HomeGadag Newsಮುಂದುವರೆದ ಶಿವಾನಂದ ಬೃಹನ್ಮಠದ ಉತ್ತರಾಧಿಕಾರತ್ವ ವಿವಾದ: ಶಾಂತಿ ಭಂಗದ ಶಂಕೆ, 13 ಜನರಿಗೆ ತಹಸೀಲ್ದಾರ ನೋಟಿಸ್

ಮುಂದುವರೆದ ಶಿವಾನಂದ ಬೃಹನ್ಮಠದ ಉತ್ತರಾಧಿಕಾರತ್ವ ವಿವಾದ: ಶಾಂತಿ ಭಂಗದ ಶಂಕೆ, 13 ಜನರಿಗೆ ತಹಸೀಲ್ದಾರ ನೋಟಿಸ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ ಶಿವಾನಂದ ಬೃಹನ್ಮಠದ ಪೀಠಾಧಿಪತಿ ಉತ್ತರಾಧಿಕಾರತ್ವದ ವಿವಾದ ಮುಂದುವರೆದಿದ್ದು, ಮಠದ ಆವಾರದಲ್ಲಿ ಜಾತ್ರೆಯ ಸಂದರ್ಭದಲ್ಲಿ ಶಾಂತಿ ಭಂಗ ಉಂಟಾಗಬಹುದಾದ ಸಾಧ್ಯತೆಯ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ 13 ಜನರ ಮೇಲೆ ತಾಲೂಕಾ ದಂಡಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಹಿರಿಯ ಶ್ರೀ ಅಭಿನವ ಶಿವಾನಂದ ಶ್ರೀಗಳು, ಕಿರಿಯ ಶ್ರೀ ಸದಾಶಿವಾನಂದ ಭಾರತಿ ಶ್ರೀಗಳನ್ನು ಜಾತ್ರಾ ಮಹೋತ್ಸವದಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದು ಸಹಜವಾಗಿಯೇ ಕಿರಿಯ ಶ್ರೀಗಳ ಭಕ್ತರಿಗೆ ತೀವ್ರ ಅಕ್ರೋಶವನ್ನುಂಟುಮಾಡಿದೆ.

ರಾಜು ಖಾನಪ್ಪನವರ, ಸಂತೋಷ ಕಬಾಡರ, ಶಿವಾನಂದ ಪಲ್ಲೇದ, ರಾಹುಲ್ ಅರಳಿ, ಮಲ್ಲರಡ್ಡಿ ಲಿಂಗದಳ್ಳಿ, ಅನಿಲ್ ಅಬ್ಬಿಗೇರಿ, ಶಿವಕುಮಾರ ತಡಕೋಡ, ಅಮರನಾಥ ಬೆಟಗೇರಿ, ಮಹೇಶ ರೋಖಡೆ, ಕಿಶನ್ ಮೇರವಾಡೆ, ವಿ.ಎಚ್. ದೇಸಾಯಿಗೌಡ್ರ, ಈರಣ್ಣ ಬಾಳಿಕಾಯಿ, ವೀರಣ್ಣ ಹೇಮಾದ್ರಿ ಇವರ ಮೇಲೆ ದಂಡ ಪ್ರಕ್ರಿಯೆ ಸಂಹಿತೆ ಕಲಂ 107ರ ಅಡಿಯಲ್ಲಿ ಗದಗ ಶಹರ ಪೊಲೀಸ್ ಠಾಣೆಯ ಪಿ.ಎ.ಆರ್ ಸಂಖ್ಯೆ 15/2024ರಂತೆ ನೋಟಿಸ್ ನೀಡಲಾಗಿದ್ದು, ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜು ಖಾನಪ್ಪನವರ, ಮಠ ಯಾವುದೇ ಸ್ವಾಮೀಜಿಗಳಿಗೆ ಸೇರಿದ್ದಲ್ಲ, ಅದು ಭಕ್ತರಿಗೆ ಸೇರಿದೆ. ಭಕ್ತರ ಅಪೇಕ್ಷೆಯಂತೆ ರಥೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಇಬ್ಬರೂ ಶ್ರೀಗಳನ್ನು ಕುಳ್ಳಿರಿಸಬೇಕು. ಇಲ್ಲವೇ ಸದಾಶಿವಾನಂದ ಸ್ವಾಮೀಜಿ ಭಾವಚಿತ್ರ ಅಥವಾ ಉತ್ಸವ ಮೂರ್ತಿಯನ್ನು ಇರಿಸಿ ಜಾತ್ರೆ ನೆರವೇರಿಸಬೇಕು ಎಂದಿದ್ದಾರೆ.

ಮಾರ್ಚ್ 9ರಂದು ನಡೆಯುವ ರಥೋತ್ಸವದಲ್ಲಿ ಮಠದ ಹಿರಿಯ ಶ್ರೀಗಳು ಕಿರಿಯ ಶ್ರೀಗಳೊಂದಿಗೆ ಪಾಲ್ಗೊಳ್ಳುವದಿಲ್ಲ. ತಾವು ಒಂಟಿಯಾಗಿಯೇ ರಥೋತ್ಸವದಲ್ಲಿ ಕುಳಿತುಕೊಳ್ಳುವದಾಗಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮತ್ತೆ ವಿವಾದಕ್ಕೆಡೆ ಮಾಡಿಕೊಟ್ಟಿದೆ.

ನ್ಯಾಯಾಲಯದ ಆದೇಶದ ನಡುವೆಯೂ ಹಿರಿಯ ಶ್ರೀಗಳು ಕಿರಿಯ ಶ್ರೀಗಳನ್ನು ಮಠದ ಜಾತ್ರೆಯ ಯಾವುದೇ ಕಾರ್ಯದಲ್ಲಿ ತೊಡಗಿಸಿಕೊಂಡಿರಲಿಲ್ಲ. ಕಿರಿಯ ಶ್ರೀಗಳ ಭಕ್ತರು ಹಿರಿಯ ಶ್ರೀಗಳ ಮನವೋಲಿಸಲು ಪ್ರಯತ್ನಿಸಿದರೂ ಸಹ ಅವರು ಒಪ್ಪಿಗೆ ನೀಡಿರಲಿಲ್ಲ. ಕೊನೆಗೆ ಕಿರಿಯ ಶ್ರೀಗಳ ಭಕ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಉಭಯ ಶ್ರೀಗಳ ಭಕ್ತರ ಸಭೆ ನಡೆಸಿ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವದಾಗಿ ಎಚ್ಚರಿಸಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!