Home Blog

ಬೈಕ್–ಕಾರು ನಡುವೆ ಭೀಕರ ಅಪಘಾತ: ಮೂವರು ಬೈಕ್ ಸವಾರರ ದುರ್ಮರಣ!

ಗದಗ: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಬೈಕ್ ಸವಾರರು ಸಾವನ್ನಪ್ಪಿರುವ ದುರ್ಘಟನೆ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಾವನ್ನಪ್ಪಿದವರನ್ನು ಆನಂದ ಲಕ್ಷ್ಮೇಶ್ವರಮಠ (50), ಶಿವಪ್ಪ ಪಾಟ್ಲಿ (36) ಹಾಗೂ ಮುತ್ತಪ್ಪ ಮುದಗಣ್ಣವರ (28) ಎಂದು ಗುರುತಿಸಲಾಗಿದೆ.

ಮುಂಡರಗಿ ಪಟ್ಟಣದಿಂದ ಜಂತ್ಲಿ ಶಿರೂರ ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ಸವಾರರು ಮತ್ತು ಡೋಣಿ ಗ್ರಾಮದಿಂದ ಹಿರೇಹಡಗಲಿ ಕಡೆಗೆ ಸಾಗುತ್ತಿದ್ದ ಕಾರಿನ ನಡುವೆ ಬರದೂರು ಹಾಗೂ ಮೇವುಂಡಿ ಗ್ರಾಮಗಳ ಮಧ್ಯೆ ಈ ಅಪಘಾತ ಸಂಭವಿಸಿದೆ.

ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ, ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೂವರು ಸವಾರರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ಸ್ಥಳದಲ್ಲೇ ಆನಂದ ಲಕ್ಷ್ಮೇಶ್ವರಮಠ ಮತ್ತು ಶಿವಪ್ಪ ಪಾಟ್ಲಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮುತ್ತಪ್ಪ ಮುದಗಣ್ಣವರ ಅವರನ್ನು ಸ್ಥಳೀಯರು ಮತ್ತು ಪೊಲೀಸರು ತಕ್ಷಣ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಹ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ಸುದ್ದಿ ತಿಳಿದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ದುರ್ಘಟನೆಯಿಂದ ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ದುಃಖ ಮೂಡಿಸಿದೆ.

ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಸಿದ್ದರಾಮಯ್ಯ ಈ ಬಾರಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡಿಸಲಿದ್ದಾರೆ: ಆರ್. ಅಶೋಕ್ ಟೀಕೆ

ಬೆಂಗಳೂರು: ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹1.15 ಲಕ್ಷ ಕೋಟಿ ಸಾಲ ಪಡೆದು ಬಜೆಟ್ ಮಂಡಿಸಲಿದ್ದಾರೆ. ಜನರ ಮೇಲೆ ಮತ್ತೊಮ್ಮೆ ತೆರಿಗೆಗಳ ಹೊರೆ ಹಾಕುವುದು ಖಚಿತ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಂದರೆ ತೆರಿಗೆ ಹೇರುವ ರಾಮಯ್ಯ ಆಗಿದ್ದಾರೆ. ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆಗಳ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ತಿಂಗಳಿಗೆ ನಾಲ್ಕರಂತೆ ತೆರಿಗೆ ಹಾಕುತ್ತಿದ್ದಾರೆ. ಈಗಾಗಲೇ 36 ತೆರಿಗೆಗಳನ್ನು ಜನರ ಮೇಲೆ ಹೇರಿದ್ದಾರೆ ಎಂದು ಆರೋಪಿಸಿದರು.

ಚುನಾವಣೆಗೆ ಮುನ್ನ ಗ್ಯಾರಂಟಿ ಯೋಜನೆಗಳನ್ನು ಜನರ ಮೇಲೆ ಹೊರೆ ಹಾಕದೇ ಜಾರಿಗೊಳಿಸುವುದಾಗಿ ಭರವಸೆ ನೀಡಿದರೂ, ಈಗ ತೆರಿಗೆಗಳ ಮೂಲಕ ಜನರ ಮೇಲೆ ಭಾರ ಹಾಕಲಾಗಿದೆ ಎಂದು ಅವರು ದೂರಿದರು. ಸಿದ್ದರಾಮಯ್ಯ ಅವರ ಅವಧಿ ಮುಗಿಯುವ ವೇಳೆಗೆ ರಾಜ್ಯದ ಒಟ್ಟು ಸಾಲ ₹8 ಲಕ್ಷ ಕೋಟಿ ಮೀರಲಿದೆ. ಇದರಿಂದ ಆರ್ಥಿಕ ಶಿಸ್ತು ಹಾಳಾಗಲಿದೆ ಎಂದು ಅಶೋಕ್ ಹೇಳಿದರು.

