Home Blog

ಮಾನಸಿಕ ಖಿನ್ನತೆಗೆ ಒಳಗಾಗಿ ವೈದ್ಯ ಮಾತ್ರೆ ಸೇವಿಸಿ ಆತ್ಮಹತ್ಯೆ!

0

ಮಂಡ್ಯ: ಮಾನಸಿಕ ಖಿನ್ನತೆಗೆ ಒಳಗಾಗಿ ವೈದ್ಯ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ನಗರದ ಹರಿಪ್ರಿಯ ಹೊಟೇಲ್‌ನಲ್ಲಿ ನಡೆದಿದೆ. ಕೆ.ಆರ್.ನಗರ ಮೂಲದ ಸುಖದೇವ್ (53) ಆತ್ಮಹತ್ಯೆಗೆ ಶರಣಾದ ವೈದ್ಯನಾಗಿದ್ದು,

ಮೈಸೂರಿನ ಖಾಸಗಿ ಕ್ಲಿನಿಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ನಗರದಲ್ಲಿರುವ ಹರಿಪ್ರಿಯ ಹೊಟೇಲ್‌ನಲ್ಲಿ ರೂಂ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾಗ ಮದ್ಯ ಸೇವನೆ ಮಾಡಿ, 30 ಮಾತ್ರೆಗಳ ಔಷಧ ಸೇವಿಸಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಮಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಮುಂದಿನ ಕ್ರಮಗಳನ್ನು ಪೊಲೀಸರು ಕೈಗೊಳ್ಳುತ್ತಿದ್ದಾರೆ.

ಲಕ್ಷ್ಮೇಶ್ವರ ಸಮೀಪ ಕತ್ತು ಕೊಯ್ದು ಯುವಕನ ಕೊಲೆ – ಹೊಲದಲ್ಲಿ ಶವ ಪತ್ತೆ

0

ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ ಗ್ರಾಮದ ಯುವಕನನ್ನು ಕತ್ತು ಕೊಯ್ದು ಕ್ರೂರವಾಗಿ ಹತ್ಯೆ ಮಾಡಿರುವ ದುರ್ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಮಹ್ಮದ್ ಫಾರೂಕ್ ಶೇಖ್ ಸನದಿ (25) ಎಂದು ಗುರುತಿಸಲಾಗಿದೆ. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ನಿವಾಸಿ ಆಗಿರುವ ಪಾರೂಕ್ ಸದ್ಯ ಶಿಗ್ಲಿ ಗ್ರಾಮದಲ್ಲಿ ವಾಸವಾಗಿದ್ದ. ಇದೀಗ ಲಕ್ಷ್ಮೇಶ್ವರ ಸಮೀಪದ ಜಮೀನೊಂದರಲ್ಲಿ ಆತನ ಶವ ಪತ್ತೆಯಾಗಿದೆ.

ಅಪರಿಚಿತರು ಕತ್ತು ಕೊಯ್ದು ಹತ್ಯೆ ನಡೆಸಿ, ಬಳಿಕ ಶವವನ್ನು ಹೊಲದಲ್ಲಿ ಬಿಸಾಡಿರುವ ಸಾಧ್ಯತೆ ವ್ಯಕ್ತವಾಗಿದೆ. ಘಟನೆ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಹಲವು ಸುಳಿವುಗಳನ್ನು ಸಂಗ್ರಹಿಸಿರುವುದಾಗಿ ತಿಳಿದು ಬಂದಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಹತ್ಯೆಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಘಟನೆ ಶಿಗ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಮೂಡಿಸಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸುದ್ದಿ ತಿಳಿದ ಡಿವೈಎಸ್ಪಿ ಮುರ್ತಾಜಾ ಖಾದ್ರಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಯಚೂರು; ಬೈಕ್ ಗೆ ಡಿಕ್ಕಿ ಹೊಡೆದ ಟ್ರಕ್​; ಭೀಕರ ಅಪಘಾತಕ್ಕೆ ಮೂವರು ಯುವಕರು ಬಲಿ

