ಎ.10ರಿಂದ 14ರವರೆಗೆ ದೂದಪೀರಾಂರವರ 136ನೇ ಉರುಸು

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಈ ಭಾಗದ ಭಾವೈಕ್ಯತೆಯ ಕೇಂದ್ರವಾಗಿರುವ, ನೂರಾರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ದೂದಪೀರಾಂರವರ 136ನೇ ಉರುಸು ಕಾರ್ಯಕ್ರಮವು ಎಪ್ರಿಲ್ 10ರಿಂದ 14ರವರೆಗೆ ವೈಭವದಿಂದ ನೆರವೇಲಿದ್ದು, ಈ ಹಿನ್ನೆಲೆಯಲ್ಲಿ ದೂದಪೀರಾಂ ದರ್ಗಾ ಕಮಿಟಿ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಾನಾ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತಿದೆ ಎಂದು ದೂದಪೀರಾಂ ದರ್ಗಾ ಕಮಿಟಿ ಅಧ್ಯಕ್ಷ ಸುಲೇಮಾನ ಕಣಕೆ ಮತ್ತು ಕಾರ್ಯದರ್ಶಿ ಸಾಹೇಬಜಾನ್ ಹವಾಲ್ದಾರ ಹೇಳಿದರು.

Advertisement

ಅವರು ಪಟ್ಟಣದ ದೂದನಾನಾ ಶಾದಿಮಹಲ್‌ನಲ್ಲಿ ಉರುಸು ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಸಮಾಜ ಬಾಂಧವರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ನಿಟ್ಟಿನಲ್ಲಿ ಅನೇಕ ಉಪ ಕಮಿಟಿಗಳನ್ನು ರಚಿಸಲಾಗಿದೆ. ನೂರಾರು ವರ್ಷಗಳಿಂದ ಹಿಂದೂ-ಮುಸ್ಲಿ ಮತ್ತು ಸರ್ವ ಧರ್ಮದ ಸಮಾಜ ಬಾಂಧವರು ಇಲ್ಲಿನ ದೂದನಾನಾರವರಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಾರೆ. ಅದಕ್ಕಾಗಿ ಈ ವರ್ಷದ ಕಾರ್ಯಕ್ರಮದಲ್ಲಿ ಸಕಲ ಸಿದ್ಧತೆಯೊಂದಿಗೆ ಬರುವ ಜನರ ಭದ್ರತೆ ವಿಷಯದಲ್ಲಿಯೂ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲರೂ ಸೇರಿ ವ್ಯವಸ್ಥಿತವಾಗಿ ಕಾರ್ಯಕ್ರಮ ನೆರವೇರಿಸೋಣ ಎಂದರು.

ಹಿರಿಯ ಮುಖಂಡ ದಾದಾಪೀರ ಮುಚ್ಚಾಲೆ ಮಾತನಾಡಿ, ದೂದಪೀರಾಂರವರು ಭಾವೈಕ್ಯತೆಯನ್ನು ಸಾರಿದ ಮಹಾಪುರುಷರಾಗಿದ್ದು, ದೂದನಾನಾ ದರ್ಗಾ ಇಂದು ಭಕ್ತಿ ಮತ್ತು ಜಾಗೃತ ಕೇಂದ್ರವಾಗಿ ಬೆಳೆದು ನಿಂತಿದೆ. ದೇಶಾದ್ಯಂತ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಹೊಂದುತ್ತಿದ್ದಾರೆ. ನಾಡಿನ ಅನೇಕ ಭಕ್ತರ ಸಹಕಾರದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ, ಅಗತ್ಯ ಸೌಲಭ್ಯಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಈ ವೇಳೆ ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ. ಗದಗ, ಇರ್ಫಾನ್‌ಬೇಗ್ ಮಿರ್ಜಾ, ದಾದಾಪೀರ ಕಾರಡಗಿ, ಅಕ್ಬರ್, ಖಾಜಾ ಜಮಖಂಡಿ, ಖಲಂದರ ಸೂರಣಗಿ, ಸಾಧಿಕ್ ಶಮಲೆವಾಲೆ, ಗೌಸಸಾಬ ಜಮಖಂಡಿ, ನೂರಹ್ಮದ ಸಿದ್ದಿ, ಜಮೀಲಅಹ್ಮದ್ ಸೂರಣಗಿ, ಎನ್.ಎಂ. ಗದಗ, ಬಾಷಾಸಾಬ ಮುಲ್ಲಾ, ಝಾಕೀರಹುಸೇನ್ ಹವಾಲ್ದಾರ ಸೇರಿದಂತೆ ಕಮಿಟಿ ಸದಸ್ಯರು ಇದ್ದರು.

ಎ.10ರಂದು ಗಂಧ, ಎ.11ರಂದು ಉರುಸು, ಗಲೀಫ, ಎ.13ರಂದು ಉತ್ತರಪ್ರದೇಶದ ಕಿಚೋಚಾ ಶರೀಫದ ಹಜರತ್ ಮೌಲಾನಾ ಸೈಯದ್ ಸಮದಾನಿ ಮಿಯಾ ಅಶ್ರಪಿ ಇವರಿಂದ ವಾಜಬಯಾನ್, ಎ.14ರಂದು ರಾತ್ರಿ 9 ಗಂಟೆಗೆ ಮುಂಬಯಿ ಇಪ್ತೆಕಾರಿ ಸಹೋದರರು ಮತ್ತು ದೆಹಲಿಯ ಅಕ್ರಮ್ ಅಸ್ಲಮ್ ವಾರ್ಸಿ ಇವರಿಂದ ಖವಾಲಿ ನಡೆಯಲಿದೆ.


Spread the love

LEAVE A REPLY

Please enter your comment!
Please enter your name here