ಸಿಎಂ ಇಲ್ಲದ ಆದಾಯವನ್ನು ಸೃಷ್ಟಿಸಿದಂತೆ ತೋರಿಸಿ ಜಿಎಸ್ಡಿಪಿಗೆ ಹೋಲಿಕೆಯ ಶೇಕಡಾವಾರು ಕಡಿಮೆ ಇದೆ ಎಂದು ಪ್ರದರ್ಶಿಸುತ್ತಿದ್ದಾರೆ. ಇದನ್ನು ಆರ್ಥಿಕ ಶಿಸ್ತು ಎಂದು ತೋರಿಸುವುದು ತಪ್ಪು ಎಂದು ಅವರು ಟೀಕಿಸಿದರು. “ಸಾಲ ಮಾಡಿ ಸರ್ಕಾರ ನಡೆಸಲು ಯಾರೂ ಬೇಕಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಜನರ ನಿರೀಕ್ಷೆ ಸುಳ್ಳಾಗಿದೆ” ಎಂದರು.

ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಲವಿಲ್ಲದ ಬಜೆಟ್ ಮಂಡಿಸಿದ್ದರು. ಇನ್ನೂ ₹24,400 ಕೋಟಿ ಸಾಲ ಪಡೆಯುವ ಅವಕಾಶವಿದ್ದರೂ ಅವರು ಸಾಲ ಪಡೆದಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಪ್ರತಿ ವರ್ಷ ಸಾಲ ಪಡೆಯುತ್ತಿದೆ. ಈ ಬಾರಿ ₹1.15 ಲಕ್ಷ ಕೋಟಿ ಸಾಲ ಪಡೆಯುವ ಸಾಧ್ಯತೆ ಇದೆ ಎಂದು ಅಶೋಕ್ ಆರೋಪಿಸಿದರು.

ಮೂತ್ರದಲ್ಲಿ ರಕ್ತ ಕಾಣುವುದು ಕ್ಯಾನ್ಸರ್ ಲಕ್ಷಣವೇ? ತಡೆಯುವುದು ಹೇಗೆ?

0

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಇದಕ್ಕೆ ಯೂರಿನರಿ ಇನ್ಫೆಕ್ಷನ್, ಕಿಡ್ನಿ ಸ್ಟೋನ್ ಅಥವಾ ಕೆಲವು ಔಷಧಿಗಳ ಸೇವನೆಯಿಂದ ಉಂಟಾಗುವ ಅಡ್ಡಪರಿಣಾಮಗಳು ಕಾರಣವಾಗಿರಬಹುದು.

ಕೆಲವೊಮ್ಮೆ ಪ್ರೋಸ್ಟೇಟ್ ಸಮಸ್ಯೆಯೂ ಈ ಸಮಸ್ಯೆಗೆ ಕಾರಣವಾಗಬಹುದು. ಪ್ರತಿಯೊಂದು ಸಂದರ್ಭದಲ್ಲೂ ಇದು ಕ್ಯಾನ್ಸರ್ ಲಕ್ಷಣವೆಂದು ಅರ್ಥಮಾಡಿಕೊಳ್ಳುವುದು ತಪ್ಪು. ಹಾಗಾಗಿ ಈ ರೀತಿಯ ಲಕ್ಷಣವನ್ನು ನಿರ್ಲಕ್ಷ್ಯ ಮಾಡುವುದು ಅಪಾಯಕರವಾಗಿದೆ.

ಒಂದು ಅಥವಾ ಎರಡು ಬಾರಿ ಈ ಸಮಸ್ಯೆ ಕಾಣಿಸಿಕೊಂಡರೆ ಹೆಚ್ಚಿನ ಆತಂಕ ಬೇಡ, ಆದರೆ ಇದು ಪದೇ ಪದೇ ಆಗುತ್ತಿದೆಯೆಂದು ಕಂಡರೆ ತಕ್ಷಣ ಕ್ರಮ ತೆಗೆದುಕೊಳ್ಳುವುದು ಮುಖ್ಯ. ಜನರು ಮೂತ್ರ ಸಂಬಂಧಿತ ಸಮಸ್ಯೆಗಳನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ; ಮೂತ್ರ ಮಾಡುವಾಗ ದುರ್ವಾಸನೆ ಬರುವುದು, ಉರಿ ಉಂಟಾಗುವುದು ಮುಂತಾದ ಲಕ್ಷಣಗಳನ್ನು ಸಾಮಾನ್ಯವೆಂದು ಕಡೆಗಣಿಸುತ್ತಾರೆ.