0

ರಾಯಚೂರು:- ರಾಯಚೂರು ನಗರದ ಬಸವೇಶ್ವರ ವೃತ್ತದಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಬೈಕ್​​ ಮತ್ತು ಟ್ರಕ್​ ನಡುವೆ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಯುವಕರು ಮೃತಪಟ್ಟಿದ್ದಾರೆ. ಮೃತರನ್ನು ಮೊಹಮ್ಮದ್​​ ಅಲಿ(24), ನೂರ್ ಮೊಹಮ್ಮದ್(19) ಮತ್ತಯ ಫಯಾಜ್(26) ಎಂದು ಗುರುತಿಸಲಾಗಿದೆ. ಮೃತ ಮೂವರೂ ರಾಯಚೂರುನಗರದ ಸುಖಾಣಿ ಕಾಲೋನಿಯ ನಿವಾಸಿಗಳು ಎಂಬುದು ತಿಳಿದುಬಂದಿದೆ.

ಬಸವೇಶ್ವರ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದ ಕಡೆ ತೆರಳುತ್ತಿದ್ದ ಬೈಕ್​​ಗೆ ಹೈದರಾಬಾದ್​​​​ ಮಾರ್ಗದಿಂದ ಮಂತ್ರಾಲಯದ ಕಡೆ ಹೊರಟಿದ್ದ ಟ್ರಕ್ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಬೈಕ್​​ನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

ಅಪಘಾತದ ಬಳಿಕ ಟ್ರಕ್ ಸಮೇತ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ರಾಯಚೂರು ಟ್ರಾಫಿಕ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬಾಗಲಗುಂಟೆ: ಬಾಡಿಗೆ ಮನೆಯಲ್ಲಿ ವ್ಯಕ್ತಿಯ ಕೊಲೆ – ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

0

ಬಾಗಲಗುಂಟೆ: ಮಂಜುನಾಥನಗರ 2ನೇ ರಸ್ತೆ, ವಿಜಯಲಕ್ಷ್ಮಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅನೈತಿಕ ಸಂಬಂಧ ಹಿನ್ನೆಲೆ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಎರಡು ತಿಂಗಳ ಹಿಂದೆ ನಟರಾಜ್ ಸರಸ್ವತಿ ಇವರಿಂದ ಮೋಹನ್ ಕೃಷ್ಣ ಮತ್ತು ಊರ್ವಶಿ ಅವರಿಗೆ ಬಾಡಿಗೆ ನೀಡಲಾಗಿತ್ತು. ಇದೀಗ ಮೃತದೇಹ ಮೋಹನ್ ಕೃಷ್ಣ ಅಥವಾ ಯಾರು ಎಂಬುದು ಪರಿಶೀಲನೆಗೊಳಿಸಲಾಗುತ್ತಿದೆ. ದೇಹದ ಬಾಯಿಗೆ ಟೇಪ್ ಹಾಕಿ, ಕೈಕಾಲು ಕಟ್ಟಿರುವುದು ತನಿಖೆಯಲ್ಲಿ ದೃಢವಾಗಿದೆ.

ಕೊಳೆತ ಶವದಿಂದ ಬರುವ ದುರ್ವಾಸನೆ ಗಮನಿಸಿ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಮೃತದೇಹವನ್ನು ವಿಕ್ಟೋರಿಯಾ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪ: ವಸತಿ ಶಾಲೆ ನಡೆಸುತ್ತಿದ್ದ ದಂಪತಿ ಮೇಲೆ ಪೋಕ್ಸೋ ಕೇಸ್!

0

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ.

