ಒಬ್ಬ ವ್ಯಕ್ತಿ ಸರ್ವರೊಳಗೆ ಒಂದಾಗಿ ಅರಿತು ಬೆರೆತು ನಡೆದುಕೊಂಡರೆ ಎಂತಹ ಅದ್ಭುತ ಶಕ್ತಿಯಾಗಿ ಕಾಣಬಹುದು ಎಂಬುದಕ್ಕೆ ‘ಸರ್ವ ಕ್ಷೇತ್ರಗಳ ಸೇವಕ, ಮಾನವ ಧರ್ಮದ ಸಾಧಕ’ರಾಗಿರುವ ಪೀರಸಾಬ ಕೌತಾಳ ಅವರು ಸ್ಪಷ್ಟ ಉದಾಹರಣೆ.
“ತನ್ನ ಧರ್ಮವನ್ನು ಪ್ರೀತಿಸು, ಇತರ ಧರ್ಮಗಳನ್ನು ಗೌರವಿಸು” ಎಂಬ ತತ್ವವನ್ನು ಪಾಲಿಸುವಲ್ಲಿ ಯಶಸ್ವಿಯಾಗಿರುವ ಪೀರಸಾಬ ಕೌತಾಳ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಸೇರಿದಂತೆ ಸರ್ವ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವಕರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸದಾ ಲವಲವಿಕೆಯಿಂದ ಸ್ನೇಹಮಯ ನಡೆ-ನುಡಿಯಲ್ಲಿ ಎಲ್ಲರನ್ನು ತನ್ನತ್ತ ಸೆಳೆಯುತ್ತಾ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪೀರಸಾಬ ಕೌತಾಳರ ಸಾಧನೆ ನಿಜಕ್ಕೂ ಹುಬ್ಬೇರಿಸುವಂತಿದ್ದು, ಕಣ್ಣರಳಿಸುವಂತಿದೆ.
ರೂಪಾಂತರದ ಬದುಕು-ಒರಟಿನಿಂದ ಒಲವಿನತ್ತ
ಒಂದು ಕಾಲದಲ್ಲಿ ಹೊಡಿ-ಬಡಿ ನಡೆ-ನುಡಿಯ, ಒರಟು ಸ್ವಭಾವದವರಾಗಿದ್ದ ಪೀರಸಾಬ ಕೌತಾಳರ ಇಂದಿನ ಬದಲಾವಣೆಗಳನ್ನು ಕಂಡರೆ ಆಶ್ಚರ್ಯವೆನಿಸದೆ ಇರಲಾಗದು.
ಭಕ್ತಿ ಮಾರ್ಗದ ಅನುಕರಣೆಯಲ್ಲಿ, ಸಾಮಾಜಿಕ ಸೇವೆಯ ಚಿಂತನೆಯಲ್ಲಿ ಹಾಗೂ ಮಾನವೀಯ ಮೌಲ್ಯಗಳ ಅಳವಡಿಕೆಯಲ್ಲಿ ಎಲ್ಲ ಧರ್ಮಗಳ ಆಚಾರ-ವಿಚಾರಗಳ ರಸತತ್ವದ ಅಡಿಯಲ್ಲಿ ವಿವಿಧ ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿರುವ ಪೀರಸಾಬ ಕೌತಾಳರನ್ನು ನೋಡಿದಾಗ ಮಹರ್ಷಿ ವಾಲ್ಮೀಕಿ ಅವರ ಜೀವನ ಯಶೋಗಾಥೆ ನೆನಪಾಗದೆ ಇರಲಾರದು.
ರಾಜಕೀಯ ಜೀವನದಲ್ಲಿ ಸೋಲಿಲ್ಲದ ಪಯಣ
ಕಿರಿಯ ವಯಸ್ಸಿನಲ್ಲಿ ಗದಗ ಬೆಟಗೇರಿ ನಗರಸಭೆಯ 17 ಮತ್ತು 18ನೇ ವಾರ್ಡ್ಗಳಿಂದ ಸತತವಾಗಿ ಗೆಲುವು ಸಾಧಿಸಿ, ಸೋಲಿಲ್ಲದ ಸರದಾರ ಎಂಬ ಪ್ರಶಂಸೆಗೆ ಪಾತ್ರರಾದ ಪೀರಸಾಬ ಕೌತಾಳರು ನಗರಸಭೆ ಅಧ್ಯಕ್ಷರಾಗಿ ಮಾಡಿದ ಸಾಧನೆ ಹಾಗೂ ಅವಳಿ ನಗರಕ್ಕೆ ನೀಡಿದ ಕೊಡುಗೆಗಳು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಿವೆ. ಇತರರಿಗೆ ಮಾದರಿಯಾಗಿರುವಂತಹ ಸೇವೆಯನ್ನು ಅವರು ಸಲ್ಲಿಸಿದ್ದಾರೆ.
