಸವಲಿಂಗ ಮಾಹಾಸ್ವಾಮಿಜಿ, ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗದೇವರು, ಡಾ.ಮಲ್ಲಿಕಾರ್ಜುನ ಮಾಹಾಸ್ವಾಮೀಜಿ ವಹಿಸಿದ್ದರು. ರಂಜನಿ ಉಪನ್ಯಾಸ ನೀಡಿದರು. ಮಾಹಾದೇವಪ್ಪ ಬಟ್ಟೂರ, ಜಾತ್ರಾ ಸಮಿತಿ ಅಧ್ಯಕ್ಷ ಬಸವರಾಜ ಬಾತಾಖಾನಿ, ಕೆ.ಎಂ. ಹೆರಕಲ್ಲ, ಶಿದ್ದು ಕತ್ತಿ, ಈರಣ್ಣ ದೊಟಿಕಲ್ಲ ಇದ್ದರು.