ಶಾಲೆಯ ಮಾಲೀಕ ಧನಂಜಯ್ ಮತ್ತು ಅವರ ಪತ್ನಿ ಶೈಲಜಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರೀಕ್ಷೆಗಾಗಿ ವಸತಿ ಶಾಲೆಯಲ್ಲಿ ಉಳಿದಿದ್ದ ಇಬ್ಬರು ಬಾಲಕಿಯರಿಗೆ, ಧನಂಜಯ್ ಮದ್ಯದ ಅಮಲಿನಲ್ಲಿ ರಾತ್ರಿವೇಳೆ ಕೊಠಡಿಗೆ ಹೋಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಬಾಲಕಿಯರು ಈ ವಿಚಾರವನ್ನು ಪತ್ನಿ ಶೈಲಜಾಗೆ ತಿಳಿಸಿದರೂ, ಆಕೆಯು ಗಂಡನ ಕ್ರೂರ ಕೃತ್ಯಕ್ಕೆ ಸಾಥ್ ನೀಡಿ, ಯಾವುದೇ ಸುದ್ದಿ ಹೊರಬಾರದಂತೆ ಒತ್ತಡ ಹಾಕುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

ಇದೇ ನರಕದಲ್ಲಿ ಬೇಯುತ್ತಿದ್ದ ಬಾಲಕಿಯರ ಮೇಲೆ ಒತ್ತಡ ಹೇರಿದ್ದ ದಂಪತಿ, ವಸತಿ ಶಾಲೆಯಲ್ಲಿ ನಡೆದ ದೌರ್ಜನ್ಯದ ಕುರಿತು ಯಾರ ಬಳಿಯೂ ಹೇಳದಂತೆ ಒತ್ತಡ ಹೇರುತ್ತಿದ್ದರು. ಅದರಲ್ಲಿಯೂ ಪಾಲಕರಿಗೆ ಸುದ್ದಿ ಮುಟ್ಟಿಸಬಾರದೆಂದು ಸತತ 8 ದಿನ ಹೊರಗೆ ಹೋಗಲೂ ಬಿಡದೆ, ಪೋಷಕರಿಗೆ ಕರೆ ಮಾಡಲೂ ಬಿಡದೆ ಕಿರುಕುಳ ನೀಡಿದ್ದರು ಎಂದು ಬಾಲಕಿಯರು ಹೇಳಿದ್ದಾರೆ. ಅದಾದ ಬಳಿಕ ನಿನ್ನೆ ಪೋಷಕರಿಗೆ ಕರೆ ಮಾಡಿದ ಬಾಲಕಿಯರು ತಮ್ಮ ಮೇಲಾದ ದೌರ್ಜನ್ಯವನ್ನು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೆ ಶಾಲೆ ಬಳಿ ಬಂದ ಬಾಲಕಿಯರ ಪೋಷಕರು ದಂಪತಿ ವಿರುದ್ಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ವಸತಿ ಶಾಲೆಯಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಧನಂಜಯ್ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾಗಿದ್ದು, ಕುಕೃತ್ಯದಿಂದ ನೊಂದ ಬಾಲಕಿಯರಿಗೆ ಪತ್ನಿ ಸಹ ತಾಕೀತು ನೀಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಸಧ್ಯಕ್ಕೆ ಇವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕಾಲೇಜಿನ ಎಡವಟ್ಟು; ಪರೀಕ್ಷೆ ಬರೆಯಲು ಬಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಂಗಾಲು- ಆಗಿದ್ದೇನು?

0

ಯಾದಗಿರಿ: ರಾಜ್ಯದಲ್ಲಿ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದ್ದು, 7.10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 1,217 ಕೇಂದ್ರಗಳಲ್ಲಿ ಪರೀಕ್ಷೆಗೆ ಕುಳಿತುಕೊಂಡಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಪರೀಕ್ಷೆಗೆ ಸಿಸಿ ಕ್ಯಾಮರಾ ಕಣ್ಗಾವಲು ಮತ್ತು ಬಿಗಿ ಭದ್ರತೆ ಒದಗಿಸಲಾಗಿದೆ.

