ವಿಜಯಸಾಕ್ಷಿ ಸುದ್ದಿ, ಗದಗ: ಧರ್ಮ, ಸಂಸ್ಕಾರ, ಸಂಸ್ಕೃತಿ ಹಾಗೂ ನೈತಿಕ ಮೌಲ್ಯಗಳೊಂದಿಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸರ್ವ ಸಮುದಾಯದವರು ಮುಂದಾಗಬೇಕು. ಅಂದಾಗ ಮಾತ್ರ ದೇಶ ಸದೃಢಗೊಳ್ಳುವದು ಎಂದು ಜೈನಮುನಿ, ರಾಷ್ಟ್ರಸಂತ, ಪೂಜ್ಯ ಕಮಲಮುನಿ ಹೇಳಿದರು.
ಅವರು ಶನಿವಾರ ಗದುಗಿನ ವರ್ಧಮಾನ ಸ್ಥಾನಕ ಭವನದಲ್ಲಿ ಜೈನ ಸಮಾಜ ಬಾಂಧವರಿಗೆ ಏರ್ಪಡಿಸಿದ್ದ ಧರ್ಮಬೋಧನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದರು.
ಸದೃಢ ಯುವಕರಿಂದ ಸದೃಢ ಸಮಾಜ, ಸದೃಢ ದೇಶ ನಿರ್ಮಾಣಗೊಳ್ಳುವದು. ಯುವ ಜನಾಂಗ ದುಶ್ಚಟಗಳಿಂದ, ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು. ಪಂಚಸೂತ್ರಗಳಾದ ವೈಚಾರಿಕತೆ, ಧಾರ್ಮಿಕತೆ, ನಶಾಮುಕ್ತ ಸಮಾಜ ನಿರ್ಮಾಣ, ದೇಶಭಕ್ತಿ, ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದರು.
ಗೋವುಗಳನ್ನು ಸಂರಕ್ಷಿಸುವ, ಪೂಜಿಸುವ ಕಾರ್ಯ ನಡೆಯಬೇಕು. ಗೋವುಗಳಿಂದಾಗಿ ಲಭ್ಯವಾಗುವ ಉತ್ಕೃಷ್ಠವಾದ ಹಾಲು, ಮೊಸರು, ಬೆಣ್ಣೆ, ತುಪ್ಪ ನಮ್ಮ ಆರೋಗ್ಯವನ್ನು ಸದೃಢಗೊಳಿಸುವದು ಅಷ್ಟೇ ಅಲ್ಲ ಸಾವಯವ ಕೃಷಿಗೆ ಹೆಚ್ಚು ಅನುಕೂಲವೂ ಇದೆ. ಕೃಷಿ ಪ್ರಧಾನವಾದ ಭಾರತದಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡಬೇಕು. ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಬರಲಿರುವ ದಿನಗಳಲ್ಲಿ ಪರಿಶುದ್ಧ ಆಹಾರಕ್ಕಾಗಿ ಪರಿತಪಿಸುವಂತೆ ಆಗಬಾರದು ಎಂದರು.
ಪರಿಶ್ರಮದ ದುಡಿಮೆಯ ಫಲವು ಉಳಿತಾಯವಾಗಿ ಭವಿಷ್ಯದಲ್ಲಿ ಕಷ್ಟಕಾಲಕ್ಕೆ ಸದ್ವಿನಿಯೋಗ ಆಗಬೇಕು. ಯಾವುದೇ ಕಾರಣಕ್ಕೆ ಅನಾವಶ್ಯಕ ಹಾಗೂ ದುಂದುವೆಚ್ಚ ಬೇಡ. ಆಡಂಬರ ಹಾಗೂ ಐಷಾರಾಮಿ ಜೀವನ, ಅನಾವಶ್ಯಕ ಇಂಧನ ಬಳಕೆ, ವಿದ್ಯುತ್ಚ್ಛಕ್ತಿ ಬಳಕೆ, ಸಿಡಿಮದ್ದು, ಹೋಳಿ ಬಣ್ಣ ಎಂದು ಹಣ ಖರ್ಚು ಮಾಡುವ ಬದಲು ಇದೇ ಹಣವನ್ನು ಮಾನವ ಕಲ್ಯಾಣಕ್ಕಾಗಿ, ಗೋವು ಸಂರಕ್ಷಣೆಗಾಗಿ ಬಳಕೆ ಮಾಡಿ ಎಂದರು.
ಈ ಸಂದರ್ಭದಲ್ಲಿ ಜೈನ ಮುನಿಗಳಾದ ಘನಶ್ಯಾಮ್ಮುನಿ, ಕೌಶಲಮುನಿ, ಅಕ್ಷತ್ಮುನಿ, ಸಕ್ಸಮ್ಮುನಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜೈನ ಸಮಾಜದ ಗುರು-ಹಿರಿಯರು, ಮಹಿಳೆಯರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪ್ಲಾಸ್ಟಿಕ್ ಮತ್ತು ತಂಬಾಕು ಉತ್ಪಾದನಾ ಹಂತದಲ್ಲೇ ನಿಷೇಧಿಸಬೇಕೇ ಹೊರತು ಮಾರುಕಟ್ಟೆಗೆ ಬಂದ ನಂತರ ನಿಷೇಧಿಸುವುದಲ್ಲ. ತಂಬಾಕು, ಗುಟ್ಕಾ, ಧೂಮಪಾನ, ಮದ್ಯಪಾನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಾರಣ ಪಾಲಕ-ಪೋಷಕರು ತಮ್ಮ ಮಕ್ಕಳ ಹವ್ಯಾಸ, ಚಟಗಳನ್ನು ಗಮನಿಸಬೇಕು. ಇಂತಹ ಚಟಗಳಿಂದಾಗಿ ಕೇವಲ ವ್ಯಕ್ತಿಯ ಆರೋಗ್ಯವಷ್ಟೇ ಅಲ್ಲದೆ ಕುಟುಂಬ, ದೇಶದ ಆರೋಗ್ಯ, ಆರ್ಥಿಕತೆಯ ಮೇಲೆಯೂ ಪರಿಣಾಮ ಬೀರುವದು ಎಂದು ಪೂಜ್ಯ ಕಮಲಮುನಿಗಳು ಹೇಳಿದರು.