ಗದಗ: ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ವ್ಯಕ್ತಿವೋರ್ವನ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲಾ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.
ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ರೈತ ಬಾಲಪ್ಪ ಕೊಪ್ಪದ ಎನ್ನುವ ರೈತನ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮದ ಸಣ್ಣ ಹನಮಪ್ಪ ವಜ್ರದ ಎಂಬಾತನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿ ರುಂಡ ಹೊತ್ತೊಯ್ದದ್ದರು.
ಇದನ್ನೂ ಓದಿ ಗದಗ ಜಿಲ್ಲೆಯಲ್ಲಿ ವ್ಯಕ್ತಿಯ ಭೀಕರ ಹತ್ಯೆ; ಕತ್ತು ಕತ್ತರಿಸಿ ರುಂಡ ಹೊತ್ತೊಯ್ದ ದುಷ್ಕರ್ಮಿಗಳು….
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಗದಗ ಜಿಲ್ಲಾ ಎಸ್ಪಿ ಬಿ.ಎಸ್. ನೇಮಗೌಡ ಅವರು, ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿದ್ದಾರೆ.
ನಿನ್ನೆಯಿಂದಲೇ ಶ್ವಾನದಳ, ಸೀನ್ ಆಫ್ ಕ್ರೈಂ ತಂಡದೊಂದಿಗೆ ರುಂಡಕ್ಕಾಗಿ ಶೋಧ ಕಾರ್ಯ ನಡೆಸಿದ್ದ ಪೊಲೀಸರಿಗೆ ಇಂದು ಕೊಲೆ ನಡೆದ ಸ್ಥಳದಿಂದ ನಾಲ್ಕು ನೂರು ಮೀಟರ್ ದೂರದ ಮೆಕ್ಕೆಜೋಳ ಜಮೀನೊಂದರಲ್ಲಿ ವಿಕೃತಿ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಲೆ ಬುರುಡೆ, ಮುಖದ ಚರ್ಮ ಸುಲಿದ ರೀತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಗಾಬರಿ ಬಿಳುವಂತಾಗಿದೆ.
ಸಣ್ಣ ಹನಮಪ್ಪ ವಜ್ರದ ಮಾಳೆಕೊಪ್ಪ ಹಾಗೂ ತಿಮ್ಮಾಪೂರ ಗ್ರಾಮದಲ್ಲಿ ಜನರ ವಿಶ್ವಾಸ ಗಳಿಸಿದ್ದ ಎನ್ನಲಾಗಿದೆ. ಇಂತಹ ವ್ಯಕ್ತಿಯನ್ನು ದುಷ್ಕರ್ಮಿಗಳು ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸದಲ್ಲಿದ್ದಾರೆ.