ಇತ್ತೀಚೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿ ಆಡಳಿತ ನಡೆಸಿದ ಪೀರಸಾಬ ಕೌತಾಳರು ಸಂಸ್ಥೆಗೆ ಹೊಸ ದಾರಿ, ಹೊಸ ಬದುಕು ಕಟ್ಟಿಕೊಟ್ಟಿದ್ದು, ಅವರ ಕ್ರಿಯಾಶೀಲ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಎಲ್ಲ ಧರ್ಮಗಳ ಮೌಲ್ಯಯುತ ಸಾರಗಳಲ್ಲಿ ಸಾಗುತ್ತಾ ಮಾನವ ಧರ್ಮದ ನಡೆ-ನುಡಿ, ಸಾಮಾಜಿಕ, ಸಾಹಿತ್ಯಿಕ, ಸಂಗೀತ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಹಾಗೂ ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪೀರಸಾಬ ಕೌತಾಳರು ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆಂದರೆ ಅತಿಶಯೋಕ್ತಿ ಆಗಲಾರದು.
ಹೃದಯವಂತಿಕೆ, ಗುಣವಂತಿಕೆ ಹಾಗೂ ಆತ್ಮೀಯ ಶ್ರೀಮಂತಿಕೆಯೊಂದಿಗೆ ಸಾಮಾಜಿಕ ಮತ್ತು ಸಾರ್ವತ್ರಿಕ ಸೇವಾ ಚಿಂತನೆಗಳಲ್ಲಿ ಭಕ್ತಿ ಮಾರ್ಗದ ನೆಲೆಯಲ್ಲಿ ಸಾಗುತ್ತಿರುವ ಪೀರಸಾಬ ಕೌತಾಳರಿಂದ ಇನ್ನಷ್ಟು ಸಮಾಜಮುಖಿ ಸೇವೆ ದೊರೆಯಲಿ ಎಂಬುದು ಅವರ ಅಭಿಮಾನಿಗಳ ಆಶಯ.
ಸರ್ವಧರ್ಮ ಹಾಗೂ ಸರ್ವ ಕ್ಷೇತ್ರಗಳ ಸೇವಕರಾಗಿ, ಮಾನವೀಯ ಮೌಲ್ಯಗಳ ಹಿರಿಮೆ-ಗರಿಮೆಯಲ್ಲಿ ಭಕ್ತಿ ಪಂಥದ ನಡೆಯಲ್ಲಿ ಜೀವನ ರೂಪಿಸಿಕೊಂಡಿರುವ ಪೀರಸಾಬ ಕೌತಾಳರಿಗೆ ಡಾ. ಪಂಡಿತ ಪುಟ್ಟರಾಜರು ಅವರ ಕೃಪೆ ಸದಾ ಲಭಿಸಲಿ ಎಂಬುದು ಸರ್ವಧರ್ಮ ಚಿಂತಕರ ಹಾಗೂ ಪತ್ರಕರ್ತರಾದ ಆನಂದ ಸಾಲಿಗ್ರಾಮ ಸ್ನೇಹ ಬಳಗದ ಶುಭ ಹಾರೈಕೆ.
ಸಮಾಜಮುಖಿ ಸೇವೆಯ ವಿಶಾಲ ವ್ಯಾಪ್ತಿ
ಸಾಮೂಹಿಕ ವಿವಾಹಗಳ ಆಯೋಜನೆ, ಸಾಮಾಜಿಕ ಕಾರ್ಯಚಟುವಟಿಕೆಗಳು, ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿ, ಶಿಕ್ಷಣ ಪ್ರಸಾರದ ಚಿಂತನೆ, ಸರ್ವಧರ್ಮ ಸಮನ್ವಯ ಸಾಧನೆ, ಕೈಗೊಂಡ ಕಾರ್ಯಯೋಜನೆಗಳು, ಸಾಮೂಹಿಕ ತತ್ವಾದರ್ಶಗಳ ನಡೆ-ನುಡಿ, ಧಾರ್ಮಿಕ ಅನುಷ್ಠಾನಗಳು ಸೇರಿದಂತೆ ಪ್ರತಿ ರಂಗದಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಈ ಬದಲಾವಣೆಗಳಿಂದ ಇಂದು ಪೀರಸಾಬ ಕೌತಾಳರು ಎಲ್ಲರನ್ನು ಸೆಳೆಯುವ ವ್ಯಕ್ತಿತ್ವ ಹಾಗೂ ಶಕ್ತಿಯಾಗಿದ್ದಾರೆ.
ಅಂಧ-ಅನಾಥ ಮಕ್ಕಳು, ದೀನ-ದಲಿತರು, ಬಡವರು ಹಾಗೂ ನಿರ್ಗತಿಕರ ಸೇವೆಯಲ್ಲಿ ತೊಡಗಿಸಿಕೊಂಡು ಡಾ. ಪಂಡಿತ ಪುಟ್ಟರಾಜರು ಅವರ ಪುಣ್ಯಾಶ್ರಮಕ್ಕೆ ಸಲ್ಲಿಸುತ್ತಿರುವ ಸೇವೆಯಿಂದ ಪೀರಸಾಬ ಕೌತಾಳರು ಮತ್ತು ಅವರ ಕುಟುಂಬ ಇನ್ನಷ್ಟು ಆದರ್ಶಪ್ರಾಯರಾಗಿದ್ದಾರೆ.

– ಅನಂತ ಎಸ್. ಕಾರ್ಕಳ, ಪತ್ರಕರ್ತರು, ಗದಗ