ಆದರೆ, ಯಾದಗಿರಿಯಲ್ಲಿ ಕೆಲವು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಕುರಿತು ಗೊಂದಲಕ್ಕೀಡಾಗಿದ್ದಾರೆ. ಹಾಲ್ ಟಿಕೆಟ್‌ನಲ್ಲಿ ನಮೂದಿಸಿರುವ ವಿಳಾಸ ಮತ್ತು ವಾಸ್ತವಿಕ ಕೇಂದ್ರ ವಿಳಾಸ ಬೇರೆಯಾಗಿದ್ದ ಕಾರಣ, ಕೆಲ ವಿದ್ಯಾರ್ಥಿಗಳು ಸಬಾ ಪಿಯು ಕಾಲೇಜು ಕೇಂದ್ರವನ್ನು ಹುಡುಕಲು ಪರದಾಡಬೇಕಾಯಿತು. ಉದಾಹರಣೆಗೆ, ಕಾಲೇಜು ಲುಂಬಿನಿ ಪಾರ್ಕ್ ಹತ್ತಿರ ಇದ್ದರೂ, ಹಾಲ್ ಟಿಕೆಟ್‌ನಲ್ಲಿ ಗಂಜ್ ರೋಡ್ ಎಂದು ಉಲ್ಲೇಖವಾಗಿತ್ತು. ಅಂತಿಮವಾಗಿ ಸ್ಥಳೀಯರ ಸಹಾಯದಿಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 17ರವರೆಗೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮೊಬೈಲ್ ನಿರ್ಬಂಧ, ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ನಿಷೇಧ, ಅನಧಿಕೃತ ವ್ಯಕ್ತಿಗಳ ಪ್ರವೇಶ ನಿಷೇಧ, ಚಿತ್ರೀಕರಣ ಹಾಗೂ ಸ್ಫೋಟಕ ವಸ್ತು ನಿರ್ಬಂಧ ಸೇರಿದಂತೆ ಸಂಪೂರ್ಣ ಭದ್ರತಾ ಕ್ರಮಗಳು ಜಾರಿಗೆ ಬಂದಿವೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. ಅವರು “ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಉತ್ತಮ ಅಂಕಗಳ ಜೊತೆಗೆ ಉಜ್ವಲ ಭವಿಷ್ಯವೂ ನಿಮ್ಮದಾಗಲಿ” ಎಂದು ಸಂದೇಶ ನೀಡಿದ್ದಾರೆ.

Gadaga Crime News: ಆಸ್ತಿ ಕಲಹ; ಮಗನಿಂದಲೇ ತಂದೆಯ ಭೀಕರ ಕೊಲೆ!

0

ಲಕ್ಷ್ಮೇಶ್ವರ: ಆಸ್ತಿ ವಿಚಾರಕ್ಕೆ ಶುರುವಾದ ಗಲಾಟೆ ತಂದೆಯ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಗೋವನಾಳ ಗ್ರಾಮದಲ್ಲಿ ಜರುಗಿದೆ.

ಪಾಪಿ ಮಗನಿಂದಲೇ ತಂದೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಶಂಕರಗೌಡ ಕುಬೇರಗೌಡ ದ್ಯಾವನಗೌಡ್ರ (60) ಕೊಲೆಯಾದ ತಂದೆ. ಪ್ರಭು ಶಂಕರಗೌಡ ದ್ಯಾವನಗೌಡ್ರ (23) ಕೊಲೆ ಮಾಡಿದ ಪಾಪಿ ಮಗ.

ಪ್ರಾಥಮಿಕ ತನಿಖೆ ಪ್ರಕಾರ, ಕುಟುಂಬದ 2 ಎಕರೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಜಗಳವೇ ಕೊಲೆಗೆ ಕಾರಣವಾಗಿದೆ. ಘಟನೆಯ ಸಮಯದಲ್ಲಿ ಆರೋಪಿಯು ಕುಡಿದ ಮದ್ಯದಲ್ಲಿದ್ದ ಎನ್ನಲಾಗಿದೆ.

