Home Blog

ಡಾ. ಸಂಗಮೇಶ ತಮ್ಮನಗೌಡ್ರರಿಗೆ `ಕವಿ ಕಾವ್ಯ ವಿಭೂಷಣ’ ರಾಷ್ಟ್ರೀಯ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾಹಿತಿ ಡಾ. ಸಂಗಮೇಶ ತಮ್ಮನಗೌಡ್ರ ಅವರಿಗೆ ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ `ಕವಿ ಕಾವ್ಯ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.

ವೃತ್ತಿಯಿಂದ ಶಿಕ್ಷಕರಾಗಿ, ಶಿರಹಟ್ಟಿ ತಾಲೂಕಿನ ಕಡಕೋಳದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ಹಿರಿಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ತಮ್ಮನಗೌಡ್ರ ಅವರು 1989ರಿಂದ ಗ್ರಂಥಗಳನ್ನು ಪ್ರಕಟಿಸುತ್ತಿದ್ದು, ಇದುವರೆಗೆ 115 ಪುಸ್ತಕ ಬಿಡುಗಡೆಗೊಳಿಸಿದ್ದಾರೆ.

ವೇದಿಕೆಯಲ್ಲಿ ಸಮ್ಮೇಳನದ ಅಧ್ಯಕ್ಷರಾದ ನಾಡೋಜ ಡಾ. ಕೃಷ್ಣಪ್ರಸಾದ ಕೂಡ್ಲು, ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ವಾಮನರಾವ ಬೇಕಲ್, ಪ್ರದೀಪ ಬೇಕಲ್, ಡಾ. ಕೆ.ಎನ್. ವೆಂಕಟರಮಣ ಹೊಳ್ಳ, ಡಾ. ಕೊಳಚಪ್ಪೆ ಗೋವಿಂದ ಭಟ್, ಪ್ರದೀಪಕುಮಾರ ಕಲ್ಕೂರ, ನಂ. ವಿಜಯಕುಮಾರ, ಡಾ. ಸುರೇಶ ನೆಗಳಗುಳಿ, ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾಂದಗಳವರು, ಶ್ರೀಮದ್ ಎಡೆನೀರು ಮಠಾಧೀಶರು, ಶ್ರೀ ಶಂಕರಾಚಾರ್ಯ ಸಂಸ್ಥಾನಮಠ ಕಾಸರಗೋಡು, ಡಾ. ಕೆ.ಜಿ. ವೆಂಕಟೇಶ, ಡಾ. ಬಾಲಕೃಷ್ಣ ಮದ್ದೋಡಿ, ಡಾ. ಸಂಗಮೇಶ ತಮ್ಮನಗೌಡ್ರ, ಇರಾ ನೇಮು ಪೂಜಾರಿ, ವಿಶಾಲಾಕ್ಷ ಪುತ್ರಕಳಾ, ಜಯಾನಂದ ಪೆರಾಜೆ, ಡಾ. ಶಾಂತಾ ಮತ್ತೂರ, ಸತ್ಯವತಿ ಭಟ್, ಕೊಳಚಪ್ಪು, ರತ್ನಾ ಗಿರೋಸಾ ಬದಿ, ಅಲ್ಲಾಸಾಬ ನದಾಫ, ಮಂಜುನಾಥ ಡೋಣಿ ಮುಂತಾದವರು ಪಾಲ್ಗೊಂಡಿದ್ದರು.

ಪ್ರಶಸ್ತಿ ವಿಜೇತ ಸಾಹಿತಿಗಳಿಗೆ ರಾಮಗಿರಿಯ ವರಕವಿ ಡಾ. ದ.ರಾ. ಬೇಂದ್ರೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಶಂಕ್ರಪ್ಪ ಶಿಳ್ಳಿನ, ಕಡಕೋಳದ ಕೆ.ಪಿ.ಎಸ್. ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಕನಕಮ್ಮ, ಕೆ.ಪಿ.ಎಸ್. ಪ್ರೌಢಶಾಲಾ ಉಪಪ್ರಾಚಾರ್ಯರಾದ ಎನ್.ವ್ಹಿ. ಮುಲ್ಕಿಗೌಡ್ರ ಮತ್ತು ಕೆ.ಪಿ.ಎಸ್. ಪ್ರಾಥಮಿಕ ಶಾಲಾ ವಿಭಾಗದ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನ ಗೋವನಾಳದ ಪೂಜ್ಯ ಶ್ರೀ ರಮೇಶ ಮಹಾಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ, ಸಾಹಿತಿಗಳಾದ ಡಾ. ಸಂಗಮೇಶ ತಮ್ಮನಗೌಡ್ರ ಅವರು ನಮ್ಮ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ನಿವಾಸಿಯಾಗಿರುವುದು ಹೆಮ್ಮೆಯ ವಿಷಯವಾಗಿದೆ. 115 ಕೃತಿಗಳನ್ನು ಬರೆದು ಪ್ರಕಟಿಸುವುದು ಸಾಮಾನ್ಯ ಮಾತಲ್ಲ. ಅಂತಹ ಸಾಹಸದ ಕೆಲಸಕ್ಕೆ ಅವರು ಕೈ ಹಾಕಿರುವುದು ಕನ್ನಡ ನಾಡು-ನುಡಿಯ ಅಭಿಮಾನದ ತುಡಿತವನ್ನು ಎತ್ತಿ ತೋರಿಸುತ್ತದೆ. ಅವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಮೌಲ್ಯಯುತ ಕೃತಿಗಳನ್ನು ಪ್ರಕಟಿಸಲಿ ಎಂದು ಶುಭ ನುಡಿದರು.

