ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರಿನ ಬೆಳೆಹಾನಿಯಿಂದ ಸಂಕಷ್ಟದ ನಡುವೆಯೂ ರೈತರೂ ಸೇರಿದಂತೆ ಜನಸಮುದಾಯವೆಲ್ಲ ಬುಧವಾರ ಸಂಕಷ್ಟ ನಿವಾರಕ, ವಿಘ್ನನಾಶಕನ ಗಣೇಶ ಚತುರ್ಥಿ ಹಬ್ಬವನ್ನು ಸಾಂಪ್ರದಾಯದಂತೆ ಸಂಭ್ರಮದಿಂದಲೇ ಆಚರಿಸಿದರು.
ಲಕ್ಷ್ಮೇಶ್ವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಣಪತಿ ಮೂರ್ತಿಯನ್ನು ಸಡಗರ ಸಂಭ್ರಮದಿಂದ ಬರಮಾಡಿಕೊಂಡು ಶೃದ್ಧಾ ಭಕ್ತಿಯಿಂದ ಪ್ರತಿಷ್ಠಾಪಿಸಲಾಯಿತು. ಶಿಗ್ಲಿ, ಆದರಹಳ್ಳಿ, ಸೂರಣಗಿ, ಬಾಲೆಹೊಸೂರು, ರಾಮಗೇರಿ ಗ್ರಾಮಗಳಲ್ಲಿ ಗೌರಿಗಣೇಶನ ಹಬ್ಬ ಕಳೆಗಟ್ಟಿತ್ತು. ತಾಲೂಕಿನ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆಯ ಮಕ್ಕಳು ಜನಪದ ಹಾಡುಗಳಿಗೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯುತ್ತ ಗಣೇಶನನ್ನು ಮೆರವಣಿಗೆ ಮೂಲಕ ಶಾಲೆಗೆ ಕರೆತಂದರು. ಬೆಲೆ ಏರಿಕೆಯ ನಡುವೆಯೂ ಹಬ್ಬಕ್ಕಾಗಿ ಪಟ್ಟಣದ ಮಾರ್ಕೆಟ್ನಲ್ಲಿ ಗಣೇಶ ಮೂರ್ತಿ, ಹೂವು, ಹಣ್ಣು, ತಳಿರು-ತೋರಣ, ದಿನಸಿ, ಪಟಾಕಿ, ಅಲಂಕಾರಿಕ ಮತ್ತು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಕಂಡು ಬಂದಿತು.
ಬಹುತೇಕ ಸಾರ್ವಜನಿಕರು ಈ ವರ್ಷ ತಮ್ಮ ಮನೆಯಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಿದ್ದು ಕಂಡುಬಂದಿತು. ಸಾರ್ವಜನಿಕ ಗಣೇಶೋತ್ಸವ ಸಂಘಟನೆಯವರು ನಾ ಮುಂದು ತಾ ಮುಂದು ಎಂಬಂತೆ ಅಬ್ಬರದ ಡಿಜೆ ಸೌಂಡ್ನೊಂದಿಗೆ ಗಣೇಶ ಪ್ರತಿಷ್ಠಾಪನೆ ಮಾಡಿದರು.
ಲಕ್ಷ್ಮೇಶ್ವರದ ಭಾನು ಮಾರ್ಕೆಟ್, ತೇರಿನ ಮನೆ ಆವರಣ, ರಾಘವೇಂದ್ರ ಸ್ವಾಮಿಗಳ ಮಠ, ಹಳ್ಳದಕೇರಿ, ಡಾ. ಬಿ.ಆರ್. ಅಂಬೇಡ್ಕರ್ ನಗರ, ಸೊಪ್ಪಿನಕೇರಿ, ಕದರಗೇರಿ ಸೇರಿ 21 ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್ ಮೂರ್ತಿಗಳನ್ನು ಮೆರವಣಿಗೆ ಮೂಲಕ ಕರೆತಂದು ಪ್ರತಿಷ್ಠಾಪಿಸಲಾಯಿತು. ಗುರುವಾರ ಗಣಪನ ವಾಹನವಾದ ಮೂಷಿಕನ ಪೂಜೆ ನಡೆಯಿತು. ಎಲ್ಲರ ಮನೆಗಳಲ್ಲಿ ಕರಿಗೆಡುಬು ಸಿದ್ಧಪಡಿಸಿ ಇಲಿಗೆ ನೈವೇದ್ಯ ಮಾಡಲಾಯಿತು.