ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಏ.5ರ ಮಧ್ಯಾಹ್ನ 3 ಗಂಟೆಗೆ ನಾಗಾವಿಯ ವಿಶ್ವವಿದ್ಯಾಲಯ ಆವರಣದ ಕೌಶಲ್ಯ ವಿಕಾಸ ಭವನದ ಸಭಾಂಗಣದಲ್ಲಿ ಎಂ.ಎಸ್ಸಿ. ಜಿಯೋಇನ್ಫಾರ್ಮ್ಯಾಟಿಕ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ (ಡೇಟಾ ಅನಲಿಟಿಕ್ಸ್) ವಿದ್ಯಾರ್ಥಿಗಳಿಗೆ `ಇಸ್ರೋ ಗುರಿ ಹಾಗೂ ಸಾಮಾಜಿಕ ಪ್ರಯೋಜನಗಳು’ (ಇಸ್ರೋ ಮಿಷನ್ ಆ್ಯಂಡ್ ಸೋಷಿಯಲ್ ಬೆನಿಫಿಟ್ಸ್) ಎಂಬ ವಿಷಯದ ಕುರಿತು ಇಸ್ರೋ ವಿಜ್ಞಾನಿ ಆರ್.ವಿ. ನಾಡಗೌಡರ ಇವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆರ್.ವಿ. ನಾಡಗೌಡರ ಚಂದ್ರಯಾನ-2 ಯೋಜನೆಯಲ್ಲಿ ಲ್ಯಾಂಡರ್ ಸಂವೇದಕಗಳ ಕಾರ್ಯ ಪರೀಕ್ಷಾ ತಂಡದ ನಾಯಕರಾಗಿ, ಇಸ್ರೋದ ಚಿತ್ರದುರ್ಗದ ಸಮೀಪದಲ್ಲಿರುವ ಉಳ್ಳಾರ್ತಿ ಕಾವಲ್ನಲ್ಲಿರುವ ಜಾಗದಲ್ಲಿ ಚಂದ್ರನ ಮೇಲ್ಮೈಯಲ್ಲಿ ಇರುವ ಕುಳಿಗಳನ್ನು ಹೋಲುವ ಕುಳಿಗಳನ್ನು ಸೃಷ್ಟಿಸಿ, ಯಶಸ್ವಿಯಾಗಿ ಸಂವೇದಕಗಳ ಪರೀಕ್ಷೆಗಳನ್ನು ನಡೆಸಿದ್ದಾರೆ.
ಇಸ್ರೋದಿಂದ ತಯಾರಾಗುವ ಎಲ್ಲಾ ಉಪಗ್ರಹಗಳ ವಿನ್ಯಾಸ, ಜೋಡಣೆ, ಭೂ ಪರೀಕ್ಷೆ, ಸುರಕ್ಷಿತವಾಗಿ ಉಡಾವಣೆ ಕೇಂದ್ರಕ್ಕೆ ರವಾನೆ, ಉಡಾವಣಾ ಪೂರ್ವ ಪರೀಕ್ಷೆಗಳು ಹಾಗೂ ಉಡಾವಣೆಗೆ ಸಜ್ಜುಗೊಳಿಸಿ, ಉಡಾವಣೆ ಮಾಡಲು ಅನುಮತಿ ನೀಡಿವವವರೆಗಿನ ಎಲ್ಲಾ ಕಾರ್ಯಗಳು ಒಟ್ಟಾರೆಯಾಗಿ ಆರ್.ವಿ. ನಾಡಗೌಡರರ ಮೇಲ್ವಿಚಾರಣೆ ಹಾಗೂ ಜವಾಬ್ದಾರಿಯಲ್ಲಿ ನಡೆಯುತ್ತವೆ. ಹೀಗೆ ಚಂದ್ರಯಾನ-3 ಯೋಜನೆಯಲ್ಲಿ ಒಂದು ಗುಣಮಟ್ಟದ ನೌಕೆಯನ್ನು ತಯಾರಿಸಿ ಸುರಕ್ಷಿತವಾಗಿ ಹಾಗೂ ಮೃದುವಾಗಿ ಚಂದ್ರನ ಮೇಲೆ ಇಳಿಯುವಂತೆ ಮಾಡುವಲ್ಲಿ ನಾಡಗೌಡರ ಹಾಗೂ ಸುಮಾರು 250 ಜನರ ತಂಡದ ಪಾತ್ರ ಬಹುಮುಖ್ಯವಾಗಿದೆ.