‘ಕಲಿಕಾ ಹಬ್ಬ’ ಮಕ್ಕಳ ಕಲಿಕೆಗೆ ಪ್ರೇರಣೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರೇರಣೆ, ಸಂತಸದಾಯಕ ಕಲಿಕೆ ಮತ್ತು ಪ್ರತಿಭಾನ್ವೇಷಣೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಛಬ್ಬಿ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬವನ್ನು ಶಿರಹಟ್ಟಿ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗುಡ್ಡದಪುರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ನಾಣಕೀ ನಾಯ್ಕ, ಕಲಿಕಾ ಹಬ್ಬವು ಕಲಿಕಾ ನ್ಯೂನತೆ ಇರುವ ಮಕ್ಕಳಿಗೆ ಆಶಾದೀಪವಾಗಿದೆ. ಮಕ್ಕಳ ಕಲಿಕಾ ಪ್ರತಿಭೆಯನ್ನು ಹೊರತರುವ ಹಲವಾರು ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡಿರುವ ಈ ಹಬ್ಬ, ಮಕ್ಕಳಲ್ಲಿ ಕಲಿಕೆಯ ಪ್ರೇರಣೆ ಮತ್ತು ಬಲವರ್ಧನೆಗೆ ಉತ್ತಮ ವೇದಿಕೆಯಾಗುತ್ತದೆ ಎಂದರು.

ಜಿಲ್ಲಾ ಉಪ ನಿರ್ದೇಶಕರಾದ (ಅಭಿವೃದ್ಧಿ) ಜಿ.ಎಂ. ಮುಂದಿನಮನಿ ಮಾತನಾಡಿ, ಕಲಿಕಾ ಹಬ್ಬವು ಮಕ್ಕಳಲ್ಲಿ ಸಂತಸದಾಯಕ ಕಲಿಕೆಯನ್ನು ಉತ್ತೇಜಿಸುವ ಜೊತೆಗೆ ಅವರಲ್ಲಿರುವ ಅಡಗಿದ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರ ಎಫ್‌ಎಲ್‌ಎನ್ ಕಲಿಕಾ ಹಬ್ಬ ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ಡಯಟ್ ಉಪನ್ಯಾಸಕರಾದ ಎಚ್.ಬಿ. ರಡ್ಡೇರ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿಯೂ ಕಲಿಕೆಯಲ್ಲಿ ವೈಯಕ್ತಿಕ ಭಿನ್ನತೆಗಳಿರುತ್ತವೆ. ಹಿಂದುಳಿದ ಮಕ್ಕಳಿಗೆ ಸಂತಸದಾಯಕ ಹಾಗೂ ಸೃಜನಾತ್ಮಕ ಚಟುವಟಿಕೆಗಳ ಮೂಲಕ ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಪರಿಕಲ್ಪನೆ ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿಆರ್‌ಪಿ ಗೀತಾ ಸರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಸ್. ಭಜಂತ್ರಿ, ಇಸಿಓ ಆರ್.ಬಿ. ಪವಾರ, ಎಸ್‌ಡಿಎಂಸಿ ಅಧ್ಯಕ್ಷರಾದ ಕೃಷ್ಣಪ್ಪ ಲಮಾಣಿ, ಸದಸ್ಯರಾದ ರೂಪಾ ಲಮಾಣಿ, ಶೇಖಪ್ಪ ಲಮಾಣಿ, ಶಿಕ್ಷಣ ಪ್ರೇಮಿಗಳಾದ ದೀಪಕ್ ಲಮಾಣಿ, ಲಕ್ಷ್ಮಣ ಲಮಾಣಿ, ತಿಪ್ಪಣ್ಣ ಲಮಾಣಿ, ಸಂಘದ ನಿರ್ದೇಶಕ ಮೋಹನ ಮಾಂಡ್ರೆ, ಬಿಆರ್‌ಪಿ ಬಿ.ಎಂ. ಯರಗುಪ್ಪಿ, ಛಬ್ಬಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗೀತಾ ಸರವಿ, ಸಿಆರ್‌ಪಿ ಮಿತ್ರರಾದ ಆರ್. ಮಹಾಂತೇಶ, ಮುತ್ತು ಸಾವಿರಕುರಿ, ಉಮೇಶ್ ನೇಕಾರ, ಗಿರೀಶ್ ನೇಕಾರ, ಎನ್.ಎ. ಮುಲ್ಲಾ, ಕೆ.ಪಿ. ಕಂಬಳಿ, ಉಪ ಪ್ರಾಚಾರ್ಯ ಅರವಟಗಿ ಸೇರಿದಂತೆ ಛಬ್ಬಿ ಕ್ಲಸ್ಟರ್‌ನ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಕಲಿಕಾ ಹಬ್ಬದಲ್ಲಿ ವಿವಿಧ ಶೈಕ್ಷಣಿಕ ಸ್ಪರ್ಧೆಗಳು, ಸೃಜನಾತ್ಮಕ ಚಟುವಟಿಕೆಗಳು ಮತ್ತು ಕಲಿಕಾ ಪ್ರದರ್ಶನಗಳು ನಡೆಯಿತು. ಹಬ್ಬದ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯ ಪ್ರವಾಹಕ್ಕೆ ತರುವ ಪ್ರಯತ್ನ ಗಮನಾರ್ಹವಾಗಿತ್ತು.

