ಬಳ್ಳಾರಿ: ಭಗ್ನ ಪ್ರೇಮಿಯಿಂದ ಯುವತಿ ಮತ್ತವರ ಮನೆಯವರ ಮೇಲೆ ಹಲ್ಲೆ ಮಾಡಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಡೂರಿನ ಚರ್ಚ್ ಶಾಲೆ ರಸ್ತೆಯಲ್ಲಿ ನಡೆದಿದೆ. ಹೊಸಪೇಟೆ ತಾಲೂಕಿನ ಪಿ.ಕೆ.ಹಳ್ಳಿ ಮೂಲದ ನವೀನಕುಮಾರ್ ಹಲ್ಲೆ ಆತ್ಮಹತ್ಯೆ ಮಾಡಿಕೊಂಡಿರುವಾತನಾಗಿದ್ದು,
ಪ್ರೇಯಸಿ ಸೇರಿ ಕುಟುಂಬದ ಮೂವರ ಮೇಲೆ ಪ್ರೇಮಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಯುವತಿ ಮತ್ತವರ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯುವತಿಯ ಅಣ್ಣನಿಗೆ ಬಲವಾಗಿ ಮಚ್ಚಿನೇಟು ಬಿದ್ದಿದೆ. ಚಿಕಿತ್ಸೆಗಾಗಿ ಮೂವರನ್ನೂ ತೋರಣಗಲ್ಲು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯುವತಿ ಮತ್ತು ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ಬಳಿಕ ಆರೋಪಿ ನವೀನ್ ಕುಮಾರ್ ಯಶವಂತನಗರದ ಗಂಡಿ ಮಲಿಯಮ್ಮ ದೇಗುಲದ ಬಳಿ ಕಾರು ಬಿಟ್ಟು ಹೋಗಿದ್ದ. ಕಾರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ಆದರೆ ಇಂದು ಬೆಳಗಿನ ಜಾವ ಆರೋಪಿ ಯಶವಂತ ನಗರ ಬಳಿಯ ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯುವತಿ ಕೀರ್ತಿ ಮತ್ತು ಆರೋಪಿ ನವೀನ್ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬಾಳೆಹಣ್ಣು ವ್ಯಾಪಾರ ಮಾಡ್ತಿದ್ದ ನವೀನ್ ಮತ್ತು ಕೀರ್ತಿ ಕಾಲೇಜು ಓದುವಾಗಲೇ ಪ್ರೇಮಾಂಕುರವಾಗಿತ್ತು..ಎಂಸಿಎ ಓದುವ ಹಿನ್ನೆಲೆ ಪ್ರೀತಿ ಪ್ರೇಮಕ್ಕೆ ಬ್ರೇಕ್ ಹಾಕೋದಾಗಿ ಹೇಳಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ನವೀನ್ ಸಂಡೂರಿಗೆ ಬಂದು ಪ್ರೇಯಸಿ ಮನೆಯ ಮುಂದೆ ಗಲಾಟೆ ಮಾಡಿದ್ದಾನೆ.
ಈ ವೇಳೆ ಗಲಾಟೆ ನಡೆದು ಯುವತಿ ಮತ್ತವರ ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ಬಿಡಿಸಲು ಬಂದ ಪ್ರೇಯಸಿಯ ಸಹೋದರನ ಮೇಲೂ ಮಚ್ಚು ಬೀಸಿದ್ದಾನೆ. ಗಲಾಟೆ ಜೋರಾಗುತ್ತಿದ್ದಂತೆ ಅಲ್ಲಿಂದ ಓಡಿ ಹೋಗಿದ್ದ ನವೀನ್. ಬಳಿಕ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.