ಕೊಲೆಗೀಡಾದ ಶಂಕರಗೌಡನಿಗೆ ಪ್ರಭು ಎರಡನೇ ಪತ್ನಿಯಿಂದ ಜನಿಸಿದ ಮಗನಾಗಿದ್ದಾನೆ. ಸುಮಾರು 30 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದರು ಎಂಬ ಸಂಗತಿಯೂ ಹೊರಬಿದ್ದಿದೆ.

ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ ಜಗದೀಶ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಚಾಕುವಿನಿಂದ ಇರಿದು ವಿವಾಹಿತ ಪ್ರಿಯತಮೆ ಕೊಂದ ಪ್ರಿಯಕರ: ಅನಾಥರಾದ ಇಬ್ಬರು ಮಕ್ಕಳು

0

ಚಿಕ್ಕಬಳ್ಳಾಪುರ: ವಿವಾಹಿತೆಯೊಬ್ಬಳನ್ನು ಪ್ರಿಯಕರ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ಬೆಳಕಿಗೆ ಬಂದಿದೆ. ಈ ದುರ್ಘಟನೆಯಿಂದ ಮೃತಳ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.

ಮೃತ ಮಹಿಳೆ ತೇಜಸ್ವಿನಿ (26) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನನ್ನು ಬಿಟ್ಟು ಇಬ್ಬರು ಮಕ್ಕಳೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಳು. ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು, ಅಲ್ಲಿಯೇ ನೀಡಲಾಗಿದ್ದ ಒಂದು ಕೊಠಡಿಯಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿದ್ದಳು.

ಅಲ್ಲಿ ಪರಿಚಯವಾದ ಸಂದೀಪ್ (20) ಎಂಬ ಯುವಕನೊಂದಿಗೆ ತೇಜಸ್ವಿನಿಗೆ ಆತ್ಮೀಯತೆ ಬೆಳೆದಿತ್ತು ಎನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಇಬ್ಬರೂ ಬೇರೆ ಮನೆ ಮಾಡಿಕೊಂಡು ಜೀವನ ಆರಂಭಿಸಿದ್ದರು.

ಎರಡು ದಿನಗಳ ಹಿಂದೆ ತೇಜಸ್ವಿನಿ ಮತ್ತು ಸಂದೀಪ್ ಸ್ನೇಹಿತೆ ಅರುಣಾ ಅವರ ಮನೆಯಲ್ಲಿ ತಂಗಿದ್ದಾಗ ಮದ್ಯ ಸೇವನೆಯ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಜಗಳದ ವೇಳೆ ಮದ್ಯದ ಪಾಕೆಟ್ ಕತ್ತರಿಸಲು ಇಟ್ಟುಕೊಂಡಿದ್ದ ಚಾಕುವಿನಿಂದ ಸಂದೀಪ್ ತೇಜಸ್ವಿನಿಯ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ.

ಗಾಯಗೊಂಡ ತೇಜಸ್ವಿನಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಿ ಹೊಲಿಗೆ ಹಾಕಲಾಗಿತ್ತು. ಆದರೆ ಮನೆಗೆ ಬಂದ ಬಳಿಕ ವೈದ್ಯರು ನೀಡಿದ ಔಷಧಿಗಳನ್ನು ಸೇವಿಸದೆ ಮದ್ಯ ಸೇವಿಸಿ ಮಲಗಿದ್ದಾಳೆ ಎಂದು ತಿಳಿದುಬಂದಿದೆ. ಇದರಿಂದ ಗಾಯ ಸೆಪ್ಟಿಕ್ ಆಗಿ ಹೊಟ್ಟೆಯಲ್ಲಿ ಸೋಂಕು ವ್ಯಾಪಿಸಿ ಆರೋಗ್ಯ ಸ್ಥಿತಿ ಗಂಭೀರಗೊಂಡಿದೆ.

ಮತ್ತೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅಂಗಾಂಗ ವೈಫಲ್ಯದಿಂದ ತೇಜಸ್ವಿನಿ ಮೃತಪಟ್ಟಿದ್ದಾಳೆ.