ಸಂದೀಪ್‌ಗೆ ಪಿಎಚ್‌ಡಿ ಪದವಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಹಿಳಾ ವಿ.ವಿ ಸಹಾಯಕ ಪ್ರಾಧ್ಯಾಪಕ ಸಂದೀಪ್ ಅವರು ಸಲ್ಲಿಸಿದ್ದ, `ಕವರೇಜ್ ಆಫ್ ಸೈಬರ್ ಕ್ರೈಮ್: ಅ ಕಂಪಾರೇಟಿವ್ ಸ್ಟಡಿ ಅಮಂಗ್ ಕನ್ನಡ ಆಂಡ್ ಇಂಗ್ಲೀಷ್ ಡೈಲೀಸ್’ ಕುರಿತ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿದೆ.

ಸಂದೀಪ್ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರೊ. ಜೆ.ಎಂ. ಚಂದುನವರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಉಡುಪಿಯವರಾದ ಸಂದೀಪ್ ಅವರು ವಿಜಯಪುರ ಮಹಿಳಾ ವಿ.ವಿಯ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇಸ್ರೇಲ್–ಅಮೆರಿಕ ದಾಳಿಗೆ ಇರಾನ್ ಕೌಂಟರ್ ಅಟ್ಯಾಕ್: ದುಬೈನಲ್ಲೂ ಸ್ಫೋಟ!

ಟೆಹ್ರಾನ್: ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಶನಿವಾರ ಅಬುಧಾಬಿ, ದುಬೈ, ದೋಹಾ ಹಾಗೂ ರಿಯಾದ್ ನಗರಗಳತ್ತ ಕ್ಷಿಪಣಿ ದಾಳಿ ನಡೆಸಿದೆ.

ಅಬುಧಾಬಿಯ ವಸತಿ ಪ್ರದೇಶದಲ್ಲಿ ಕ್ಷಿಪಣಿ ಅವಶೇಷಗಳು ಬಿದ್ದ ಪರಿಣಾಮ ಏಷ್ಯಾದ ಮೂಲದ ಒಬ್ಬ ವ್ಯಕ್ತಿ ಸಾವನ್ನಪ್ಪಿರುವುದಾಗಿ ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ದಾಳಿಯನ್ನು “ನಾಗರಿಕರ ಸುರಕ್ಷತೆಗೆ ಬೆದರಿಕೆ ಹಾಗೂ ಪ್ರಾದೇಶಿಕ ಸ್ಥಿರತೆಯನ್ನು ಹಾಳು ಮಾಡುವ ಹೇಡಿತನದ ಕೃತ್ಯ” ಎಂದು ಸಚಿವಾಲಯ ಖಂಡಿಸಿದೆ.

ದುಬೈ ನಿವಾಸಿಗಳ ಪ್ರಕಾರ, ಸ್ಫೋಟದ ಭಾರೀ ಸದ್ದು ಕೇಳಿಬಂದಿದ್ದು, ಆಕಾಶದಲ್ಲಿ ಕ್ಷಿಪಣಿಗಳು ಹಾರಾಡುತ್ತಿರುವುದು ಗೋಚರಿಸಿತು. ಸ್ಫೋಟದ ತೀವ್ರತೆಗೆ ಕಟ್ಟಡಗಳ ಕಿಟಕಿಗಳು ನಡುಗಿದವು ಎಂದು ತಿಳಿಸಿದ್ದಾರೆ.

