ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಮಾ. 26ರಂದು ನರೇಗಲ್ಲ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಆಚರಿಸಲಾಗುತ್ತಿರುವ ಹೋಳಿ ಹಬ್ಬವನ್ನು ಅತ್ಯಂತ ಶಾಂತ ರೀತಿಯಿಂದ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಒಂದು ವೇಳೆ ಅಹಿತಕರ ಘಟನೆಗಳು ಸಂಭವಿಸಿದರೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್ಐ ಶಿವಾನಂದ ಬನ್ನಿಕೊಪ್ಪ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಆಚರಣೆ ಕುರಿತು ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ನಾಯಕರನ್ನು ಕರೆಯಿಸಿ ರಾಜಕೀಯ ಭಾಷಣ ಮಾಡಿಸಬಾರದು. ಅವರಿಂದ ಯಾವುದೇ ರೀತಿಯ ಧನ ಸಂಗ್ರಹವನ್ನೂ ಮಾಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರಾಜಕೀಯ ವಿಷಯಗಳನ್ನು ಅಥವಾ ಇನ್ನೊಂದು ಧರ್ಮದ ವ್ಯಕ್ತಿಗಳಿಗೆ ನೋವುಂಟು ಮಾಡುವಂತಹ, ಭಾವನೆಗಳಿಗೆ ಧಕ್ಕೆ ತರುವಂತಹ ಸಂಗತಿಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು ಎಂದು ತಿಳಿಸಿದರು.
ಹೋಳಿ ಆಡುವಾಗ ಕಡ್ಡಾಯವಾಗಿ ಎಲ್ಲರೂ ಪುಡಿ ಬಣ್ಣವನ್ನು ಮಾತ್ರ ಬಳಸಬೇಕು. ಇತರೆ ರಾಸಾಯನಿಕ ಬಣ್ಣಗಳನ್ನು, ದೇಹಕ್ಕೆ ಹಾನಿ ಮಾಡುವಂತಹ ಬಣ್ಣಗಳನ್ನು ಬಳಕೆ ಮಾಡಿದರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವದು. ಸಾರ್ವಜನಿಕರ ಆಸ್ತಿ-ಪಾಸ್ತಿಗಳನ್ನು ಕಳುವು ಮಾಡುವವರಿಗೆ ಕಠಿಣ ಶಿಕ್ಷೆ ಕಾದಿದೆ. ನಿಮ್ಮ ಓಣಿಯ ಮಕ್ಕಳಿಗೂ ಇದನ್ನು ತಿಳಿ ಹೇಳಿ, ಹೋಳಿ ಹಬ್ಬವು ಶಾಂತ ರೀತಿಯಿಂದ ನಡೆಯಲು ಎಲ್ಲರೂ ಸಹಕಾರ ನೀಡಬೇಕೆಂದು ಶಿವಾನಂದ ಬನ್ನಿಕೊಪ್ಪ ಹೇಳಿದರು.
ಶಾಂತಿ ಸಭೆಯನ್ನುದ್ದೇಶಿಸಿ ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ, ಮುಖಂಡ ಶಶಿಧರ ಸಂಕನಗೌಡ್ರ, ಅಬ್ಬಿಗೇರಿಯ ಹನುಮಂತಪ್ಪ ದ್ವಾಸಲ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ, ಪ.ಪಂ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ ಮುಂತಾದವರು ಮಾತನಾಡಿ, ಪಟ್ಟಣದಲ್ಲಿ ಮತ್ತು ಸಂಬಂಧಿತ ಗ್ರಾಮಗಳಲ್ಲಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಇಲಾಖೆಯೊಂದಿಗೆ ಸಹಕರಿಸುವುದಾಗಿ ಹೇಳಿದರು.
ಸಭೆಯಲ್ಲಿ ಎಎಸ್ಐ ಕೆ.ಆರ್. ಬೇಲೇರಿ, ಜಿ.ಬಿ. ಕೊತಬಾಳ, ಜಿ.ಕೆ. ದಿಂಡೂರ, ಚಂದ್ರು ರಾಠೋಡ, ಎಂ.ಕೆ. ಗುಂಡಗೋಪುರಮಠ, ಎಸ್.ಎಸ್. ಹುನಗುಂದ, ವೀರಣ್ಣ ಮಾವಿನಕಾಯಿ, ಈರಪ್ಪ ಜೋಗಿ, ಮುತ್ತಪ್ಪ ನುಲ್ಕಿ, ಕೆ.ಬಿ. ರೋಣದ, ಹಸನಸಾಬ ಕೊಪ್ಪದ, ರಮೇಶ ಕಲ್ಕೂರ, ರಾಜೇಸಾಬ ನಶೇಖಾನ, ಹುಲಗಪ್ಪ ಬಂಡಿವಡ್ಡರ, ಕೃಷ್ಣಪ್ಪ ಜುಟ್ಲ, ಅಲ್ಪಾಫ್ ಬಾಬಣ್ಣವರ, ಮಂಜುನಾಥ ಕಮಲಾಪುರ, ದೊಡ್ಡನಗೌಡ ಕೊತಬಾಳ, ಇಮ್ರಾನ್ ಮಕಾನದಾರ ಮುಂತಾದವರು ಉಪಸ್ಥಿತರಿದ್ದರು.
ಮಾ.25ರಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಡಿಜೆಗಳನ್ನು ಹಚ್ಚಿ ಕುಣಿಯುವಂತಿಲ್ಲ, ರಾಜಕೀಯ ಪಕ್ಷಗಳ ಯಾವುದೇ ಚಿನ್ಹೆಗಳನ್ನು ಪ್ರದರ್ಶಿಸುವಂತಿಲ್ಲ. ಇವುಗಳನ್ನು ಏನಾದರೂ ಉಲ್ಲಂಘಿಸಿದರೆ ಅಂಥವರು ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ. ಹೋಳಿ ಹಬ್ಬದ ಸಂದರ್ಭದಲ್ಲಿ ಆಯಾ ಓಣಿಯ, ಆಯಾ ಗ್ರಾಮಗಳ ಹಿರಿಯರ ಪಾತ್ರ ಮಹತ್ವದ್ದಾಗಿದ್ದು, ಶಾಂತಿ-ಸುವ್ಯವಸ್ಥೆ ಕಾಪಾಡಲು ಅವರೆಲ್ಲರ ಸಹಕಾರ ಇಲಾಖೆಗೆ ಅಗತ್ಯವಾಗಿದೆ ಎಂದು ಪಿಎಸ್ಐ ಶಿವಾನಂದ ಬನ್ನಿಕೊಪ್ಪ ತಿಳಿಸಿದರು.