ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ : ಪಟ್ಟಣದ ಶಾರದಾ ಸಂಗೀತ ಗುರುಕುಲದಿಂದ ಎಪಿಎಂಸಿ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಸಿತಾರ್ ವಾದಕ ಉಸ್ತಾದ್ ಶಫೀಕ್ ಖಾನ್ ಸಂಗೀತದ ರಸದೌತಣ ನೀಡಿದರು. ಈ ವೇಳೆ ಅವರಿಗೆ ಗುರುಕುಲ ಸಂಸ್ಥೆಯ ವತಿಯಿಂದ `ಸಂಗೀತ ವಿಭೂಷಣ’ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾಡಿನ ಹಲವು ದಾರ್ಶನಿಕರು ಸಮಾಜದ ಒಳಿತಿಗಾಗಿ ಸಾಹಿತ್ಯ, ಸಂಗೀತದ ಮೂಲಕ ಶ್ರೇಷ್ಠ ಚಿಂತನೆಗಳನ್ನು ಸಾರಿದ್ದಾರೆ. ಸಂಗೀತ ಕಲಿಯುವದೊಂದು ತಪಸ್ಸಿದ್ದಂತೆ. ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆ, ಸತತ ಅಭ್ಯಾಸದ ಮೂಲಕ ಸಂಗೀತವನ್ನು ಕಲಿಯುವವರಿಗೆ ಸಂಗೀತ ಸರಸ್ವತಿ ಒಲಿಯುತ್ತಾಳೆ. ಸಂಗೀತ ಪರಂಪರೆಯ ಪುಲಿಗೆರೆ ಕ್ಷೇತ್ರದಲ್ಲಿ ನನಗೆ ಪ್ರಶಸ್ತಿ ನೀಡಿ ಗೌರವಿಸಿರುವದು ನನ್ನ ಪುಣ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಗಜೇಂದ್ರಗಡದ ಸತ್ಯನಾರಾಯಣ ತೈಲಂಗ ಅವರು ಉದ್ಘಾಟಿಸಿ ಮಾತನಾಡಿ, ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಸಂಗೀತಾಸಕ್ತಿ ಮೂಡಿಸಿದರೆ ಸಂಸ್ಕಾರ, ಮೌಲ್ಯಗಳನ್ನು ರೂಢಿಸಬಹುದು. ಅಶ್ಲೀಲ ಸಾಹಿತ್ಯದ ಇತ್ತೀಚಿನ ಹಾಡುಗಳು ಮತ್ತು ಪಾಶ್ಚಿಮಾತ್ಯ ಸಂಗೀತಗಳಿಗೆ ಮಾರುಹೋಗಿರುವ ಯುವ ಜನತೆಗೆ ನಮ್ಮ ಶ್ರೇಷ್ಠವಾದ ಸಂಗೀತ ಪರಂಪರೆ, ಸಂಸ್ಕೃತಿಯನ್ನು ತಿಳಿಸುವ ಕಾರ್ಯವಾಗಬೇಕು ಎಂದರು.
ಪತ್ರಕರ್ತರಾದ ನಾಗರಾಜ ಹಣಗಿ, ದಿಗಂಬರ ಪೂಜಾರ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಶಾರದಾ ಕುಲಕರ್ಣಿ ವಹಿಸಿದ್ದರು. ಅತಿಥಿಗಳಾಗಿ ಗದಗ ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ಶ್ರೀಪಾದರಾಜ ಹೊಂಬಳ, ಸಂಗೀತ ಶಿಕ್ಷಕಿ ಶೈಲಜಾ ರಾಯಬಾಗಿ, ಕೊಪ್ಪಳದ ಪಾವಣಸ್ಕರ್ ಮ್ಯೂಸಿಕ್ ಫೌಂಡೇಶನ್ ಸಂಸ್ಥಾಪಕ ಅನಂತ ಪಾವಣಸ್ಕರ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಚಾರ್ಯೆ ಗಾಯತ್ರಿ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೃಷ್ಣಕುಮಾರ ಕುಲಕರ್ಣಿ, ವಿನಾಯಕ ವೇತಾಳ ನಿರೂಪಿಸಿದರು.
ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಗುರುಕುಲದ ಪುಟ್ಟ ವಿದ್ಯಾರ್ಥಿಗಳು ಸಂಗೀತ ಸೇವೆ, ತಬಲಾ ಸೋಲೋ ಪ್ರದರ್ಶನ ನೀಡಿ ಗಮನ ಸೆಳೆದರು. ದಿ. ಗಂಗೂಬಾಯಿ ಹಾನಗಲ್ ಅವರ ಶಿಷ್ಯ ಕುಂದಗೋಳದ ಪಂ. ಅಶೋಕ ನಾಡಗೀರ, ಖ್ಯಾತ ಸಿತಾರ್ ವಾದಕ ಶಫೀಕ್ಖಾನ್ ಅವರಿಂದ ಸಿತಾರ ವಾದನ, ಪಟ್ಟಣದ ಯುವ ಕಲಾವಿದ ಪರಶುರಾಮ ಭಜಂತ್ರಿ ಅವರ ಗಾಯನ ಮನಸೂರೆಗೊಂಡಿತು. ಇವರಿಗೆ ಕೃಷ್ಣಕುಮಾರ ಕುಲಕರ್ಣಿ, ಭೀಮಾಶಂಕರ ಬಿದನೂರ ಅವರು ತಬಲಾ ಮತ್ತು ಪ್ರಕಾಶ ಹೆಗಡೆ ಹಾರ್ಮೋನಿಯಂ ಸಾಥ್ ನೀಡಿದರು.