ಮೂತ್ರದಲ್ಲಿ ರಕ್ತ ಕಾಣುವುದು ಕ್ಯಾನ್ಸರ್ ಲಕ್ಷಣವೇ?

ಮೂತ್ರದಲ್ಲಿ ರಕ್ತ ಕಾಣಿಸುವುದು ಕಿಡ್ನಿ ಕ್ಯಾನ್ಸರ್‌ನ ಏಕೈಕ ಲಕ್ಷಣವಲ್ಲ. ಆದರೆ ಪದೇ ಪದೇ, ತೀವ್ರ ನೋವು, ದೇಹ ತೂಕ ಕಡಿಮೆಯಾಗುವುದು, ಬೆನ್ನು ಭಾಗದ ನಿರಂತರ ನೋವು ಇತ್ಯಾದಿ ಲಕ್ಷಣಗಳೊಂದಿಗೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಪ್ರಾಥಮಿಕವಾಗಿ ಯೂರಿನ್ ಟೆಸ್ಟ್ ಮತ್ತು ಅಲ್ಟ್ರಾಸೌಂಡ್ ಮಾಡಲಾಗುತ್ತದೆ. ಕೆಲವೊಮ್ಮೆ ಗಂಭೀರ ಸಂದರ್ಭಗಳಲ್ಲಿ ಸಿಸ್ಟೋಸ್ಕೋಪಿ ಪರೀಕ್ಷೆ ನಡೆಯಬಹುದು.

ತಡೆಯುವುದು ಹೇಗೆ?

  • ಪ್ರತಿದಿನ ಕನಿಷ್ಠ 7 ಗ್ಲಾಸ್ ನೀರು ಕುಡಿಯಿರಿ
  • ಮೂತ್ರವನ್ನು ಹಿಡಿದಿಟ್ಟುಕೊಳ್ಳಬೇಡಿ
  • ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆಯಿರಿ
  • ಮೂತ್ರದಲ್ಲಿ ರಕ್ತ ಕಾಣಿಸಿದರೆ ನಿರ್ಲಕ್ಷ್ಯ ಮಾಡಬೇಡಿ

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಗಂಭೀರ ಆರೋಗ್ಯ ಸಮಸ್ಯೆಯ ಸೂಚಕವಾಗಿರಬಹುದು. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆದು ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: 6 ದಿನಗಳಲ್ಲಿ 23 ಸಾವಿರಕ್ಕೂ ಹೆಚ್ಚು ವಿಮಾನ ರದ್ದು

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಕಳೆದ ಆರು ದಿನಗಳಲ್ಲಿ 23,000ಕ್ಕೂ ಅಧಿಕ ವಿಮಾನಗಳು ರದ್ದಾಗಿದ್ದು, ಜಾಗತಿಕ ವಿಮಾನಯಾನ ಉದ್ಯಮದ ಮೇಲೆ ದೊಡ್ಡ ಆರ್ಥಿಕ ಪರಿಣಾಮ ಉಂಟಾಗಿದೆ.

ಇರಾನ್ಇಸ್ರೇಲ್ ಸಂಘರ್ಷದ ಹಿನ್ನೆಲೆ ಫೆಬ್ರವರಿ 28ರಿಂದ ಗಲ್ಫ್ ಪ್ರದೇಶಕ್ಕೆ ಹಾಗೂ ಅಲ್ಲಿಂದ ಇತರ ದೇಶಗಳಿಗೆ ನಿಗದಿಯಾಗಿದ್ದ 23,000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಇದರ ಪರಿಣಾಮವಾಗಿ ಸುಮಾರು 4.4 ಮಿಲಿಯನ್ (44 ಲಕ್ಷ) ಪ್ರಯಾಣಿಕರ ಸೀಟುಗಳು ಪ್ರಭಾವಿತರಾಗಿವೆ.

ವಿಮಾನಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ Air India ಹೆಚ್ಚುವರಿ ಸೇವೆಗಳನ್ನು ಆರಂಭಿಸಲು ಮುಂದಾಗಿದೆ. ಮಾರ್ಚ್ 5ರಿಂದ 11ರವರೆಗೆ ದೆಹಲಿ–ಟೊರೊಂಟೊ ಮಾರ್ಗದಲ್ಲಿ ಹಾಗೂ ಮಾರ್ಚ್ 7ರಿಂದ 10ರವರೆಗೆ ದೆಹಲಿ–ಫ್ರಾಂಕ್ಫರ್ಟ್ ಮಾರ್ಗದಲ್ಲಿ ಮೂರು ಹೆಚ್ಚುವರಿ ವಿಮಾನಗಳು ಕಾರ್ಯನಿರ್ವಹಿಸಲಿವೆ.

ಜೊತೆಗೆ ದೆಹಲಿ–ಪ್ಯಾರಿಸ್ ನಡುವೆ ಒಂದು ಹೆಚ್ಚುವರಿ ವಿಮಾನವನ್ನು ನಿಯೋಜಿಸಲಾಗಿದೆ. ಮಧ್ಯಪ್ರಾಚ್ಯದಿಂದ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಮಾರ್ಚ್ 11ರ ಬಳಿಕವೂ ಹೆಚ್ಚುವರಿ ಸೇವೆಗಳ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಇದೇ ವೇಳೆ ವಿಶ್ವದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಲ್ಲೊಂದಾದ ಎಮಿರೇಟ್ಸ್ ದುಬೈಗೆ ಮತ್ತು ದುಬೈನಿಂದ ವಿಮಾನಗಳ ಸ್ಥಗಿತವನ್ನು ಮಾರ್ಚ್ 7ರವರೆಗೆ ವಿಸ್ತರಿಸಿದೆ. ಕಳೆದ ಶನಿವಾರದಿಂದ 2,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಸಂಸ್ಥೆ ತಿಳಿಸಿದೆ.

ಒಮಾನ್ ಏರ್ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮಾರ್ಚ್ 6ರವರೆಗೆ ಅಮ್ಮಾನ್, ದುಬೈ, ಬಹ್ರೇನ್, ದೋಹಾ, ದಮ್ಮಾಮ್, ಕುವೈತ್, ಕೋಪನ್‌ಹ್ಯಾಗನ್, ಬಾಗ್ದಾದ್ ಮತ್ತು ಖಾಸಬ್‌ಗೆ ಹಾಗೂ ಅಲ್ಲಿಂದ ಹೊರಡುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ದಟ್ಟಣೆಯಿಂದಾಗಿ ಮಸ್ಕತ್‌ಗೆ ಪ್ರಯಾಣಿಸುವವರು ನಿರ್ಗಮನಕ್ಕೆ ಕನಿಷ್ಠ 12 ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು ಎಂದು ಸಂಸ್ಥೆ ಸೂಚಿಸಿದೆ.

ಮಹಿಳಾ ದಿನಾಚರಣೆ ಎಫೆಕ್ಟ್: ಮೈಸೂರು ಸಿಲ್ಕ್ ಸೀರೆಗೆ ಭಾರೀ ಕ್ರೇಜ್ – ಬೆಳಗ್ಗೆ 4 ಗಂಟೆಗೇ KSIC ಮಳಿಗೆ ಮುಂದೆ ಮಹಿಳೆಯರ ಕ್ಯೂ!

ಬೆಂಗಳೂರು: ಮಹಿಳಾ ದಿನಾಚರಣೆ ಸಮೀಪಿಸುತ್ತಿದ್ದಂತೆ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ಮೈಸೂರು ಸಿಲ್ಕ್ ಸೀರೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಕಾಣಿಸಿಕೊಂಡಿದೆ. ಬೆಂಗಳೂರಿನ ಜಯನಗರದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ (KSIC) ಮಳಿಗೆಯ ಮುಂದೆ ಮಹಿಳೆಯರು ಮುಂಜಾನೆ 4 ಗಂಟೆಯಿಂದಲೇ ಸರತಿಯ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ.

ಸಾಮಾನ್ಯವಾಗಿ ಈ ಮಳಿಗೆ ಬೆಳಗ್ಗೆ 10:30ಕ್ಕೆ ಮಾತ್ರ ಬಾಗಿಲು ತೆರೆಯುತ್ತದೆ. ಆದರೆ ಸೀರೆಗಳ ಸ್ಟಾಕ್ ಖಾಲಿಯಾಗುವ ಭಯದಿಂದ ಮಹಿಳೆಯರು ಬೆಳಗಿನ ಜಾವವೇ ಬಂದು ಕ್ಯೂನಲ್ಲಿ ನಿಂತಿದ್ದಾರೆ. ಕೇವಲ ಬೆಂಗಳೂರಿನವರಷ್ಟೇ ಅಲ್ಲದೆ ಶಿರಸಿ, ಶಿರಾ, ಚಳ್ಳಕೆರೆ ಸೇರಿದಂತೆ ನೆರೆಯ ಅನಂತಪುರದಿಂದಲೂ ಮಹಿಳೆಯರು ಮೈಸೂರು ಸಿಲ್ಕ್ ಸೀರೆ ಖರೀದಿಸಲು ಆಗಮಿಸಿದ್ದಾರೆ.

