ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪುರಾತನ ಶ್ರೀ ಗಡ್ಡದೇವರಮಠದಲ್ಲಿ ಮಹಿಳಾ ಸಂಘಟನೆಗಳು ಶ್ರೀಮಠದ ಸಹಯೋಗದಲ್ಲಿ ಸಮೃದ್ಧ-ಮಳೆ ಬೆಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಮತ್ತು ಉಡಿ ತುಂಬಿಸುವ ಕಾರ್ಯಕ್ರಮ ನೆರವೇರಿಸಲಾಯಿತು.
ಈ ವೇಳೆ ಮಾತನಾಡಿದ ಜಯಲಕ್ಷ್ಮಿ ಗಡಗಡ್ಡದೇವರಮಠ, ನಾಡಿನಲ್ಲಿ ಸಮೃದ್ಧ ಮಳೆಯಾದರೆ ಉತ್ತಮ ಬೆಳೆ ಬಂದು ರೈತರ ಸಂಕಷ್ಟಗಳು ದೂರವಾಗುತ್ತವೆ. ಮುತ್ತೈದೆಯರಿಗೆ ಉಡಿ ತುಂಬುವದು ಅತ್ಯಂತ ಪುಣ್ಯದ ಕಾಯಕವಾಗಿದೆ. ಬರಗಾಲದಿಂದ ರೈತರು ತತ್ತರಿಸುತ್ತಿದ್ದು, ರೈತರ ಸಂಕಷ್ಟಗಳನ್ನು ದೂರ ಮಾಡುವ ಮತ್ತು ದೇಶದಲ್ಲಿ ಶಾಂತಿ ನೆಲೆಸುವಂತೆ ಲೋಕ ಕಲ್ಯಾಣಕ್ಕಾಗಿ ಈ ವಿಶೇಷ ಪೂಜಾ ಕಾರ್ಯಕ್ರಮವನ್ನು ಮಹಿಳಾ ಸಂಘಟನೆಯವರು ನಡೆಸಿರುವುದು ಪ್ರಶಂಸನೀಯ ಎಂದರು.
ಶ್ರೀ ಜಗನ್ಮಾತೆಯ ಪೂಜೆ, ಪಟ್ಟಣದ ಜಗದ್ಗುರು ರೇಣುಕಾಚಾರ್ಯ ರುದ್ರ ಬಳಗದಿಂದ ಲಲಿತಾ ಸಹಸ್ರನಾಮ ಪಠಣ ಮತ್ತು ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು. ಈ ವೇಳೆ ಸುಲೋಚನಾ ಲಿಂಬಯ್ಯಸ್ವಾಮಿಮಠ, ವನಿತಾ ಓದುನವರ, ದಿವ್ಯಾ ಲಿಂಬಯ್ಯಸ್ವಾಮಿಮಠ, ವಾಣಿ ಓದುನವರ, ಅಕ್ಷತಾ ಬಸವ, ಶ್ವೇತಾ ಲಿಂಬಯ್ಯಸ್ವಾಮಿಮಠ, ನಾಗರತ್ನಾ ಅಂಕಲಕೋಟಿ, ದಿವ್ಯಾ ಮಾನ್ವಿ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ನೂರಾರು ಮಹಿಳೆಯರು, ಶ್ರೀಮಠದ ಭಕ್ತರು ಇದ್ದರು.