ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಗದಗ-ಡಂಬಳ ತೋಟದಾರ್ಯ ಮಠದ ಲಿಂ.ಡಾ. ತೋಟದ ಸಿದ್ದಲಿಂಗ ಶ್ರೀಗಳ ೭೫ನೇ ಜಯಂತಿಯ ದಿನವನ್ನು `ಭಾವೈಕ್ಯತಾ ದಿನ’ ಎಂದು ಆಚರಿಸದಂತೆ ಶಿರಹಟ್ಟಿಯ ಶ್ರೀ ಜ.ಫಕೀರೇಶ್ವರ ಭಾವೈಕ್ಯತಾ ಪೀಠದ ಸದ್ಭಕ್ತರು ಸೋಮವಾರ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ, ಗೃಹಮಂತ್ರಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮಠದ ಭಕ್ತರು, ೫೦೦ ವರ್ಷಗಳ ಭಾವೈಕ್ಯತಾ ಪರಂಪರೆಯ ಇತಿಹಾಸವನ್ನು ಹೊಂದಿದ ಶ್ರೀ ಜ.ಫಕೀರೇಶ್ವರ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಕರ್ತೃ ಶ್ರೀ ಜ.ಫಕೀರೇಶ್ವರರಿಗೆ ಮಾತ್ರ ಅನ್ವಯಿಸುವ ಭಾವೈಕ್ಯತೆಯ ಹರಿಕಾರ ಎಂಬ ವಿಶೇಷಣ ಪದವನ್ನು ಲಿಂ.ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿಗಳಿಗೆ ಅನ್ವಯಿಸಿ ಅವರ ೭೫ನೇ ಜಯಂತಿ ದಿನವಾದ ಫೆ.೨೧ರಂದು `ಭಾವೈಕ್ಯತೆಯ ದಿನ’ ಎಂಚ ಆಚರಣೆ ಮಾಡುತ್ತಿರುವ ಗದುಗಿನ ಶ್ರೀ ತೋಂಟದಾರ್ಯ ಮಠದ ಕಾರ್ಯಕ್ರಮವನ್ನು ಶಿರಹಟ್ಟಿಯ ಶ್ರೀ ಜ.ಫ.ಸಂಸ್ಥಾನ ಮಠದ ಸದ್ಭಕ್ತರು ಬಲವಾಗಿ ಖಂಡಿಸುತ್ತೇವೆ. ಅದು ನಮ್ಮ ಸ್ವಾಭಿಮಾನವೂ ಹೌದು.
ಶ್ರೀ ಮಠದ ಹಿರಿಯ ಶ್ರೀಗಳ ಅಪ್ಪಣೆಯ ಮೇರೆಗೆ ಉತ್ತರಾಧಿಕಾರಿ ಜ.ಫ.ದಿಂಗಾಲೇಶ್ವರ ಶ್ರೀಗಳು ಈ ವಿಷಯವನ್ನು ಗದುಗಿನ ಶ್ರೀ ತೋಟದಾರ್ಯ ಮಠದ ಆಡಳಿತಾಧಿಕಾರಿಗಳಿಗೆ ದೂರವಾಣಿ ಮೂಲಕ ಗಮನಕ್ಕೆ ತಂದಿದ್ದರೂ ಕೂಡಾ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಭಾವೈಕ್ಯತಾ ಪದ ಬಳಕೆ ಬಿಟ್ಟು ಉಳಿದಂತೆ ೭೫ನೇ ಜಯಂತ್ಯುತ್ಸವ ಗದಗನ ತೋಂಟದಾರ್ಯ ಮಠದವರು ವಿಜೃಂಭಣೆಯಿAದ ಆಚರಿಸಲು ನಮ್ಮ ಯಾವುದೇ ತಕರಾರು ಇಲ್ಲ. ಇದಕ್ಕೆ ತೋಂಟದಾರ್ಯ ಮಠದವರು ಒಪ್ಪಿ ಪತ್ರಿಕಾ ಹೇಳಿಕೆ ನೀಡಿ ಶಿರಹಟ್ಟಿ ಜಗದ್ಗುರುಗಳಿಗೆ ಮೀಸಲಾಗಿರುವ ಭಾವೈಕ್ಯತೆಯ ಹರಿಕಾರ ಎಂಬ ಪದವನ್ನು ತಾವು ಉಪಯೋಗಿಸಿಕೊಂಡು ಆ ದಿನವನ್ನು ಭಾವೈಕ್ಯತಾ ದಿನ ಎಂದು ಆಚರಿಸಲು ಮುಂದಾದರೆ ನಾವೂ ಅದನ್ನು ಕರ್ತೃಗಳ ಸಾಕ್ಷಿಯಾಗಿ ಉಗ್ರವಾಗಿ ಪ್ರತಿಭಟಿಸುತ್ತೇವೆ ಎಂದರು.
