ವಿಜಯಸಾಕ್ಷಿ ಸುದ್ದಿ, ಕುಕನೂರು : ಪಟ್ಟಣದ ಕನ್ನಡ ಮತ್ತು ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ವತಿಯಿಂದ ವಿದ್ಯಾನಗರದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಗರದ ಚಿಣ್ಣರಿಗಾಗಿ ಸಾಂಸ್ಕೃತಿಕ ಪ್ರತಿಭೋತ್ಸವ ಸೋಮವಾರ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಧರ್ಮಪ್ಪ ನಾಯಕ್ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಉಳಿಕೆ, ಬಳಕೆ ಮತ್ತು ಬೆಳವಣಿಗೆಗೆ ಸ್ಥಳೀಯ ಕನ್ನಡ ಅಭಿವೃದ್ಧಿ ಟ್ರಸ್ಟ್ ಅನೇಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ತಾಲೂಕು, ಜಿಲ್ಲಾ ಮಟ್ಟದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷ ಪ್ರವೀಣ್ ದಾಸ್ ಅವರಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕುರಿತ ಆಚರಣೆ, ಉದ್ದೇಶದ ಬಗ್ಗೆ ವಿವರಿಸಿದರು. ಪಿಎಸ್ಐ ಗುರುರಾಜ್ ಟಿ ಮಕ್ಕಳಿಗೆ ಪ್ರಶಸ್ತಿಪತ್ರ ವಿತರಿಸಿ, ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯೆ ರಾಧಾ ದೊಡ್ಡಮನಿ, ಉಪಾಧ್ಯಕ್ಷ ಪ್ರಶಾಂತ್ ಆರುಬೆರಳಿನ, ಎಸ್ಡಿಎಂಸಿ ಉಪಾಧ್ಯಕ್ಷೆ ಮಮತಾಜ್ ಬೇಗಂ, ಪತ್ರಕರ್ತ ಈರಯ್ಯ ಕುರ್ತಕೋಟಿ, ಚನ್ನಯ್ಯಾ ಹಿರೇಮಠ, ಶಿಕ್ಷಕಿಯರು ಉಪಸ್ಥಿತರಿದ್ದರು. ಶಿಕ್ಷಕಿ ವೀಣಾ ಪ್ರಾರ್ಥಿಸಿದರು. ಸಂಸ್ಥೆಯ ಅಧ್ಯಕ್ಷ ರುದ್ರಪ್ಪ ಭಂಡಾರಿ ಸ್ವಾಗತಿಸಿದರು.