ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಹುಲಕೋಟಿ ಗ್ರಾಮದಲ್ಲಿರುವ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ)ವನ್ನು ಕಾಂಗ್ರೆಸ್ ಪಕ್ಷ ದುರಪಯೋಗಪಡಿಸಿಕೊಳ್ಳುತ್ತಿದ್ದು, ಅದನ್ನು ಕೂಡಲೇ ನಿಲ್ಲಿಸಬೇಕೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಹಾಗು ಜಿಲ್ಲಾ ವಕ್ತಾರರಾದ ಎಂ.ಎಂ. ಹಿರೇಮಠರವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರದ ಅನುದಾನದಿಂದ ಸ್ಥಾಪಿಸಲ್ಪಟ್ಟ ಇದರ ಮೂಲ ಉದ್ದೇಶ ರೈತರ ಆದಾಯವನ್ನು ದ್ವಿಗುಣಗೊಳಿಸುವದು, ಹೊಸ ಹೊಸ ತಳಿಗಳನ್ನು ರೈತರಿಗೆ ಪರಿಚಯಿಸುವದು, ಯುವ ರೈತರಿಗೆ, ರೈತ ಕಾರ್ಮಿಕರಿಗೆ ಕೃಷಿ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ನೀಡುವದು, ಗ್ರಾಮೀಣ ಭಾಗದ ಯುವಕರಿಗೆ ಹಾಲಿನ ಡೈರಿ, ಕೋಳಿ ಸಾಕಾಣಿಕೆ, ಬ್ಯಾಂಕಿನ ಸೌಲತ್ತುಗಳ ಬಗ್ಗೆ ತಿಳಿ ಹೇಳುವದಾಗಿದೆ. ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿರುವ ಕೆವಿಕೆ ಕೇಂದ್ರದಲ್ಲಿ ಕಾಂಗ್ರೆಸ್ನ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ತೋಟಪ್ಪ(ರಾಜು) ಕುರುಡಗಿ, ಎಂ.ಎಂ. ಹಿರೇಮಠ, ರಾಜು ಹೊಂಗಲ, ಬಿ.ಎಚ್. ಲದ್ವಾ ವಕೀಲರು, ಅನಿಲ ಅಬ್ಬಿಗೇರಿ, ದತ್ತಣ್ಣ ಜೊಶಿ, ಶ್ರೀನಿವಾಸ ಹುಬ್ಬಳ್ಳಿ, ಬಿ.ಎಸ್. ಚಿಂಚಲಿ ಮುಂತಾದವರು ಒತ್ತಾಯಿಸಿದ್ದಾರೆ.