ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಎಐ ಇಂಪ್ಯಾಕ್ಟ್ ಶೃಂಗಸಭೆ ನಡೆಯಲಿದೆ. ಕೃತಕ ಬುದ್ಧಿಮತ್ತೆ ವೇಗವಾಗಿ ವಿಶ್ವ ವ್ಯವಸ್ಥೆಯನ್ನು ಬದಲಿಸುತ್ತಿರುವ ಹಿನ್ನೆಲೆಯಲ್ಲಿ ಈ ಜಾಗತಿಕ ಸಮ್ಮೇಳನಕ್ಕೆ ಅಪಾರ ಮಹತ್ವ ಸಿಕ್ಕಿದೆ.
ಸಮ್ಮೇಳನದ ಪ್ರಮುಖ ಉದ್ದೇಶ ಎಐ ಕುರಿತು ಜಾಗೃತಿ ಮೂಡಿಸುವುದು ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತದ ಭವಿಷ್ಯ ಯೋಜನೆಗಳನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸುವುದು. ವಿಶ್ವದ ಅನೇಕ ದೇಶಗಳ ತಂತ್ರಜ್ಞಾನ ಸಂಸ್ಥೆಗಳು, ಉದ್ಯಮಿಗಳು ಮತ್ತು ತಜ್ಞರು ಭಾಗವಹಿಸುವ ನಿರೀಕ್ಷೆಯಿದ್ದು ಸುಮಾರು 50 ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸಂಜೆ 5 ಗಂಟೆಗೆ ಭಾರತ್ ಮಂಟಪಂನಲ್ಲಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಎಐ ಮಾನವನ ಬದುಕಿಗೆ ಬೀರುವ ಪರಿಣಾಮ, ಅದರ ಲಾಭ ಮತ್ತು ಅಪಾಯಗಳ ಕುರಿತು ವಿಶೇಷ ಚರ್ಚೆಗಳು ನಡೆಯಲಿವೆ. ಸಮಗ್ರ ಅಭಿವೃದ್ಧಿಗೆ ಎಐ ಬಳಕೆ ಹಾಗೂ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ವಿವಿಧ ಅಧಿವೇಶನಗಳು ನಡೆಯಲಿವೆ.
ಸಮ್ಮೇಳನದ ಅಂಗವಾಗಿ ಬೃಹತ್ ಎಕ್ಸ್ಪೋ ಆಯೋಜನೆಗೊಂಡಿದ್ದು 300 ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳು ಮತ್ತು ನೇರ ಪ್ರಾತ್ಯಕ್ಷಿಕೆಗಳು ಇರಲಿವೆ. ಜನ, ಗ್ರಹ ಮತ್ತು ಪ್ರಗತಿ ಎಂಬ ವಿಷಯಾಧಾರಿತ ಪ್ರದರ್ಶನಗಳು ಗಮನ ಸೆಳೆಯಲಿವೆ.
ಇದಲ್ಲದೆ 13 ದೇಶಗಳಿಂದ 600 ಕ್ಕೂ ಹೆಚ್ಚು ನವೋದ್ಯಮಗಳು ಭಾಗವಹಿಸಿ ಎಐ ಪರಿಸರ ವ್ಯವಸ್ಥೆಯಲ್ಲಿ ಅಂತಾರಾಷ್ಟ್ರೀಯ ಸಹಕಾರದ ಮಾದರಿಗಳನ್ನು ಪ್ರದರ್ಶಿಸಲಿವೆ.
ಮೊದಲ ದಿನ ಭಾರತದಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸಲು ಎಐ ಆಧಾರಿತ ವ್ಯವಸ್ಥೆಗಳ ಕುರಿತು ವಿಶೇಷ ಚರ್ಚೆ ನಡೆಯಲಿದೆ. ಅಪಘಾತ ಮಾದರಿಗಳನ್ನು ವಿಶ್ಲೇಷಣೆ, ಅಪಾಯ ಪೂರ್ವಾನುಮಾನ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಸಕ್ರಿಯಗೊಳಿಸುವ ಡೇಟಾ ತಂತ್ರಜ್ಞಾನಗಳ ಬಗ್ಗೆ ಪ್ರಾತ್ಯಕ್ಷಿಕೆಗಳೊಂದಿಗೆ ಚರ್ಚೆ ನಡೆಯಲಿದೆ. ಸಾರಿಗೆ ಇಲಾಖೆ, ಐಐಟಿ ಸಂಸ್ಥೆಗಳು ಹಾಗೂ ವಿವಿಧ ಕ್ಷೇತ್ರಗಳ ತಜ್ಞರು ಪಾಲ್ಗೊಳ್ಳಲಿದ್ದಾರೆ.