ಮೃತಳ ಮೂರು ವರ್ಷದ ಮಗು ಏನೂ ಅರಿಯದೇ ಸಂಬಂಧಿಕರ ಮಡಿಲಲ್ಲಿ ಆಟವಾಡುತ್ತಿದ್ದು, ಹತ್ತು ವರ್ಷದ ಬಾಲಕ ತಾಯಿಯ ಸಾವಿನ ವಿಷಯ ತಿಳಿದು ಅಳುತ್ತಿದ್ದ ದೃಶ್ಯಗಳು ಕಣ್ಣೀರು ತರಿಸುವಂತಿವೆ.

ಘಟನೆ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಪೊಲೀಸರು ಸಂದೀಪ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಹಣ ಮತ್ತು ಮದ್ಯದ ವಿಚಾರಕ್ಕೆ ಗಲಾಟೆಯಾಗಿದ್ದು, ಆಕಸ್ಮಿಕವಾಗಿ ಚಾಕು ತಗುಲಿದೆ ಎಂದು ಸಂದೀಪ್ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಮಕ್ಕಳ ಭವಿಷ್ಯದ ಬಗ್ಗೆ ಕುಟುಂಬಸ್ಥರು ಚಿಂತೆಯಲ್ಲಿ ಮುಳುಗಿದ್ದಾರೆ.

ರೀಲ್‌ ಬಳಿಕ ರಿಯಲ್‌ನಲ್ಲೂ ಒಂದಾದ ಅಮೃತಧಾರೆ ಜೋಡಿ

ತೆರೆಮೇಲೆ ಒಟ್ಟಿಗೆ ನಟಿಸುತ್ತಾ ಪ್ರೀತಿಯಲ್ಲಿ ಬೀಳುವುದು ಹೊಸದೇನಲ್ಲ. ಇದೀಗ ಕಿರುತೆರೆಯಲ್ಲಿ ಮತ್ತೊಂದು ಜೋಡಿ ರಿಯಲ್ ಲೈಫ್‌ನಲ್ಲಿ ಒಂದಾಗಲು ಸಿದ್ಧವಾಗಿದೆ.

ಜೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ಜೆಡಿ ಪಾತ್ರ ಮಾಡುತ್ತಿರುವ ರಾಣವ್ ಗೌಡ ಹಾಗೂ ಕಲರ್ಸ್ ಕನ್ನಡದ ಭಾರ್ಗವಿ ಎಲ್ಎಲ್ಬಿ ಧಾರಾವಾಹಿಯಲ್ಲಿ ಭಾಗರ್ವಿ ಪಾತ್ರದಲ್ಲಿ ನಟಿಸುತ್ತಿರುವ ರಾಧಾ ಭಗವತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇಬ್ಬರೂ ಬೇರೆ ಬೇರೆ ವಾಹಿನಿಗಳಲ್ಲಿ ಕೆಲಸ ಮಾಡುತ್ತಿದ್ದರೂ, ಇವರ ಪರಿಚಯ ಮತ್ತು ಪ್ರೀತಿ ‘ಅಮೃತಧಾರೆ’ ಧಾರಾವಾಹಿಯಲ್ಲಿಯೇ ಮೊಳಕೆಯೊಡೆದಿತ್ತು. ರಾಧಾ ಭಗವತಿ ಈ ಹಿಂದೆ ‘ಅಮೃತಧಾರೆ’ಯಲ್ಲಿ ಮಲ್ಲಿ ಎಂಬ ಪಾತ್ರ ನಿರ್ವಹಿಸಿದ್ದರು. ಆ ಪಾತ್ರದಲ್ಲಿ ಅವರು ಜೆಡಿ ಪತ್ನಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ‘ಭಾರ್ಗವಿ ಎಲ್ಎಲ್ಬಿ’ ಅವಕಾಶ ದೊರಕಿದ ಹಿನ್ನೆಲೆಯಲ್ಲಿ ಧಾರಾವಾಹಿಯಿಂದ ಹೊರಬಂದಿದ್ದರು.