ಈ ನಗರಗಳು ಅಮೆರಿಕದ ಸೈನಿಕ ನೆಲೆಗಳನ್ನು ಹೊಂದಿರುವುದರಿಂದ ತೀವ್ರತೆ ಹೆಚ್ಚಾಗಿದೆ. ಅಬುಧಾಬಿಯ ಅಲ್ ಧಾಫ್ರಾ ವಾಯುನೆಲೆ ಯುಎಇ ಮತ್ತು ಅಮೆರಿಕ ವಾಯುಪಡೆಗಳು ಹಂಚಿಕೊಂಡಿರುವ ತಾಣವಾಗಿದೆ. ದುಬೈನ ಜೆಬೆಲ್ ಅಲಿ ಬಂದರು ಮಧ್ಯಪ್ರಾಚ್ಯದಲ್ಲಿ ಅಮೆರಿಕ ನೌಕಾಪಡೆಯ ಪ್ರಮುಖ ಸಂಪರ್ಕ ಬಂದರಾಗಿದ್ದು, ವಿಮಾನವಾಹಕ ನೌಕೆಗಳು ಇಲ್ಲಿ ನಿಯಮಿತವಾಗಿ ತಂಗುತ್ತವೆ.

ದೋಹಾದ ಅಲ್ ಉದೈದ್ ವಾಯುನೆಲೆ ಯುಎಸ್ ಸೆಂಟ್ರಲ್ ಕಮಾಂಡ್‌ನ ಮುಂಚೂಣಿ ಪ್ರಧಾನ ಕಚೇರಿಯಾಗಿದೆ. ಸೌದಿ ಅರೇಬಿಯಾದಲ್ಲೂ 2,000 ಕ್ಕೂ ಹೆಚ್ಚು ಅಮೆರಿಕ ಸೈನಿಕರು ನೆಲೆಸಿದ್ದು, ರಿಯಾದ್ ಸಮೀಪದ ಪ್ರಿನ್ಸ್ ಸುಲ್ತಾನ್ ವಾಯುನೆಲೆ ಪ್ರಮುಖ ರಕ್ಷಣಾತ್ಮಕ ತಾಣವಾಗಿದೆ. ಇಲ್ಲಿ ಪೇಟ್ರಿಯಾಟ್ ಕ್ಷಿಪಣಿ ವ್ಯವಸ್ಥೆಗಳು ಹಾಗೂ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ವ್ಯವಸ್ಥೆಗಳು ನಿಯೋಜಿಸಲಾಗಿದೆ.

ಒಟ್ಟಾರೆ, ಇಸ್ರೇಲ್–ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್ ಕೈಗೊಂಡಿರುವ ಕ್ರಮಗಳಿಂದ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ವಾತಾವರಣ ಮತ್ತಷ್ಟು ಗಂಭೀರಗೊಂಡಿದೆ.

ಮೂರು ಗಂಟೆಯ ಪ್ರಯಾಣ ಮೂರು ದಿನ: ಕೊನೆಗೂ ಕಠ್ಮಂಡು ತಲುಪಿದ ಪ್ರಯಾಣಿಕರು

0

ದೇವನಹಳ್ಳಿ:  ಮೂರು ಗಂಟೆಗಳಲ್ಲಿ ಮುಗಿಯಬೇಕಿದ್ದ ಬೆಂಗಳೂರು–ಕಠ್ಮಂಡು ವಿಮಾನ ಪ್ರಯಾಣ ಮೂರು ದಿನಗಳ ನರಕಯಾತ್ರೆಯಾಗಿ ಪರಿಣಮಿಸಿದ್ದ ಘಟನೆಗೆ ಕೊನೆಗೂ ತೆರೆ ಬಿದ್ದಿದೆ.

ಸೂಕ್ತ ಮಾಹಿತಿ ನೀಡದೇ, ವಿವಿಧ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಅಲೆದಾಡಿಸಿದ ಬಳಿಕ, 180ಕ್ಕೂ ಹೆಚ್ಚು ಪ್ರಯಾಣಿಕರು ಮೂರು ದಿನಗಳ ನಂತರ ಸುರಕ್ಷಿತವಾಗಿ ನೇಪಾಳದ ಕಠ್ಮಂಡುವಿಗೆ ತಲುಪಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬೆಂಗಳೂರು–ಕಠ್ಮಂಡು ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಿಕೊಂಡಿದ್ದವರು ವಿಮಾನ ಲ್ಯಾಂಡ್ ಆಗದೇ ವಾಪಸ್ ಬರುತ್ತಿರುವುದು, ವಾರಣಾಸಿ ಹಾಗೂ ಲಕ್ನೋ ವಿಮಾನ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾಲಹರಣ ಮಾಡುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿದ್ದರು. ಕಳೆದ ಎರಡು ದಿನಗಳಿಂದ ಊಟ, ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೇ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದ್ದರು.

