ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗುರು-ಲಿಂಗ-ಜಗಮ ಈ ಮೂರಕ್ಕೂ ಹೆಚ್ಚಿನ ಮಹತ್ವ ಸಿಗಬೇಕೆಂದರೆ ಅದಕ್ಕೆ ಭಕ್ತನೇ ಮೂಲ ಕಾರಣ. ಭಕ್ತನಿಲ್ಲದೆ ಈ ಮೂರಕ್ಕೂ ಯಾವ ಅರ್ಥವೂ ಇಲ್ಲ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ನರೇಗಲ್ಲ ಸಮೀಪದ ಅಬ್ಬಿಗೆರೆ ಗ್ರಾಮದ ಹಿರೇಮಠದಲ್ಲಿ ಲಿಂಗ ಸೋಮೇಶಖರ ಶಿವಾಚಾರ್ಯರ 5ನೇ ಪುಣ್ಯ ಸ್ಮರಣೋತ್ಸವದ ನಿಮಿತ್ತ ನಡೆದಿರುವ ಪ್ರವಚನದಲ್ಲಿ ಅವರು ಭಕ್ತನ ಕರ್ತವ್ಯ ಕುರಿತು ಪ್ರವಚನ ನೀಡಿದರು.
ಭಕ್ತನೆಂದರೆ ಯಾರು ಎಂಬುದನ್ನು ಮೊದಲು ತಿಳಿಯಬೇಕು. ಊದು ಬತ್ತಿ ಹಿಡಿದುಕೊಂಡು, ತೆಂಗಿನಕಾಯಿ ತೆಗೆದುಕೊಂಡು, ವಿಭೂತಿ ಬಳಸಿ ಕುಡಿಗುಂಡಾರಗಳಿಗೆ ತಿರುಗಾಡುವವನು ಭಕ್ತನಲ್ಲ. ನಿಜವಾದ ಭಕ್ತನೆಂದರೆ ಯಾರು ಗುರು-ಲಿಂಗ-ಜಗಮನನ್ನು ಮನಸಾರೆ ಸೇವಿಸುವವನು ಅವನೇ ನಿಜವಾದ ಭಕ್ತ. ಇಂತಹ ಭಕ್ತರು ನೀವಾಗಬೇಕಾದರೆ ಶರಣರ ಕುರಿತ ಪ್ರವಚನ ಆಲಿಸಿ ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕೆಂದು ತಿಳಿಸಿದರು.
ಭಕ್ತ ದೇವರಿಗಿಂತಲೂ ದೊಡ್ಡವ ಮತ್ತು ಶ್ರೇಷ್ಠ. ಅಂತಹ ಭಕ್ತ ದೇವರಿಗೇ ಸವಾಲು ಹಾಕುವಷ್ಟು ಪ್ರಭಾವಿಯಾಗಿರುತ್ತಾರೆ. ದೇವರೂ ಸಹ ನಂಬಿದ ಭಕ್ತರನ್ನು ಎಂದಿಗೂ ಕೈ ಬಿಡುವುದಿಲ್ಲ. ಅವರು ಹೇಳಿದ ಕೆಲಸಗಳನ್ನೆಲ್ಲ ಮಾಡುತ್ತಾನೆ ಎಂದರು.
ಸೆ. 15ರಂದು ನಡೆಯುವ ಬಾಳೆಹೊನ್ನೂರು ಪೀಠದ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಭಗವತ್ಪಾದರ ಇಷ್ಟಲಿಂಗಪೂಜೆ ಹಾಗೂ ಧರ್ಮಸಭೆ ಸಮಾರಂಭಕ್ಕೆ ಬನ್ನಿಕಟ್ಟಿ ಓಣಿಯ ಮಹಿಳೆಯರು ರೇಣುಕರ ರೊಟ್ಟಿಬುತ್ತಿ ಪ್ರಸಾದ ತಂದು ತಮ್ಮ ಭಕ್ತಿ ಪ್ರಸಾದವನ್ನು ಮಠಕ್ಕೆ ಸಮರ್ಪಿಸಿದರು. ಬಸವರಾಜ ಹನಮನಾಳ ಹಾಗೂ ಶಿವಾನಂದ ಕಮ್ಮಾರ ಸಂಗೀತ ಸೇವೆ ಸಲ್ಲಿಸಿದರು. ಡಾ. ಆರ್.ಕೆ. ಗಚ್ಚಿನಮಠ, ಚಿತ್ರದುರ್ಗದ ಹಾಸ್ಯ ಸಾಹಿತಿ ಪಿ.ಜಗನ್ನಾಥ್, ಅಬ್ಬಿಗೆರೆ ಗ್ರಾಮದ ಗಣ್ಯರು ಉಪಸ್ಥಿತರಿದ್ದರು. ಅಂದಪ್ಪ ವೀರಾಪೂರ ನಿರ್ವಹಿಸಿದರು.