ಭಾವೈಕ್ಯತಾ ದಿನ ಪದ ಬಳಸಿ ಆಚರಿಸುವ ಕಾರ್ಯಕ್ರಮದ ಆಚರಣೆ ಶಿರಹಟ್ಟಿ ಶ್ರೀಮಠದ ಹಾಗೂ ಶ್ರೀಮಠದ ಭಕ್ತರ ಪಾಲಿಗೆ ಕರಾಳ ದಿನವಾಗಲಿದೆ. ಫೆ.೨೧ರ ಬುಧವಾರ ಮುಂಜಾನೆ ೭ ಗಂಟೆಗೆ ಗದುಗಿನಲ್ಲಿ ಬನ್ನಿಕಟ್ಟಿ ಸಮೀಪದಲ್ಲಿರುವ ಶ್ರೀ ಜ.ಫ.ಭಾವೈಕ್ಯತಾ ಸಂಸ್ಥಾನ ಪೀಠದ ಶಾಖಾ ಮಠದಲ್ಲಿ ಗದ್ದುಗೆ ಪೂಜೆ ನೆರವೇರಿಸಿ, ಕರಾಳ ದಿನಾಚರಣೆ ಅಂಗವಾಗಿ ಬನ್ನಿಕಟ್ಟಿಯಿಂದ ಪಂಚರ ಹೊಂಡ, ಟಾಂಗಾಕೂಟ ಮಾರ್ಗವಾಗಿ ಗಾಂಧಿ ವೃತ್ತದವರೆಗೆ ಮೋಟಾರ್ ಬೈಕ್ ರ್ಯಾಲಿ ಹಾಗೂ ಪಥಸಂಚಲನ ನಡೆಸಿ ತೋಟದಾರ್ಯ ರಥ ಬೀದಿಯಲ್ಲಿ ಸಾರ್ವಜನಿಕ ಸಭೆ ಆಯೋಜಿಸಿ ಶ್ರೀ ಜ.ಫ.ಮುಕುಟಪ್ರಾಯ ಭಾವೈಕ್ಯತೆ ಎಂಬ ಪದವನ್ನು ನಮ್ಮಿಂದ ಕಸಿದುಕೊಳ್ಳಲು ಯತ್ತಿಸುವುದರಿಂದ ನಮಗಾಗಿರುವ ನೋವನ್ನು ಸಾರ್ವಜನಿಕರ ಮತ್ತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಮನವಿಯಲ್ಲಿ ಭಕ್ತರು ತಿಳಿಸಿದರು.
ಈ ಸಂದರ್ಭದಲ್ಲಿ ಚಂದ್ರಕಾಂತ ನೂರಶೆಟ್ಟರ, ಎನ್.ಆರ್. ಕುಲಕರ್ಣಿ, ಎಂ.ಕೆ. ಲಮಾಣಿ, ಸಂದೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ, ನಾಗರಾಜ ಲಕ್ಕುಂಡಿ, ಎಂ.ಸಿ. ಹಿರೇಮಠ, ಶಿವನಗೌಡ ಪಾಟೀಲ, ಪರಮೇಶ ಪರಬ, ಅಶೋಕ ವರವಿ, ಸಂದೇಶ ಗಾಣಿಗೇರ, ಹೊನ್ನಪ್ಪ ಶಿರಹಟ್ಟಿ, ಮಹಾಂತೇಶ ದಶಮನಿ, ವೀರಣ್ಣ ಅಂಗಡಿ, ಮುತ್ತು ಬಡಿಗೇರ, ಬಸವಣ್ಣೆಪ್ಪ ತುಳಿ, ಬಸವರಾಜ ಚಿಕ್ಕತೋಟದ, ಪುಲಿಕೇಶಿ ಸ್ವಾಮಿ, ಮಂಜುನಾಥ ಹುಬ್ಬಳ್ಳಿ, ಅಕ್ಬರಸಾಬ ಯಾದಗಿರಿ, ಕೃಷ್ಣಾ ಕಲಬುರ್ಗಿ, ಶ್ರೀನಿವಾಸ ಬಾರಬಾರ, ಜಗದೀಶ ಇಟ್ಟೇಕಾರ, ರಿಯಾಜ ತಹಸೀಲ್ದಾರ ಮುಂತಾದವರು ಉಪಸ್ಥಿತರಿದ್ದರು.
ಲಿಂ.ತೋಟದ ಶ್ರೀಗಳು ತಮ್ಮ ಜೀವಿತಾವಧಿಯಲ್ಲಿ ಅನೇಕ ಧಾರ್ಮಿಕ ಸಮಾರಂಭಗಳಲ್ಲಿ ಶಿರಹಟ್ಟಿ ಮಠದ ಪೂಜ್ಯ ಕರ್ತೃಗಳನ್ನು ಭಾವೈಕ್ಯತೆಯ ಹರಿಕಾರರೆಂದು ಸಂಭೋಧಿಸಿರುವುದು ಅವರ ಪ್ರವಚನ ಪ್ರಿಯರಾದ ನಮ್ಮ ಕಿವಿಗಳಲ್ಲಿ ಇಂದಿಗೂ ಮಾರ್ದನಿಸುತ್ತಿವೆ. ವಸ್ತುಸ್ಥಿತಿ ಹೀಗಿರುವಾಗ, ಸದ್ಯ ಗದುಗಿನ ತೋಂಟದಾರ್ಯ ಮಠದ ಪೂಜ್ಯರು ಹಾಗೂ ಆಡಳಿತಗಾರರು ಭಾವೈಕ್ಯತೆಯ ಹರಿಕಾರರೆಂಬ ಪದವನ್ನು ಪೂಜ್ಯ ಲಿಂ.ತೋAಟದ ಸಿದ್ದಲಿಂಗ ಶ್ರೀಗಳಿಗೆ ಅನ್ವಯಿಸಿ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿರುವುದು ಲಿಂ.ಶ್ರೀಗಳ ಭಾವನೆಗಳಿಗೆ ಅಪಚಾರ ಮಾಡಿದಂತೆ ಭಾಸವಾಗುತ್ತದೆ ಎಂದು ಭಕ್ತರು ಹೇಳಿದರು.