ಪ್ರಯಾಣಿಕರ ಪರದಾಟದ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ವಿಮಾನ ಸಂಸ್ಥೆ ಎಚ್ಚೆತ್ತುಕೊಂಡಿದೆ. ಗುರುವಾರ ಬೆಳಗ್ಗೆ 10.30ಕ್ಕೆ 180 ಪ್ರಯಾಣಿಕರನ್ನು ಹೊತ್ತ ವಿಮಾನವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೊನೆಗೂ ಕಠ್ಮಂಡುನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ಈ ಹಿಂದೆ ಎರಡು ದಿನಗಳ ಕಾಲ ಕಠ್ಮಂಡುವಿನಲ್ಲಿ ಲ್ಯಾಂಡ್ ಆಗದೇ ಸಂಸ್ಥೆಯ ಎರಡು ವಿಮಾನಗಳು ವಾಪಸ್ ಬಂದಿದ್ದರಿಂದ ಕೆಲ ಪ್ರಯಾಣಿಕರು ತಮ್ಮ ಪ್ರವಾಸವನ್ನೇ ರದ್ದು ಮಾಡಿಕೊಂಡಿದ್ದರು. ಆದರೆ ನೇಪಾಳಕ್ಕೆ ತೆರಳಲೇಬೇಕೆಂದು ಕಾದು ಕುಳಿತಿದ್ದ 180 ಜನರನ್ನು ಒಂದೇ ವಿಮಾನದಲ್ಲಿ ಇಂದು ರವಾನಿಸಲಾಯಿತು. ಲ್ಯಾಂಡಿಂಗ್ ವೇಳೆ ಈ ವಿಮಾನವೂ ಕೆಲಕಾಲ ಕಠ್ಮಂಡು ಆಕಾಶದಲ್ಲಿ ಸುತ್ತಾಡಿದ್ದರಿಂದ ಪ್ರಯಾಣಿಕರಲ್ಲಿ ಆತಂಕ ಉಂಟಾದರೂ, ಕೊನೆಗೂ ಸುರಕ್ಷಿತ ಲ್ಯಾಂಡಿಂಗ್ ನಡೆದಿದ್ದು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

ಒಟ್ಟಾರೆ, ಮೂರು ಗಂಟೆಗಳ ಪ್ರಯಾಣ ಮೂರು ದಿನಗಳ ಕಾಲ ಕಠ್ಮಂಡು ಹೋಗಿದ್ದು ಏಕೆ ಎಂಬ ಪ್ರಶ್ನೆ ಇನ್ನೂ ಉತ್ತರವಿಲ್ಲದೇ ಉಳಿದಿದೆ. ಸಮಯಕ್ಕೆ ಸರಿಯಾಗಿ ಗುರಿ ತಲುಪುತ್ತೇವೆ ಎಂಬ ನಿರೀಕ್ಷೆಯೊಂದಿಗೆ ಹೊರಟಿದ್ದ ಪ್ರಯಾಣಿಕರು, ಹೆಚ್ಚುವರಿ ಹಣ ಹಾಗೂ ಮಾನಸಿಕ ಒತ್ತಡ ಅನುಭವಿಸಿದ್ದಾರೆ.