ಮಳಿಗೆಯ ಸಿಬ್ಬಂದಿ ಅಪಾರ ಸಂಖ್ಯೆಯಲ್ಲಿ ಸೇರಿರುವ ಮಹಿಳೆಯರನ್ನು ನಿಯಂತ್ರಿಸಲು ಟೋಕನ್ ವ್ಯವಸ್ಥೆ ಮಾಡಿದ್ದು, ಟೋಕನ್ ಪಡೆಯಲು ಮಹಿಳೆಯರ ನಡುವೆ ಭಾರೀ ನೂಕಾಟ ಹಾಗೂ ವಾಗ್ವಾದಗಳೂ ನಡೆಯುತ್ತಿವೆ.

ಸದ್ಯ ಮಳಿಗೆಯಲ್ಲಿ ಕೇವಲ 45 ಮೈಸೂರು ಸಿಲ್ಕ್ ಸೀರೆಗಳು ಮಾತ್ರ ಲಭ್ಯವಿದ್ದು, ಹೊರಗಡೆ 100ಕ್ಕೂ ಹೆಚ್ಚು ಮಹಿಳೆಯರು ಕಾದು ಕುಳಿತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಒಂದು ಟೋಕನ್‌ಗೆ ಒಂದು ಸೀರೆ’ ಎಂಬ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ.

ಇಲ್ಲಿ ಮೈಸೂರು ಸಿಲ್ಕ್ ಸೀರೆಗಳು ವಾರದ ಎಲ್ಲಾ ದಿನಗಳಲ್ಲೂ ಲಭ್ಯವಿರುವುದಿಲ್ಲ. ಪ್ರತಿ ಗುರುವಾರ ಹಾಗೂ ಶನಿವಾರ ಮಾತ್ರ ವಿತರಣೆ ಮಾಡಲಾಗುತ್ತದೆ. ಸೀರೆಗಳ ಬೆಲೆ 26 ಸಾವಿರ ರೂಪಾಯಿಯಿಂದ ಆರಂಭವಾಗಿ ಸುಮಾರು 3 ಲಕ್ಷ ರೂಪಾಯಿವರೆಗೂ ಇದೆ.

ಮುಂಬರುವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ತಮಗೆ ತಾವೇ ಉಡುಗೊರೆ ನೀಡಿಕೊಳ್ಳಲು ಹಾಗೂ ತಮ್ಮ ಪ್ರೀತಿಪಾತ್ರರಿಗೆ ಕಾಣಿಕೆ ನೀಡಲು ಮಹಿಳೆಯರು ದುಬಾರಿ ಮೈಸೂರು ಸಿಲ್ಕ್ ಸೀರೆಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ ಅದ್ಧೂರಿ ರಿಸೆಪ್ಷನ್: ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ ನ್ಯಾಷನಲ್‌ ಕ್ರಶ್‌, ಆರತಕ್ಷತೆಯಲ್ಲಿ ಡಿಸಿಎಂ ಡಿಕೆಶಿ ಭಾಗಿ

ನ್ಯಾಷನಲ್ ಕ್ರಷ್ ಎಂದೇ ಖ್ಯಾತಿಯಾಗಿರುವ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್‌ನ ‘ರೌಡಿ ಬಾಯ್’ ವಿಜಯ್ ದೇವರಕೊಂಡ ಅವರ ಮದುವೆ ಆರತಕ್ಷತೆ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನಡೆಯಿತು.

