ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡದ ಪುಸ್ತಕಗಳ ಓದುವಿಕೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ಹೊಂದಿದಾಗ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ವಿದ್ಯಾರ್ಥಿಯೂ ಯೋಗ್ಯ ಜ್ಞಾನ, ಸ್ಪಷ್ಟ ಸಂವಹನ ಹಾಗೂ ಭಾಷಾ ಪಟುವಾಗಿ ಹೊರಹೊಮ್ಮಿ ಉತ್ತಮ ಉದ್ಯೋಗ ಹೊಂದಲು ಸಾಧ್ಯವಾಗಲಿದೆ ಎಂದು ಧಾರವಾಡ ಮೇರು ಐಎಎಸ್, ಕೆಎಎಸ್ ಅಧ್ಯಯನ ಕೇಂದ್ರದ ನಿರ್ದೇಶಕ, ಅಂಜುಮನ್ ಕಾಲೇಜಿನ ಡಾ. ರುದ್ರೇಶ ಮೇಟಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐಕ್ಯೂಎಸಿ ಕಾರ್ಯಕ್ರಮದಡಿ `ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಶಿಕ್ಷಕರ ಅರ್ಹತಾ ಪರೀಕ್ಷೆಗಳು, ಬ್ಯಾಂಕ್, ರೈಲ್ವೆ ಹಾಗೂ ಇತರೆ ಕೇಂದ್ರ–ರಾಜ್ಯ ಸೇವಾ ಪರೀಕ್ಷೆಗಳಲ್ಲಿ ಕನ್ನಡ ಅಭ್ಯಾಸ ಅನಿವಾರ್ಯವಾಗಿದೆ. ಕನ್ನಡ ಕೇವಲ ಒಂದು ವಿಷಯವಲ್ಲ, ಅದು ನಮ್ಮ ಸಂಸ್ಕೃತಿ, ಸಂವಿಧಾನ ಮತ್ತು ಆಡಳಿತ ಪ್ರಕ್ರಿಯೆ ವ್ಯವಸ್ಥೆಗೆ ಕೊಂಡಿಯಾಗಿ ಕೆಲಸ ಮಾಡುತ್ತದೆ. ಆ ಹಿನ್ನೆಲೆಯಲ್ಲಿ ಕನ್ನಡ ಅಧ್ಯಯನದಲ್ಲಿ ವಿದ್ಯಾರ್ಥಿಗಳು ತಮ್ಮ ನಿರಂತರವಾಗಿ ತೊಡಗಿಸಿಕೊಂಡರೆ ನಿಮ್ಮ ಭವಿಷ್ಯ ಉತ್ತಮವಾಗಿರಲಿದೆ ಎಂದು ಹೇಳಿದರು.
ಪ್ರಾಚಾರ್ಯರಾದ ಡಾ. ಶಾಂತಾ ಪೂಜಾರ ಮಾತನಾಡಿ, ಭಾಷೆ ಒಂದು ಸಂಸ್ಕೃತಿಯ ದಾರಿ. ಕನ್ನಡ ಭಾಷೆ ನಮ್ಮ ಸಂಪ್ರದಾಯ. ಆ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕೃತಿ ಮತ್ತು ಇತಿಹಾಸವನ್ನು ಜೀವಂತವಾಗಿರಿಸುತ್ತದೆ. ಕನ್ನಡ ಪ್ರತಿಯೊಬ್ಬರಿಗೆ ಜ್ಞಾನದ ಸುಧೆಯ ಬುಗ್ಗೆ ಎಂದು ಹೇಳಿದರು.
ವ್ಯವಸ್ಥಾಪಕ ಬಿ.ಎಫ್. ಕರಬುಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೊ. ಎಸ್.ಯು. ಸಜ್ಜನಶೆಟ್ಟರ, ಪ್ರಕಾಶ ಕರಿಗಾರ, ಪ್ರೊ. ಎ.ಕೆ. ಜಮಾದಾರ್, ಐಕ್ಯೂಎಸಿ ಸಂಚಾಲಕರಾದ ಪ್ರೊ. ಮಹಬೂಬ ಆರಿಫ್ ಸದರಸೋಫೆವಾಲೆ, ಡಾ. ಸುಜಾತಾ ಬರದೂರ, ಪ್ರೊ. ಸತೀಶ ಸರ್ವಿ, ಪ್ರೊ. ದ್ಯಾಮಣ್ಣ ಮನಿಕಟ್ಟಿ, ಪ್ರೊ. ರಿಯಾಜ್ ಅಹ್ಮದ್ ದೊಡ್ಡಮನಿ, ಪ್ರೊ. ಪ್ರತಿಭಾ ಚವ್ಹಾಣ, ಪ್ರೊ. ಸುಮಿತ್ರಾ ಮೇದಾರ, ಪ್ರೊ. ವಹಿದಾ ಕಿಲ್ಲೆದಾರ, ರಾಜೇಶ್ವರಿ ಬದನಿಕಾಯಿ, ಬಸುರಾಜ ಡಾನಿ, ಶ್ರೀದೇವಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗ, ವಿದ್ಯಾರ್ಥಿನಿಯರು ಇದ್ದರು.