ತಂದೆಯನ್ನೇ ಕೊಲೆಗೈದ ಮಗ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಗೋವನಾಳ ಗ್ರಾಮದಲ್ಲಿ ಮಗನೇ ತಂದೆಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಶಂಕರಗೌಡ ಕುಬೇರಗೌಡ ದ್ಯಾವನಗೌಡ್ರ (60) ಕೊಲೆಗೀಡಾದ ದುರ್ದೈವಿಯಾಗಿದ್ದು, ಪ್ರಭು ಶಂಕರಗೌಡ ದ್ಯಾವನಗೌಡ್ರ (23) ಕೊಲೆಗೈದ ಪಾಪಿ ಮಗ ಎಂದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯನ್ವಯ ಇವರ 2 ಎಕರೆ ಜಮೀನನ್ನು ಲೀಸ್‌ಗೆ ಹಾಕಿದ ಹಣದ ವಿಚಾರವಾಗಿ ತಂದೆ-ಮಗನ ನಡುವೆ ಪರಸ್ಪರ ಜಗಳವಾಗಿದೆ. ಈ ವೇಳೆ ಮಗನಿಂದ ಹಲ್ಲೆಗೊಳಗಾದ ಶಂಕರಗೌಡ ಮೃತಪಟ್ಟಿದ್ದಾರೆ. ಕುಡಿದ ಮತ್ತಿನಲ್ಲಿ ತಂದೆ-ಮಗನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮೃತ ವ್ಯಕ್ತಿಗೆ ಪತ್ನಿ, ಪ್ರಕರಣದ ಆರೋಪಿತ ಪುತ್ರ, ಓರ್ವ ಪುತ್ರಿ ಇದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಸಿಪಿಐ ಬಿ.ವೈ. ನ್ಯಾಮಗೌಡ್ರ, ಪಿಎಸ್‌ಐ ನಾಗರಾಜ ಗಡದ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಮೃತನ ಪತ್ನಿ ಮಗನ ವಿರುದ್ಧ ದೂರು ದಾಖಲಿಸಿದ್ದಾರೆ. ಲಕ್ಷ್ಮೇಶ್ವರದಲ್ಲಿ ಭಾನುವಾರ ನಡೆಯಲಿರುವ ಗೆಳೆಯರ ಬಳಗದ ಮಧುರ-ಮಿಲನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದ ಶಂಕರಗೌಡನ ಬಗ್ಗೆ ಗೆಳೆಯರು ಕಂಬನಿ ಮಿಡಿದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಜನ್ಮದಿನದ ಅರ್ಥಪೂರ್ಣ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲೆಯ ಎಲ್ಲ ವಿಶೇಷ ಚೇತನ ಹಾಗೂ ದಿವ್ಯಾಂಗ ಮಕ್ಕಳ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಅವರಿಗೆ ಅಗತ್ಯವಿರುವ ಉಪಕರಣ ಹಾಗೂ ಸೌಲಭ್ಯಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ. ವಿಶೇಷ ಚೇತನರನ್ನು ಸಂರಕ್ಷಿಸುತ್ತಿರುವ ಕುಟುಂಬಗಳಿಗೂ ಸರ್ಕಾರದ ನಿಯಮಾನುಸಾರ ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಹೇಳಿದರು.

ಅವರು ಶುಕ್ರವಾರ ಬೆಳಿಗ್ಗೆ ಶಿಕ್ಷಕಿಯರ ಸರ್ಕಾರಿ ತರಬೇತಿ ಕಾಲೇಜು (ಟಿಸಿಡಬ್ಲ್ಯೂ) ಸಭಾಂಗಣದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಂತೋಷ ಲಾಡ್ ಫೌಂಡೇಶನ್ ಮತ್ತು ಜನಮುಖಿ ಸೇವಾ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ್ದ ವಿಶೇಷ ಚೇತನರು ಹಾಗೂ ಅವರ ಕುಟುಂಬದವರೊಂದಿಗೆ ಸಂವಾದ ಮತ್ತು ಸಂತೋಷ ಲಾಡ್ ಫೌಂಡೇಶನ್ ನೀಡಿರುವ ವಿಕಲಚೇತನರ ಸಾಧನಗಳನ್ನು ವಿತರಿಸಿ ಮಾತನಾಡಿದರು.

ವಿಕಲಚೇತನರನ್ನು ವಿಶೇಷ ಕಾಳಜಿ ಮತ್ತು ಹೆಮ್ಮೆಯಿಂದ ಸಂರಕ್ಷಿಸಬೇಕು. ಅವರ ಬಗ್ಗೆ ಕೇವಲ ಕರುಣೆ ತೋರದೆ, ನ್ಯಾಯಯುತವಾಗಿ ಅವರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಲ್ಲಿ ಇಲಾಖೆಗಳು, ಅಧಿಕಾರಿಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಕ್ರಮ ವಹಿಸಬೇಕೆಂದು ಅವರು ಹೇಳಿದರು.

ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಮಾದರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಚಿವರ ಜನ್ಮದಿನದ ಹಿನ್ನೆಲೆಯಲ್ಲಿ ಅನೇಕ ವಿಕಲಚೇತನ ಮಕ್ಕಳಿಗೆ ವೀಲ್‌ಚೇರ್, ಆಟಿಕೆ ಸಾಮಾನು, ಹಣ್ಣು ಹಾಗೂ ಧಾನ್ಯದ ಕಿಟ್ ಮತ್ತು ವಿಕಲಚೇತನ ಮಗುವಿಗೆ ಆರ್ಥಿಕ ಸಹಾಯ ನೀಡಲಾಗಿದೆ. ವಿಕಲಚೇತನ ಹಾಗೂ ದಿವ್ಯಾಂಗ ಮಕ್ಕಳ ಯೋಗಕ್ಷೇಮ ಹಾಗೂ ಅವರ ಆರೋಗ್ಯ ಮತ್ತು ಸಂರಕ್ಷಣೆಗೆ ಸರ್ಕಾರದೊಂದಿಗೆ ಸರ್ಕಾರೇತರ ಸಂಸ್ಥೆಗಳು ಕೈಜೊಡಿಸಬೇಕು. ಇದರಿಂದ ವಿಕಲಚೇತನರಲ್ಲಿಯೂ ಬದುಕಿನ ಆತ್ಮವಿಶ್ವಾಸ ಮೂಡುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ವಿಶೇಷ ಕಾಳಜಿ ಮತ್ತು ಆತ್ಮವಿಶ್ವಾಸದ ಅಗತ್ಯವಿರುವ ವಿಶೇಷ ಚೇತನ ಹಾಗೂ ದಿವ್ಯಾಂಗ ಮಕ್ಕಳಿಗೆ ಸರ್ಕಾರಕ್ಕಿಂತ ಸಮಾಜದ ಹಾಗೂ ಸಮುದಾಯದ ಬೆಂಬಲದ ಅಗತ್ಯವಿದೆ. ವಿಶೇಷ ಚೇತನರಲ್ಲಿ ಸಾಮಾನ್ಯಗಿಂತ ವಿಶೇಷವಾದ ಬುದ್ಧಿವಂತಿಕೆ ಹಾಗೂ ಜ್ಞಾನ ಇರುತ್ತದೆ. ಇದನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರ ಜನ್ಮದಿನದ ಹಿನ್ನೆಲೆಯಲ್ಲಿ ಸರ್ಕಾರೇತರ ಸಂಸ್ಥೆಗಳು ಹಾಗೂ ಇಲಾಖೆಗಳಿಂದ ಸಮಾಜಮುಖಿ ಕಾರ್ಯ ನೆರವೇರುತ್ತಿದೆ. ಜಿಲ್ಲಾ ಪಂಚಾಯಿತಿಯಿಂದ ಹಾಗೂ ಗ್ರಾಮ ಪಂಚಾಯಿತಿಗಳಿಂದ ವಿಕಲಚೇತನರ ಅಭಿವೃದ್ಧಿಗಾಗಿ ವಿಶೇಷ ಅನುದಾನಗಳನ್ನು ನೀಡಲಾಗುತ್ತಿದೆ ಎಂದು ಸಿಇಓ ಭುವನೇಶ ಪಾಟೀಲ ಅವರು ತಿಳಿಸಿದರು.

ಬಿಎಸ್‌ವೈ ಜನಪರ ಯೋಜನೆಗಳು ಜನಮನ ಗೆದ್ದಿವೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇಂದು ದೇಶದಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿದ್ದು, ಅದರಂತೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಹೇಳಿದರು.

ಅವರು ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಅವರ ಜನ್ಮದಿನದ ಪ್ರಯುಕ್ತ ಹಾಗೂ ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಕೇಸ್‌ನಲ್ಲಿ ನಿರ್ದೋಷಿಯಾಗಿ ಬಿಡುಗಡೆ ಆಗಿ ಬರಲಿ ಎಂಬ ಉದ್ದೇಶದಿಂದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ಬಿಜೆಪಿ ಪಕ್ಷವನ್ನು ಗ್ರಾಮೀಣ ಭಾಗದಿಂದ ಗಟ್ಟಿಯಾಗಿ ಬೆಳೆಸಿದ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಜನಪರ ಯೋಜನೆಗಳನ್ನು ತಂದಿದ್ದಾರೆ. ಅವರ ಸೇವೆಯನ್ನು ಬಿಜೆಪಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಕುತಂತ್ರದಿಂದ ಲೋಕಾಯುಕ್ತ ಬಲೆಗೆ ಸಿಲುಕಿರುವ ಶಾಸಕ ಡಾ. ಚಂದ್ರು ಲಮಾಣಿ ಅವರು ಆದಷ್ಟು ಶೀಘ್ರ ಲೋಕಾಯುಕ್ತ ಕೇಸ್‌ನಲ್ಲಿ ನಿರ್ದೋಷಿಯಾಗಿ ಹೊರಗೆ ಬಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿ ಎಂದು ಹೇಳಿದರು.

