ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳೆಯರೇ ಸ್ಥಾಪಿಸಿದ ಗೃಹೋದ್ಯಮ ಲಿಜ್ಜತ್ ಪಾಪಡ್ ಮಹಿಳೆಯರ ಸಬಲೀಕರಣದಲ್ಲಿ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಗುಜ್ಜರ ಬಸ್ತಿಯ ಕೆಡಿಓ ಜೈನ್ ಹಾಲ್ನಲ್ಲಿ ಬುಧವಾರ ಖಾದಿ ಮತ್ತು ಗ್ರಾಮ ಕೈಗಾರಿಕಾ ಆಯೋಗದಿಂದ ಗುರುತಿಸಲ್ಪಟ್ಟಿರುವ ಮಹಿಳಾ ಗೃಹ ಉದ್ಯೋಗ ಲಿಜ್ಜತ್ ಪಾಪಡ್ನ 84ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಲಿಜ್ಜತ್ನ್ನು ಶುರು ಮಾಡಿದ್ದು ಮುಂಬೈನ ಏಳು ಗುಜರಾತಿ ಮಹಿಳೆಯರು. ಅಡುಗೆ ಬಗ್ಗೆ ಆಸಕ್ತಿ ಹೊಂದಿದ್ದ ಒಂದಿಷ್ಟು ಗೃಹಿಣಿಯರ ಸ್ವಾವಲಂಬಿ ಜೀವನ ನಡೆಸುವ ಹಂಬಲದ ಪರಿಣಾಮವಾಗಿ ರೂಪುಗೊಂಡಿದ್ದು ಈ ಲಿಜ್ಜತ್ ಪಾಪಡ್. ಕೇವಲ 80 ರೂಪಾಯಿಂದ ಪ್ರಾರಂಭವಾದ ಈ ಹಪ್ಪಳದ ಉದ್ಯಮ ಇಂದು ಸಾವಿರ ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತಿದೆ. 45 ಸಾವಿರಕ್ಕೂ ಹೆಚ್ಚು ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಇದೊಂದು ಮಹಿಳಾ ಸ್ವ-ಉದ್ಯೋಗ ಸಂಸ್ಥೆಯಾಗಿದ್ದು, ಇಲ್ಲಿ ಹೆಚ್ಚಾಗಿ ಮಹಿಳೆಯರು ಕಾರ್ಯನಿರ್ವಹಿಸುತ್ತಾರೆ. ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವುದು ಮತ್ತು ಮಹಿಳೆಯರನ್ನು ಸಬಲೀಕರಣ ಮಾಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಮಹಿಳಾ ಗೃಹ ಉದ್ಯೋಗ ಲಿಜ್ಜತ್ ಪಾಪಡ್ನ 84ನೇ ಶಾಖೆ ಆರಂಭಕ್ಕೂ ಸಚಿವ ಎಚ್.ಕೆ. ಪಾಟೀಲರಿಗೂ ಅವಿನಾಭಾವ ಸಂಬAಧವಿದೆ. ಎಚ್.ಕೆ. ಪಾಟೀಲರು ವಿಧಾನ ಪರಿಷತ್ ಸದಸ್ಯರಾಗಿ ಮೊದಲ ಬಾರಿ ಆಯ್ಕೆಯಾಗಿ ಸಾರ್ವಜನಿಕ ಬದುಕು ಆರಂಭಿಸಿದ್ದು 1984ರಲ್ಲಿ. 84 ಅದೃಷ್ಟದ ಸಂಖ್ಯೆಯಾಗಿದ್ದು, ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂಬ ಸಂಪೂರ್ಣ ನಂಬಿಕೆಯಿದೆ ಎಂದರು.
ಮಹಿಳಾ ಗೃಹ ಉದ್ಯೋಗ ಲಿಜ್ಜತ್ ಪಾಪಡ್ನ ಅಧ್ಯಕ್ಷೆ ಸ್ವಾತಿ ಪರಾಡಕರ್ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಧ್ಯೇಯೊದ್ದೇಶ ಹಾಗೂ ತತ್ವ ಸಿದ್ಧಾಂತಗಳನ್ನು ವಿವರಿಸಿದರು. ಉಪಾಧ್ಯಕ್ಷೆ ಪ್ರತಿಭಾ ಸಾವಂತ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಗದಗ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಗದಗ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೀಲಮ್ಮ ಬೋಳನವರ, ಗುರಣ್ಣ ಬಳಗಾನೂರ ಸೇರಿದಂತೆ ಮಹಿಳಾ ಸದಸ್ಯರು ಇದ್ದರು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಗದುಗಿನಲ್ಲಿ ಈಗಾಗಲೇ 382 ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, 172 ಮಹಿಳೆಯರು ಕೆಲಸ ಆರಂಭಿಸಿದ್ದಾರೆ. 150ಕ್ಕೂ ಹೆಚ್ಚು ಮಹಿಳೆಯರು ತರಬೇತಿ ಪಡೆಯುತ್ತಿದ್ದಾರೆ. ಗದುಗಿನ ಮಹಿಳೆಯರು ಈಗಾಗಲೇ 220, 170, 150 ಕೆಜಿ ಪಾಪಡ್ ತಯಾರಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಮಹಿಳೆಯರು ರಾಜ್ಯದಲ್ಲಿ ನಂ.1 ಸ್ಥಾನದಲ್ಲಿ ಪಾಪಡ್ ತಯಾರಿಸಬೇಕು. ಹಾಗೆಯೇ ಸಾವಿರಾರು ಮಹಿಳೆಯರಿಗೆ ಉದ್ಯೋಗ ನೀಡುವ ಕೆಲಸವನ್ನು ಮಾಡಬೇಕು.
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.