ವಿಜಯಸಾಕ್ಷಿ ಸುದ್ದಿ, ಗದಗ : ಎಸ್ಸಿ, ಎಸ್ಟಿ ಅಲೆಮಾರಿ, ವಿಮುಕ್ತ ಬುಡಕಟ್ಟು ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಮಾ. 15ರಂದು ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಲೆಮಾರಿ ಸಮುದಾಯಗಳ ರಾಜ್ಯಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಆದರ್ಶ ಯಲ್ಲಪ್ಪ ಹೇಳಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ, ಅವಕಾಶ ವಂಚಿತ ಸಮುದಾಯಗಳನ್ನು ಒಟ್ಟುಗೂಡಿಸಿ ಸದೃಢಗೊಳಿಸುವುದು ಸಂಘಟನೆಗ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸರಕಾರದ ಮುಂದೆ ಅನೇಕ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇವೆ ಎಂದರು.
ಅಲೆಮಾರಿ ಸಮುದಾಯಗಳ ಕಲ್ಯಾಣಕ್ಕಾಗಿ ಸರಕಾರಿ ಅಲೆಮಾರಿ ಆಯೋಗ ರಚನೆ ಮಾಡಿದ್ದು, ಕೂಡಲೇ ಆಯೋಗ ಕಾರ್ಯಾರಂಭ ಮಾಡಬೇಕು. ಅಲೆಮಾರಿ ಜನಾಂಗದ ವಸತಿ ರಹಿತರಿಗೆ ಕನಿಷ್ಠ 5 ಲಕ್ಷ ರೂ. ನೆರವು ನೀಡಬೇಕು, ಅಲೆಮಾರಿ ಸಮುದಾಯಗಳ ಕಲೆ, ಸಂಸ್ಕೃತಿ ಉಳವಿಗಾಗಿ ಬೆಂಗಳೂರು ಸುತ್ತಮುತ್ತ 10 ಎಕರೆ ಜಾಗ ನೀಡಬೇಕು. ಅಲೆಮಾರಿ ಸಮುದಾಯಗಳಿಗೆ ಬೇರೆ ಬೇರೆ ರಾಜ್ಯದಲ್ಲಿ ಇರುವಂತೆ ಪ್ರತ್ಯೇಕ ಮೀಸಲಾತಿ ಕಲ್ಪಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಸಮಾವೇಶದ ಮೂಲಕ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಎಚ್. ಮಂಜುನಾಥ ದಾಯತ್ಕರ್, ದುರಗೇಶ ವಿಭೂತಿ, ಕೆ.ಎಚ್. ಬೇಲೂರ, ಸುಮಿತ್ರಾ ಗಂಗಾವತಿ, ಫಕೀರೇಶ ಕಟ್ಟಿಮನಿ, ಯಲ್ಲಪ್ಪ ಡೊಕ್ಕಣ್ಣವರ, ಯಲ್ಲಪ್ಪ ಒಂಟೆತ್ತಿನ, ಹನುಮಂತ ಶಿಳ್ಳೆಕ್ಯಾತರ, ಹನುಮಂತಪ್ಪ ವಿಭೂತಿ ಮುಂತಾದವರಿದ್ದರು.