ಯುವ ಮುಖಂಡ ನವೀನ ಹಿರೇಮಠ ಮಾತನಾಡಿದರು. ಈ ಸಂದರ್ಭದಲ್ಲಿ ಶಿರಹಟ್ಟಿ ಮಂಡಲ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ಥಾವರಪ್ಪ ಲಮಾಣಿ, ವಿಜಯಕುಮಾರ ಹತ್ತಿಕಾಳ, ಹಾಲಪ್ಪ ಸೂರಣಗಿ, ಬಾಬಣ್ಣ ವೇರ್ಣೇಕರ, ದುಂಡೇಶ ಕೊಟಗಿ, ಅನಿಲ ಮುಳಗುಂದ, ಡಿ.ವೈ. ಹುನಗುಂದ, ನೀಲಪ್ಪ ಹತ್ತಿ, ಪ್ರವೀಣ ಬೋಮಲೆ, ವಿಜಯ ಕುಂಬಾರ, ಬಸವರಾಜ ಕಲ್ಲೂರ, ಶಕ್ತಿ ಕತ್ತಿ, ಭೀಮಣ್ಣ ಯಂಗಾಡಿ, ಪ್ರವೀಣ ಪಾಟೀಲ, ರಾಮು ನಾಯಕ, ಉಳವೇಶಗೌಡ ಪಾಟೀಲ, ರಾಜಶೇಖರ ಶಿಗ್ಲಿಮಠ, ಮಹಾದೇವಪ್ಪ ಅಣ್ಣಿಗೇರಿ, ನಾಗನಗೌಡ ಪಾಟೀಲ್, ಮಂಜುನಾಥ ಬಸಾಪುರ, ರಮೇಶ ದನದಮನಿ, ವೀರೇಶ ಸಾಸಲವಾಡ, ಮಂಜುನಾಥ ಗಜಕೋಶ, ಹನುಮಂತ ಕೊಪ್ಪದ, ಭರತೇಶ ಪಾಟೀಲ, ಬಾಬಣ್ಣ ವಡಕಣ್ಣವರ, ಸತೀಶ ಕಾಡಣ್ಣವರ, ಆಕಾಶ ಸೌದತ್ತಿ, ವಿಶಾಲ ಬಟಗುರ್ಕಿ, ಸಂಗಮೇಶ ಬೆಳವಲಕೊಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.

ಜಿ.ಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡ್ರ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪನವರ ಸೇವೆ ಅಪಾರವಾಗಿದೆ. ಅವರ ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಪಕ್ಷದ ಉತ್ತಮ ಆಡಳಿತಗಾರನಾಗಿ ಅವರು ತಂದ ಯೋಜನೆಗಳು ಜನಪ್ರಿಯವಾಗಿವೆ ಎಂದು ಹೇಳಿದರು.

ಶೋಭಾ ಪಾಟೀಲರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು 55ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮ, ಗುರುವಂದನಾ, ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ, ಧನ್ಯತಾ ಸಮಾರಂಭದಲ್ಲಿ ರಾಜ್ಯ ಮಟ್ಟದ ಉತ್ತಮ ಸಾಧಕ ಶಿಕ್ಷಕಿಗೆ ಕೊಡಮಾಡುವ `ಸಾವಿತ್ರಿಬಾಯಿ ಫುಲೆ ಪ್ರಶಸ್ತಿ’ಯನ್ನು ಮುಳಗುಂದ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಸಹ ಶಿಕ್ಷಕಿ ಶೋಭಾ ಪಾಟೀಲ ಅವರಿಗೆ ನೀಡಿ ಸನ್ಮಾನಿಸಲಾಗುವುದು ಎಂದು ಶಾಲಾ ಪ್ರಧಾನ ಗುರು ಪಿ.ಎಸ್. ಮರಿದೇವರಮಠ ತಿಳಿಸಿದ್ದಾರೆ.

36 ಪ್ರಯಾಣಿಕರಿದ್ದ ಬಸ್ ನಡುರಸ್ತೆಯಲ್ಲೇ ಬೆಂಕಿಗಾಹುತಿ; ತಪ್ಪಿದ ಭಾರೀ ಅನಾಹುತ!

0

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ಪ್ರದೇಶದಲ್ಲಿ ಸಾಗುತ್ತಿದ್ದ ಖಾಸಗಿ ಬಸ್ಸೊಂದು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ದೇವಸ್ಥಾನ ಮತ್ತು ಬಾಳೆಬರೆ ಫಾಲ್ಸ್ ನಡುವಿನ ಮಾರ್ಗದಲ್ಲಿ ಈ ಅವಘಡ ಸಂಭವಿಸಿದೆ.

ಕುಂದಾಪುರದಿಂದ ಶಿವಮೊಗ್ಗದತ್ತ ಸಾಗುತ್ತಿದ್ದ ದುರ್ಗಾಂಬಾ ಖಾಸಗಿ ಬಸ್‌ನ ಇಂಜಿನ್ ಭಾಗದಲ್ಲಿ ಅಚಾನಕ್ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ತಕ್ಷಣ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ, ಬಸ್ಸಿನಲ್ಲಿದ್ದ 38 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

ಆದರೆ ಬೆಂಕಿ ಕ್ಷಿಪ್ರವಾಗಿ ಹಬ್ಬಿದ ಪರಿಣಾಮ ಬಸ್ಸು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಈ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್‌ಗೆ ಬೆಂಕಿ ತಗುಲಿದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ತನಿಖೆ ಮುಂದುವರಿದಿದೆ.

 

error: Content is protected !!