ಮಂಗಳೂರು: ಶ್ರೀ ಪಂಚಲಿಂಗೇಶ್ವರ ದೇವರ ರಥೋತ್ಸವದ ವೇಳೆ ಡ್ರೋನ್ ಹಾರಿಸಿ ಹುಚ್ಚಾಟ ಮೆರೆಯಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನಲ್ಲಿರುವ ವಿಟ್ಲದಲ್ಲಿ ನಡೆದಿದೆ. ನಿಯಂತ್ರಣ ತಪ್ಪಿದ ಡ್ರೋನ್ ಉತ್ಸವ ಮೂರ್ತಿಗೆ ಬಡಿದು ಸಹಾಯಕ ಅರ್ಚಕರ ಮೇಲೆ ಬಿದ್ದಿದೆ.
ತಕ್ಷಣ ಎಚ್ಚೆತ್ತ ಸಹಾಯಕ ಅರ್ಚಕರು ಡ್ರೋನ್ ಅನ್ನು ಕಾಲಿನಿಂದ ಒದ್ದು ಕೆಳಗೆ ಹಾಕಿದ್ದಾರೆ. ಒಮ್ಮೆಗೆ ಈ ಘಟನೆಯಿಂದ ದೇವರ ಮೂರ್ತಿ ಹೊತ್ತ ಅರ್ಚಕರು ತಬ್ಬಿಬ್ಬಾಗಿದ್ದಾರೆ. ಅವರು ಕೊಂಚ ನಿಯಂತ್ರಣ ತಪ್ಪಿದ್ದರೂ ದೇವರ ಉತ್ಸವ ಮೂರ್ತಿ ಸಹಿತ ಅವರೂ ಕೆಳಕ್ಕೆ ಬೀಳುತ್ತಿದ್ದರು.
ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.ಡ್ರೋನ್ ಅಪರೇಟರ್ ಹುಚ್ಚಾಟದ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.