ಫೆಬ್ರವರಿ 26ರಂದು ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ನಿನ್ನೆ ತಾಜ್ ಕೃಷ್ಣ ಹೋಟೆಲ್‌ನಲ್ಲಿ ನವಜೋಡಿಯ ರಿಸೆಪ್ಷನ್ ಕಾರ್ಯಕ್ರಮವನ್ನು ಭರ್ಜರಿಯಾಗಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ನವಜೋಡಿಯ ಸಾಂಪ್ರದಾಯಿಕ ಉಡುಗೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆ ಹಾಗೂ ರಿಸೆಪ್ಷನ್‌ಗಳಲ್ಲಿ ದುಬಾರಿ ಡಿಸೈನರ್ ಉಡುಪು ಧರಿಸುವುದು ರೂಢಿ. ಆದರೆ ಈ ಜೋಡಿ ವಿಭಿನ್ನವಾಗಿ ಸಾಂಪ್ರದಾಯಿಕ ವೇಷಭೂಷಣದಲ್ಲಿ ಮಿಂಚಿದರು.

ರಶ್ಮಿಕಾ ಮಂದಣ್ಣ ಅವರು ಕೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆ ಧರಿಸಿ ಮಿರಮಿರನೆ ಮಿಂಚಿದರೆ, ವಿಜಯ್ ದೇವರಕೊಂಡ ಪಂಚೆ ಮತ್ತು ಶರ್ಟ್ ಧರಿಸಿ ದೇಸಿ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದರು.

ಈ ಅದ್ಧೂರಿ ಸಮಾರಂಭದಲ್ಲಿ ಸಿನಿಮಾ ಕ್ಷೇತ್ರದ ಗಣ್ಯರು ಮಾತ್ರವಲ್ಲದೆ ರಾಜಕೀಯ ನಾಯಕರು ಕೂಡ ಭಾಗವಹಿಸಿದ್ದರು. ವಿಶೇಷವಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯಕ್ರಮದಲ್ಲಿ ಹಾಜರಾಗಿ ನವಜೋಡಿಗೆ ಶುಭಾಶಯ ಕೋರಿದರು.

ಹೋಟೆಲ್ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ ಆರೋಪ: ಪಾಕ್ ಆಟಗಾರನಿಗೆ ದಂಡ

0

ಕೊಲಂಬೋ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಶ್ರೀಲಂಕಾಗೆ ಬಂದಿದ್ದ ಪಾಕಿಸ್ತಾನ ತಂಡದ ಆಟಗಾರನೊಬ್ಬ ಕ್ಯಾಂಡಿಯ ಹೋಟೆಲಿನ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆತಿಥೇಯ ಶ್ರೀಲಂಕಾ ವಿರುದ್ಧ ನಡೆದ ಕೊನೆಯ ಸೂಪರ್–8 ಪಂದ್ಯಕ್ಕೂ ಮುನ್ನ ಈ ಘಟನೆ ನಡೆದಿದ್ದು, ಮಹಿಳಾ ಸಿಬ್ಬಂದಿ ಸಹಾಯಕ್ಕಾಗಿ ಕೂಗಿದಾಗ ಹೋಟೆಲ್ ಸಿಬ್ಬಂದಿ ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ಬಳಿಕ ಈ ವಿಷಯವನ್ನು ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೈದ್ ಚೀಮಾ ಅವರಿಗೆ ತಿಳಿಸಿದ್ದಾರೆ.

ಕ್ಯಾಂಡಿಯ ಗೋಲ್ಡನ್ ಕ್ರೌನ್ ಹೋಟೆಲಿನ ಆಡಳಿತ ಮಂಡಳಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಆಟಗಾರನ ಪರವಾಗಿ ತಂಡದ ವ್ಯವಸ್ಥಾಪಕ ನವೈದ್ ಚೀಮಾ ಕ್ಷಮೆಯಾಚಿಸಿದ್ದು, ಅನುಚಿತ ವರ್ತನೆ ತೋರಿದ ಆಟಗಾರನಿಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಇನ್ನು ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ 5 ರನ್‌ಗಳಿಂದ ಗೆಲುವು ಸಾಧಿಸಿದ್ದರೂ, ನೆಟ್ ರನ್ ರೇಟ್ ಕಡಿಮೆ ಇದ್ದ ಕಾರಣ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ತಂಡ ಭಾನುವಾರ ಮತ್ತು ಸೋಮವಾರ ಪಾಕಿಸ್ತಾನಕ್ಕೆ ಮರಳಿದೆ.

ಘಟನೆಯ ಹಿನ್ನೆಲೆ ಈ ಆಟಗಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಶಿಸ್ತು ಸಮಿತಿಯ ಮುಂದೆ ಹಾಜರಾಗುವ ಸಾಧ್ಯತೆಯಿದ್ದು, ಹೆಚ್ಚಿನ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಪಾಕಿಸ್ತಾನಿ ಆಟಗಾರರ ಪ್ರವಾಸದ ವೇಳೆ ಅಸಭ್ಯ ವರ್ತನೆ ಆರೋಪಗಳು ಕೇಳಿಬರುವುದು ಹೊಸದಲ್ಲ.

ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದ ವೇಳೆ ಯುವ ಬ್ಯಾಟರ್ ಹೈದರ್ ಅಲಿ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಮ್ಯಾಂಚೆಸ್ಟರ್ ಪೊಲೀಸರು ಬಂಧಿಸಿದ್ದರು. ಬಳಿಕ ಸಾಕ್ಷ್ಯಾಧಾರಗಳ ಕೊರತೆಯಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಇದಕ್ಕೂ ಮೊದಲು ಮಲೇಷ್ಯಾ ಪ್ರವಾಸದ ವೇಳೆ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಆರೋಪದ ಮೇಲೆ ಪಾಕಿಸ್ತಾನ ತಂಡದ ಮಸಾಜ್ ತಜ್ಞ ಮಲಾಂಗ್ ಅಲಿ ವಿರುದ್ಧವೂ ದೂರು ದಾಖಲಾಗಿದ್ದು, ಅವರಿಗೆ ದಂಡ ವಿಧಿಸಲಾಗಿತ್ತು.

ಕೆಲಸಕ್ಕೆಂದು ಹೋದ ನವವಿವಾಹಿತನ ಶವ ತೋಟದಲ್ಲಿ ಪತ್ತೆ: ಸಾವಿನ ಸುತ್ತ ಅನುಮಾನಗಳ ಹುತ್ತ!

0

ತುಮಕೂರು:- ತಿಪಟೂರು ನಗರದ ಜೈಪುರ ರಸ್ತೆಯ ಚಿಕ್ಕಕೊಟ್ಟಗಿಹಳ್ಳಿ ಬಳಿಯ ತೋಟ ಒಂದರಲ್ಲಿ ಕೆಲಸಕ್ಕೆಂದು ಮನೆಯಿಂದ ಹೋಗಿದ್ದ ವ್ಯಕ್ತಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ ಆಗಿರುವಂತಹ ಘಟನೆ ಜರುಗಿದೆ.

32 ವರ್ಷದ ಮನ್ಸೂರ್ ಕೊಲೆಯಾದ ವ್ಯಕ್ತಿ. ಇವರು ಕಳೆದ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಇದೀಗ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟುಕೊಂಡಿದೆ.

ಗುಜುರಿ ಕೆಲಸ ಮಾಡುತ್ತಿದ್ದ ಮನ್ಸೂರ್, ಕಳೆದ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದು, ಹೊಸ ಜೀವನ ಆರಂಭಿಸಿದ್ದರು. ನಿನ್ನೆ ಬೆಳಿಗ್ಗೆ ತನ್ನದೇ ಆಟೋದಲ್ಲಿ ಮನೆಯಿಂದ ಹೋದವರು ಬಳಿಕ ನಾಪತ್ತೆ ಆಗಿದ್ದಾರೆ. ಕುಟುಂಬಸ್ಥರು ಹಲವು ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ತಿಪಟೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಆಟೋ ಹುಡುಕಾಡಿದಾಗ ಚಿಕ್ಕಕೊಟ್ಟಗಿಹಳ್ಳಿ ಬಳಿ ಪತ್ತೆ ಆಗಿದೆ. ಬಳಿಕ ಸುತ್ತಮುತ್ತ ಹುಡುಕಾಟ ಮಾಡಿದ ವೇಳೆ ಅಡಿಕೆ ತೋಟ ಒಂದರಲ್ಲಿ ಮನ್ಸೂರ್ ಶವ ಪತ್ತೆ ಆಗಿದೆ.

ಘಟನೆ ಸಂಬಂಧ ಸದ್ಯ ತಿಪಟೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸಿದ್ದಾರೆ.

3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತ ಹೃದಯಾಘಾತಕ್ಕೆ ಬಲಿ!

ನೆಲಮಂಗಲ:- ಮಾದನಾಯಕನಹಳ್ಳಿಯ ಅರೆಕೆತ್ತನಹಳ್ಳಿಯಲ್ಲಿ ಹೃದಯಾಘಾತದಿಂದ ನವವಿವಾಹಿತ ಸಾವನ್ನಪ್ಪಿದ ಘಟನೆ ಜರುಗಿದೆ.