ಸೀರಿಯಲ್ ಚಿತ್ರೀಕರಣದ ಸಮಯದಲ್ಲೇ ಇವರಿಬ್ಬರ ಮಧ್ಯೆ ಪ್ರೀತಿ ಬೆಳೆದಿದೆ ಎಂದು ಹೇಳಲಾಗುತ್ತಿದೆ. ಈಗ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡು ಹೊಸ ಬದುಕಿಗೆ ಕಾಲಿಡಲು ಸಜ್ಜಾಗಿದೆ.

ರಾಣವ್ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಹಾರ ಹಾಕಿಕೊಂಡಿರುವ ಫೋಟೋ ಹಂಚಿಕೊಂಡು “ಫೈನಲಿ” ಎಂಬ ಕ್ಯಾಪ್ಶನ್ ನೀಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳಲ್ಲಿ ಮೊದಲಿಗೆ ಮದುವೆಯೇ ಆಗಿಬಿಟ್ಟಿತೇ ಎಂಬ ಕುತೂಹಲ ಮೂಡಿತ್ತು. ಆದರೆ, ಇವರು ನಿಶ್ಚಿತಾರ್ಥ ಮಾತ್ರ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.

ರಾಣವ್ ಗೌಡ ‘ಅಮೃತಧಾರೆ’ ಜೊತೆಗೆ ‘ಶುಭಸ್ಯ ಶೀಘ್ರಂ’ ಧಾರಾವಾಹಿಯಲ್ಲೂ ಅಭಿನಯಿಸುತ್ತಿದ್ದಾರೆ. ರಾಧಾ ಭಗವತಿ ‘ಭಾರ್ಗವಿ ಎಲ್ಎಲ್ಬಿ’ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

ತೆರೆ ಮೇಲಿನ ಜೋಡಿ ಇದೀಗ ನಿಜ ಜೀವನದಲ್ಲೂ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ಹಾಗೂ ಅಚ್ಚರಿ ಎರಡನ್ನೂ ತಂದಿದೆ.

ದಲಿತರಿಗೆ ಕ್ಷೌರ ನಿರಾಕರಣೆ: ಸಿಂಗಟಾಲೂರಲ್ಲಿ ಸರ್ಕಾರದಿಂದಲೇ ಸಲೂನ್ ಆರಂಭ, ಜಾತಿ ಭೇದಭಾವಕ್ಕೆ ತಿರುಗೇಟು

0

ಗದಗ: ದಲಿತ ಸಮುದಾಯದವರಿಗೆ ಕ್ಷೌರ ಸೇವೆ ನೀಡಲು ನಿರಾಕರಿಸಿದ ಘಟನೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಸಿಂಗಟಾಲೂರ ಗ್ರಾಮದಲ್ಲಿ ಸರ್ಕಾರವೇ ಹೊಸ ಕ್ಷೌರದಂಗಡಿಯನ್ನು ಆರಂಭಿಸಿದೆ.

ಸಾಮಾಜಿಕ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ ಮತ್ತು ಆದಾಯ ಇಲಾಖೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಈ ಸಲೂನ್ ಆರಂಭವಾಗಿದ್ದು, ಗ್ರಾಮದಲ್ಲಿ ವರ್ಷಗಳಿಂದ ಮುಂದುವರಿದಿದ್ದ ಜಾತಿ ಆಧಾರಿತ ಭೇದಭಾವಕ್ಕೆ ತೆರೆ ಎಳೆಯುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ.

ಗ್ರಾಮದ ದೈವವಾದ ವೀರಭದ್ರೇಶ್ವರನ ಭಕ್ತರಾಗಿರುವ ಹಡಪದ ಕುಟುಂಬಗಳು ಪರಂಪರೆ ಹೆಸರಿನಲ್ಲಿ ದಲಿತರಿಗೆ ಕ್ಷೌರ ಸೇವೆ ನೀಡುವುದನ್ನು ನಿರಾಕರಿಸುತ್ತಿದ್ದವು. ಈ ಸ್ಥಿತಿ ಪೀಳಿಗೆಗಳಿಂದ ಮುಂದುವರಿದಿದ್ದುದಾಗಿ ತಿಳಿದುಬಂದಿದೆ.