ಚರಣ್ (30) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ. ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಚರಣ್ ಅವರ ಮದುವೆ ಮೂರು ತಿಂಗಳ ಹಿಂದೆ ನಡೆದಿತ್ತು. ಇಂದು ಬೆಳಗ್ಗೆ ಮನೆಯಲ್ಲಿದ್ದ ವೇಳೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ವೇಳೆ ಮನೆಯಲ್ಲೇ ಅವರು ಕುಸಿದು ಬಿದ್ದಿದ್ದರು.

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿದ್ದನ್ನು ಧೃಢಪಡಿಸಿದ್ದರು. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲದ ಶವಗಾರಕ್ಕೆ ರವಾನೆ ಮಾಡಲಾಗಿದೆ.

ಬಿಹಾರ ರಾಜಕೀಯದಲ್ಲಿ ಬದಲಾವಣೆ? ಸಿಎಂ ಸ್ಥಾನ ತ್ಯಜಿಸಲಿರುವ ನಿತೀಶ್ ಕುಮಾರ್

ನವದೆಹಲಿ: ದೇಶದ ಹಿರಿಯ ರಾಜಕೀಯ ಮುತ್ಸದ್ಧಿಗಳಲ್ಲಿ ಒಬ್ಬರಾದ ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿ ರಾಜ್ಯಸಭೆಗೆ ತೆರಳಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಬಿಜೆಪಿ ನಾಯಕನೊಬ್ಬರು ಮುಖ್ಯಮಂತ್ರಿ ಸ್ಥಾನಕ್ಕೇರಲಿದ್ದು, ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಉಪಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿದೆ.

75 ವರ್ಷದ ನಿತೀಶ್ ಕುಮಾರ್ ಅವರು 10 ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ದಾಖಲೆ ಹೊಂದಿದ್ದಾರೆ. ಜಿತನ್ ರಾಮ್ ಮಾಂಝಿ ಮುಖ್ಯಮಂತ್ರಿಯಾಗಿದ್ದ ಅಲ್ಪಾವಧಿಯನ್ನು ಹೊರತುಪಡಿಸಿದರೆ, 2015ರಿಂದ ಅವರು ನಿರಂತರವಾಗಿ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಮಹಾಘಟಬಂಧನದಲ್ಲಿದ್ದ ಅವರು ಬಳಿಕ ಎನ್‌ಡಿಎ ಸೇರಿಕೊಂಡಿದ್ದರು.

2025ರ ವಿಧಾನಸಭಾ ಚುನಾವಣೆಗೆ ಮುನ್ನವೇ ನಾಯಕತ್ವ ಬದಲಾವಣೆ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆದಿದ್ದರೂ, ಪಕ್ಷದಲ್ಲಿ ಅವರಷ್ಟೇ ವರ್ಚಸ್ಸುಳ್ಳ ನಾಯಕನಿಲ್ಲದಿರುವುದು ಹಾಗೂ ಅವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಎನ್‌ಡಿಎ ಆತುರದ ನಿರ್ಧಾರ ಕೈಗೊಂಡಿರಲಿಲ್ಲ. 2025ರ ಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸಿ ಒಕ್ಕೂಟ ಜಯಗಳಿಸಿದ ಬಳಿಕ ಅವರು ಮತ್ತೊಮ್ಮೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಲೋಕಸಭೆಯಲ್ಲಿ ಪ್ರಭಾವಿ ನಾಯಕರಾಗಿದ್ದ ಅವರು 1990ರಲ್ಲಿ ವಿ.ಪಿ. ಸಿಂಗ್ ಸರ್ಕಾರದಲ್ಲಿ ಕೃಷಿ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ 1998ರಿಂದ 2003ರವರೆಗೆ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಭೂ ಸಾರಿಗೆ, ಕೃಷಿ ಹಾಗೂ ರೈಲ್ವೆ ಖಾತೆಗಳ ಕೇಂದ್ರ ಸಚಿವರಾಗಿದ್ದರು.

ಮುಖ್ಯಮಂತ್ರಿ ಹುದ್ದೆ ತ್ಯಜಿಸಿದ ಬಳಿಕ ಅವರು ರಾಜ್ಯಸಭೆಯ ಮೂಲಕ ದೆಹಲಿ ರಾಜಕೀಯಕ್ಕೆ ಮರುಪ್ರವೇಶಿಸಿದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿ ಅವಕಾಶ ಸಿಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹಿರಿಯ ನಾಯಕನಾದ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಕ್ಕರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

error: Content is protected !!