ಗ್ರಾಮದಲ್ಲಿದ್ದ ಏಕೈಕ ಸಲೂನ್‌ಗೆ ದಲಿತ ಯುವಕರು ಭೇಟಿ ನೀಡಲು ಆರಂಭಿಸಿದ ನಂತರ ವಿವಾದ ತೀವ್ರಗೊಂಡಿತು. ಪಂಚಾಯಿತಿಯಿಂದ ಅನುಮತಿ ಪಡೆದು ಅಂಗಡಿ ನಡೆಸುತ್ತಿರುವುದರಿಂದ ಎಲ್ಲ ಸಮುದಾಯದವರಿಗೂ ಸೇವೆ ನೀಡಬೇಕು ಎಂದು ಯುವಕರು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಅಂಗಡಿ ಮುಚ್ಚಲಾಗಿದ್ದು, ಗ್ರಾಮಸ್ಥರು ಹೇರ್ ಕಟಿಂಗ್ ಮತ್ತು ಶೇವಿಂಗ್‌ಗಾಗಿ ನೆರೆಯ ಗ್ರಾಮಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಾಮಾಜಿಕ ಕಲ್ಯಾಣ ಮತ್ತು ಆದಾಯ ಇಲಾಖೆ ಅಧಿಕಾರಿಗಳು ಹಡಪದ ಸಮುದಾಯದವರನ್ನು ಮನವೊಲಿಸಲು ಹಲವು ಪ್ರಯತ್ನಗಳನ್ನು ನಡೆಸಿದರು. ಸೇವೆ ನೀಡಲು ನಿರಾಕರಿಸಿದವರಿಗೆ ನೋಟಿಸ್‌ಗಳನ್ನು ನೀಡಲಾಯಿತು. ಆದರೆ ಯತ್ನ ಫಲಿಸದ ಹಿನ್ನೆಲೆಯಲ್ಲಿ ಕೊನೆಗೆ ಸರ್ಕಾರದ ವತಿಯಿಂದ ಹೊಸ ಕ್ಷೌರದಂಗಡಿ ಆರಂಭಿಸುವ ನಿರ್ಧಾರ ಕೈಗೊಳ್ಳಲಾಯಿತು.

ಫೆಬ್ರವರಿ 26ರಂದು ತಹಶೀಲ್ದಾರ್ ಎರ್ರಿಸ್ವಾಮಿ ಹಾಗೂ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಹೊಸ ಅಂಗಡಿಯನ್ನು ಉದ್ಘಾಟಿಸಲಾಯಿತು. ಪಕ್ಕದ ತಿಪ್ಪಾಪೂರ ಗ್ರಾಮದ ಬಸವರಾಜ್ ಹಡಪದ ಅವರಿಗೆ ಸಾಮಾಜಿಕ ಕಲ್ಯಾಣ ಇಲಾಖೆಯಿಂದ ಅಂಗಡಿ ನೀಡಿ ಸೇವೆ ನೀಡಲು ಅವಕಾಶ ಮಾಡಿಕೊಡಲಾಗಿದೆ.

ಈ ಕ್ರಮದಿಂದ ಸಿಂಗಟಾಲೂರ ಗ್ರಾಮದಲ್ಲಿ ಎಲ್ಲ ಸಮುದಾಯದವರು ಯಾವುದೇ ಭೇದಭಾವವಿಲ್ಲದೆ ಕ್ಷೌರ ಸೇವೆ ಪಡೆಯುವ ಅವಕಾಶ ದೊರೆತಿದ್ದು, ಸಾಮಾಜಿಕ ಸಮಾನತೆಯತ್ತ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

error: Content is protected !!